ಖರ್ಚು ಹೆಚ್ಚು, ಸಾಕಷ್ಟು ಸಾಲ ಮಾಡಿಕೊಂಡಿದ್ದೇನೆ: ದರ್ಶನ್
ನಟ ದರ್ಶನ್ ಅವರು ಕನ್ನಡದ ಪಕ್ಕಾ ಪೈಸಾ ವಸೂಲ್ ನಟ. ಅವರ ಸಿನಿಮಾಗಳು ಕೆಲವೇ ದಿನಗಳಲ್ಲಿ ಕೋಟ್ಯಂತರ ಹಣ ಗಳಿಸುತ್ತವೆ. ಸಿನಿಮಾ ಬಿಡುಗಡೆಗೆ ಮುಂಚೆಯೇ ನಿರ್ಮಾಪಕರನ್ನು ಸೇಫ್ ಮಾಡಿಬಿಡುವ ನಟ ದರ್ಶನ್.
ಕನ್ನಡ ಸಿನಿಮಾರಂಗದಲ್ಲಿ ದರ್ಶನ್ ಅವರ ಸಂಭಾವನೆ ಅತಿ ಹೆಚ್ಚು ಎನ್ನಲಾಗುತ್ತದೆ. ಅವರ ಕಾಲ್ಶೀಟ್ಗಾಗಿ ವರ್ಷಾನುಗಟ್ಟಲೆ ಕಾಯುವ ನಿರ್ಮಾಪಕರಿದ್ದಾರೆ. ಅವರು ಹೂ ಎಂದರೆ ಪೂರ್ಣ ಸಂಭಾವನೆಯನ್ನು ಮೊದಲೇ ಕೊಟ್ಟು ಕಾಲ್ಶೀಟ್ ಪಡೆಯಲು ಸಹ ನಿರ್ಮಾಪಕರು ರೆಡಿ ಇದ್ದಾರೆ.
ದರ್ಶನ್ ಅವರ ಬಳಿ ಹಲವಾರು ಐಶಾರಾಮಿ ಕಾರುಗಳು, ಬೈಕ್ಗಳಿವೆ. ಲಕ್ಷಾಂತರ ಮೌಲ್ಯದ ಕುದುರೆ, ಸಾಕು ಪ್ರಾಣಿಗಳು. ಫಾರ್ಮ್ಹೌಸ್ಗಳು ಹೀಗೆ ಹಲವು ಆಸ್ತಿಗಳನ್ನು ಸಹ ಹೊಂದಿದ್ದಾರೆ. ಇದು ಸಹಜವೂ ಹೌದು. ಆದರೆ ನಟ ದರ್ಶನ್ ಅವರಿಗೆ ಸಾಲಗಳೂ ಹೆಚ್ಚಿಗೆ ಇವೆಯಂತೆ!
ಹೌದು, ನಟ ದರ್ಶನ್ ಅವರು ಕನ್ನಡದ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಚುಟುಕಾಗಿ ಮಾತನಾಡಿದ್ದಾರೆ.

ಜನರು ಆದಾಯವಿಲ್ಲದೆ ಕಂಗಾಲಾಗಿದ್ದರು: ದರ್ಶನ್
ಕೊರೊನಾ ಜನರಿಗೆ ತಂದಿಟ್ಟ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾ, ಜನರಿಗೆ ಗಳಿಕೆ ಎಂಬುದೇ ಹೊರಟುಹೋಗಿತ್ತು. ಆದಾಯವೇ ಇಲ್ಲದೆ ಜನ ಕಂಗಾಲಾಗಿದ್ದರು. ಈಗ ವ್ಯಾಕ್ಸಿನ್ ಎಲ್ಲ ಬಂದಿದೆ, ಜನರೂ ಬೇಸತ್ತಿದ್ದಾರೆ. ಈಗ ಅವರನ್ನು ಬಿಡಬೇಕು, ಮತ್ತೆ ನಿಮ್ಮ ಕಾಯಕದಲ್ಲಿ ತೊಡಗಿಕೊಂಡು ಸಂಪಾದನೆ ಮಾಡಿಕೊಳ್ಳಿ ಎಂದು ಹೇಳಬೇಕು ಎಂದಿದ್ದಾರೆ ದರ್ಶನ್.

'ನನಗಾಗಿ ದುಡಿಯುವ ಸಿಬ್ಬಂದಿ ಇದ್ದಾರೆ, ಅವರನ್ನು ನಾನು ನೋಡಿಕೊಳ್ಳಬೇಕು'
ತಮ್ಮ ಕೊರೊನಾ ಅನುಭವದ ಬಗ್ಗೆ ಮಾತನಾಡಿದ ದರ್ಶನ್, ನನ್ನದೇನು ಫ್ಯಾಕ್ಟರಿ ಇಲ್ಲ, ಫ್ಯಾಕ್ಟರಿ ಮುಚ್ಚಿ ಎಲ್ಲರನ್ನೂ ಮನೆಗೆ ಕಳಿಸಿ ಉತ್ಪಾದನೆ ಇಲ್ಲ ಹಾಗಾಗಿ ಸಂಬಳವಿಲ್ಲ ಎಂದು ನಾನು ಹೇಳಲು ಆಗುವುದಿಲ್ಲ. ನನ್ನನ್ನು ನಂಬಿಕೊಂಡು ವರ್ಷಗಳಿಂದ ನನ್ನ ಖಾಸಗಿ ಸಿಬ್ಬಂದಿ ಇದ್ದಾರೆ ಅವರಿಗೆ ನಾನು ಸಂಬಳ ಕೊಡಲೇಬೇಕಾಗಿತ್ತು. ಅವರಿಗೂ ಕುಟುಂಬವಿದೆ, ಅವರಿಗೂ ಅವಶ್ಯಕತೆ ಇದೆ, ನನಗಾಗಿ ಸಾಕಷ್ಟು ದುಡಿಯುತ್ತಿದ್ದಾರೆ ಅವರು, ಹಾಗಾಗಿ ನಾನು ಎಲ್ಲರಿಗೂ ಸಂಬಳಗಳನ್ನು ಕೊಡಲೇ ಬೇಕು, ಕೊಟ್ಟಿದ್ದೇನೆ ಎಂದಿದ್ದಾರೆ ದರ್ಶನ್.

ಸಾಕಷ್ಟು ಸಾಲ ಮಾಡಿಕೊಂಡಿದ್ದೇನೆ: ದರ್ಶನ್
'ದರ್ಶನ್ ಅವರಿಗೆ ಸಾಲಗಳಿಲ್ಲ ತಾನೆ?' ಎಂಬ ಪ್ರಶ್ನೆಗೆ ಖಂಡಿತ ಇದೆ. ಸಾಕಷ್ಟು ಸಾಲವೇ ನನ್ನ ಮೇಲಿದೆ. ಬೇಕಿದ್ದರೆ ನನ್ನ ಬ್ಯಾಂಕ್ ಸ್ಟೇಟ್ಮೆಂಟ್ ತೆಗೆದು ನೋಡಿ. ನಾನೂ ಸಹ ಸಾಲ ಮಾಡಿಕೊಂಡಿದ್ದೇನೆ' ಎಂದರು. ಆದರೆ ಎಷ್ಟು ಸಾಲವಿದೆ, ಯಾವುದಕ್ಕಾಗಿ ಸಾಲ ಮಾಡಿಕೊಂಡಿದ್ದಾರೆ ಎಂಬುದನ್ನು ಹೇಳಲಿಲ್ಲ ದರ್ಶನ್.
Recommended Video

ಮಾರ್ಚ್ 11 ಕ್ಕೆ ಸಿನಿಮಾ ಬಿಡುಗಡೆ
ದರ್ಶನ್ ಅವರ ರಾಬರ್ಟ್ ಸಿನಿಮಾ ಮಾರ್ಚ್ 11 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ದರ್ಶನ್ ಜೊತೆಗೆ ಆಶಾ ಭಟ್ ನಾಯಕಿಯಾಗಿ ನಟಿಸಿದ್ದಾರೆ. ವಿನೋದ್ ಪ್ರಭಾಕರ್, ಜಗಪತಿ ಬಾಬು, ರವಿಶಂಕರ್, ಚಿಕ್ಕಣ್ಣ, ಧರ್ಮಣ್ಣ ಅವರುಗಳು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶಿಸಿದ್ದ ಉಮಾಪತಿ ಶ್ರೀನಿಮಾಸ್ ನಿರ್ಮಾಣ ಮಾಡಿದ್ದಾರೆ.


Click it and Unblock the Notifications











