ನನ್ನದು ಏಕಾಂಗಿ ಹೋರಾಟ, ಯಾವುದೇ ರಾಜಕೀಯ ಇಲ್ಲ- ಇಂದ್ರಜಿತ್ ಲಂಕೇಶ್
'ನನ್ನದು ಏಕಾಂಗಿ ಹೋರಾಟ, ಇದರಲ್ಲಿ ಯಾವುದೇ ರಾಜಕೀಯ ಇಲ್ಲ' ಎಂದು ಪತ್ರಕರ್ತ ಮತ್ತು ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು (ಜುಲೈ 16) ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
"ಹೋಟೆಲ್ ಸಿಬ್ಬಂದಿ ಮೇಲೆ ನಟ ದರ್ಶನ್ ಹಲ್ಲೆ ಮಾಡಿರುವುದು ನಿಜ, ಬಡವರು ಎನ್ನುವ ಕಾರಣಕ್ಕೆ ಅವರಿಗೆ ನ್ಯಾಯ ಕೇಳಲು ಸಾಧ್ಯವಾಗಿಲ್ಲ. ಅವರ ಪರವಾಗಿ ನಾನು ಈ ಹೋರಾಟ ಮುಂದುವರಿಸುತ್ತೇನೆ" ಎಂದು ಇಂದ್ರಜಿತ್ ಹೇಳಿದ್ದಾರೆ.
ಇದೇ ಸಮಯದಲ್ಲಿ ಈ ಪ್ರಕರಣದಲ್ಲಿ ರಾಜಕೀಯ ವ್ಯಕ್ತಿಗಳ ಹೆಸರು ಕೇಳಿಬರುತ್ತಿರುವ ಬಗ್ಗೆಯೂ ಇಂದ್ರಜಿತ್ ಪ್ರತಿಕ್ರಿಯೆ ನೀಡಿದ್ದಾರೆ. "ಈ ಪ್ರಕರಣಕ್ಕೂ ಹೆಚ್.ಡಿ ಕುಮಾರಸ್ವಾಮಿ ಅವರಿಗೂ ಹಾಗೂ ಸಿದ್ಧರಾಮಯ್ಯ ಅವರಿಗೂ ಯಾವುದೇ ಸಂಬಂಧವಿಲ್ಲ" ಎಂದಿದ್ದಾರೆ. ಇನ್ನು ಕುಮಾರಸ್ವಾಮಿ ಭೇಟಿ ಬಗ್ಗೆ ಮಾತನಾಡಿದ ಇಂದ್ರಜಿತ್, "ಕುಮಾರಸ್ವಾಮಿ ಅವರನ್ನು ಹಲವು ಬಾರಿ ಭೇಟಿ ಮಾಡಿ ಮಾತನಾಡಿದ್ದೇನೆ. ಸಿನಿಮಾ ಮತ್ತು ಬೇರೆ ವಿಚಾರಗಳ ಸಂಬಂಧ ಪಟ್ಟಹಾಗೆ ಮಾತನಾಡಿದ್ದೇವೆ. ಇದರಲ್ಲಿ ಅವರ ಹೆಸರನ್ನು ಎಳೆದು ತರಬೇಡಿ" ಎಂದು ಹೇಳಿದ್ದಾರೆ.

"ಇಲ್ಲಿ ಯಾವುದೇ ರಾಜಕೀಯ ಇಲ್ಲ, ನನ್ನದು ಏಕಾಂಗಿ ಹೋರಾಟ, ನಾನೊಬ್ಬನೇ ಹೋರಾಟ ಮಾಡುತ್ತಿರುವುದು, ಒಂಟಿ ಸಲಗದ ಹಾಗೆ" ಎಂದು ಇಂದ್ರಜಿತ್ ಸ್ಪಷ್ಟಪಡಿಸಿದ್ದಾರೆ.
ಇಂದ್ರಜಿತ್ ಲಂಕೇಶ್ ನಿನ್ನೆ ದರ್ಶನ್ ವಿರುದ್ಧ ಆರೋಪ ಮಾಡಿದ ಬಳಿಕ, ಇಂದ್ರಜಿತ್ ಮತ್ತು ಕುಮಾರಸ್ವಾಮಿ ಭೇಟಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಾ, ಈ ಪ್ರಕರಣದ ಹಿಂದೆ ರಾಜಕೀಯ ವ್ಯಕ್ತಿಗಳ ಕೈವಾಡ ಇದಿಯಾ ಎನ್ನುವ ಚರ್ಚೆ ಪ್ರಾರಂಭವಾಗಿತ್ತು. ಆದರೀಗ ಎಲ್ಲಾ ಊಹಾಪೋಹಗಳಿಗೂ ಇಂದ್ರಜಿತ್ ತೆರೆ ಎಳೆದಿದ್ದಾರೆ.
Recommended Video
ಇನ್ನು ನಟ ದರ್ಶನ್ ಕ್ಷಮೆಯಾಚಿಸಬೇಕೆಂದು ಇಂದ್ರ ಹೇಳಿದ್ದಾರೆ. ''ಹೋಟೆಲ್ ಸಿಬ್ಬಂದಿಗೆ ನ್ಯಾಯ ಕೊಡಿಸಲು ನಾನು ಬಂದಿರುವುದು. ಹಲ್ಲೆಗೊಳಗಾದವರಿಗೆ ಕ್ಷಮೆ ಕೇಳಿ, ನ್ಯಾಯ ಒದಗಿಸಿ. ಈ ವಿಚಾರವನ್ನು ಇಲ್ಲಿಗೆ ಬಿಡೋಣ. ಇಲ್ಲ ಅಂದ್ರೆ ಇದು ಇನ್ನು ಮುಂದುವರಿಯುತ್ತೆ. ಮತ್ತಷ್ಟು ತೇಜೋವಧೆ ಆಗಬಹುದು'' ಎಂದು ಇಂದ್ರಜಿತ್ ಹೇಳಿದ್ದಾರೆ.


Click it and Unblock the Notifications











