ಅದ್ಧೂರಿಯಾಗಿ ಆರಂಭಗೊಂಡ ಭಾರತೀಯ ಪನೋರಮಾ ಸಿನಿಹಬ್ಬ
ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಮಂತ್ರಾಲಯ, ಚಲನಚಿತ್ರೋತ್ಸವ ನಿರ್ದೇಶನಾಲಯ, ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿಗಳ ಸಂಯುಕ್ತಾಶ್ರಯದಲ್ಲಿ ಮಾರ್ಚ್ 17ರಿಂದ 20ರವರೆಗೆ ಬೆಂಗಳೂರಿನಲ್ಲಿ 'ಭಾರತೀಯ ಪನೋರಮಾ ಚಲನ ಚಿತ್ರೋತ್ಸವವನ್ನು ಏರ್ಪಡಿಸಲಾಗಿದೆ.
ಪನೋರಮಾ ಚಲನಚಿತ್ರೋತ್ಸವದ ಉದ್ಫಾಟನಾ ಸಮಾರಂಭವು ಮಾರ್ಚ್ 17ರಂದು ಸಂಜೆ 5ಘಂಟೆಗೆ ಬೆಂಗಳೂರಿನ ವಸಂತ ನಗರದ ಮಿಲ್ಲರ್ಸ್ ರಸ್ತೆಯ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ನೆರವೇರಲಿದೆ.[ಕನ್ನಡ ಚಲನಚಿತ್ರ ಸಿಂಹಾವಲೋಕನ: ಸಾಧಕರಿಗೆ ಸನ್ಮಾನ]

ಕರ್ನಾಟಕ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್ ಅವರು ಭಾರತೀಯ ಪನೋರಮಾ ಚಲನ ಚಿತ್ರೋತ್ಸವವನ್ನು ಉದ್ಫಾಟಿಸಲಿದ್ದು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಸಮಾರಂಭದ ಮುಖ್ಯ ಅತಿಥಿಗಳಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಮಂತ್ರಾಲಯ ಹಾಗೂ ಚಲನ ಚಿತ್ರೋತ್ಸವ ನಿರ್ದೇಶನಾಲಯದ ನಿರ್ದೇಶಕ ಸೆಂಥಿಲ್ ರಾಜನ್, ಕನ್ನಡ ಚಿತ್ರರಂಗದ ಹಿರಿಯ ಕಲಾವಿದರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಜಯಮಾಲ, ರಾಜ್ಯ ಸಾರ್ವಜನಿಕ ಮತ್ತು ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್.ಆರ್. ವಿಶುಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ. ರಾ. ಗೋವಿಂದು, ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತ ನಟಿ ಲಕ್ಷ್ಮೀ ಗೋಪಾಲಸ್ವಾಮಿ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಟ ಸಂಚಾರಿ ವಿಜಯ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ.[ಬೆಳ್ಳಿ ಸಿನಿಮಾದಲ್ಲಿ 'ರಂಗಿತರಂಗ' ತಂಡದ ಬೆಳ್ಳಿ ಮಾತು]

ಮೊದಲು ಸಿನಿಹಬ್ಬ ಕಾರ್ಯಕ್ರಮದ ಉದ್ಫಾಟನಾ ಚಲನಚಿತ್ರವಾಗಿ ನಿರ್ದೇಶಕ ಜಯರಾಜ್ ಅವರ ಮಲೆಯಾಳಂ ಚಿತ್ರ "ಒತ್ತಾಳ್" ಚಲನಚಿತ್ರದ ಪ್ರದರ್ಶನ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿ ಇರುವವರು ಈ ಸಿನಿಹಬ್ಬದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ದೂರವಾಣಿ ಸಂಖ್ಯೆ 080-22133410 ಮೂಲಕ ಪಡೆಯಬಹುದಾಗಿದೆ. ಪ್ರವೇಶ ಉಚಿತವಾಗಿದೆ.


Click it and Unblock the Notifications











