ಪೋಷಕ ಕಲಾವಿದರು, ಕಾರ್ಮಿಕರ ನೆರವಿಗೆ ಬಂದ ಇನ್ಫೋಸಿಸ್ ಪ್ರತಿಷ್ಠಾನ
ಕೊರೊನಾ ಸೋಂಕಿನ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ್ದ ಚಲನಚಿತ್ರ ಪೋಷಕ ಕಲಾವಿದರು ಹಾಗೂ ಕಾರ್ಮಿಕರ ನೆರವಿಗೆ ಇನ್ಫೋಸಿಸ್ ಪ್ರತಿಷ್ಠಾನ ಧಾವಿಸಿದೆ. ಜೀವನ ನಿರ್ವಾಹಣೆ ವಸ್ತುಗಳ ಕಿಟ್ ವಿತರಣಾ ಕಾರ್ಯಕ್ರಮವನ್ನು ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಇಂದು ಸುಚಿತ್ರಾ ಫಿಲಂ ಸೊಸೈಟಿಯ ಆವರಣದಲ್ಲಿ ಆಯೋಜಿಸಲಾಗಿತ್ತು.
Recommended Video
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಟಿ ಪ್ರೇಮಾ ''ಇನ್ಪೋಸಿಸ್ ಫೌಂಡೇಷನ್ ಅಧ್ಯಕ್ಷೆ ಶ್ರೀಮತಿ ಸುಧಾಮೂರ್ತಿ ಅವರು ಕಷ್ಟದಲ್ಲಿರುವವರಿಗೆ ಮನಮಿಡಿಯುವ ರೀತಿ ಹಾಗೂ ಬಡವರ ಬಗ್ಗೆ ಅವರಿಗಿರುವ ಕಾಳಜಿ ಅನುಕರಣೀಯ'' ಎಂದು ಹೇಳಿದರು.
''ಕಷ್ಟಕ್ಕೆ ಮನಮಿಡಿಯುವ ಹಾಗೂ ಅಗತ್ಯವಿರವವರಿಗೆ ವಿಶೇಷ ಕಾಳಜಿ ತೋರಿಸುವ ಸುಧಾಮೂರ್ತಿ ಅಮ್ಮನವರ ಸಂಸ್ಥೆಯಿಂದ ಕೊಡಲಾಗುತ್ತಿರುವ ಜೀವನ ನಿರ್ವಾಹಣೆ ವಸ್ತುಗಳ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಬಹಳ ಹೆಮ್ಮೆಯ ವಿಷಯವಾಗಿದೆ. ಸಿನಿಮಾ ಕಾರ್ಮಿಕರು ಚಿತ್ರೀಕರಣ ನಿಲುಗಡೆಯಾದ ಪರಿಣಾಮ ಬಹಳಷ್ಟು ತೊಂದರೆಗೀಡಾಗಿದ್ದರು. ಇವರಿಗೆ ದಿನನಿತ್ಯದ ಅಗತ್ಯ ಸಾಮಗ್ರಿಗಳನ್ನು ಒಳಗೊಂಡ ಕಿಟ್ ವಿತರಿಸಲಾಗುತ್ತಿದ್ದು, ಅವರ ಕುಟುಂಬ ಪೋಷಣೆಗೆ ಇದು ಅಗತ್ಯವಾಗಿದೆ'' ಎಂದು ಹೇಳಿದರು.

ಕರ್ನಾಟಕ ಚಲನ ಚಿತ್ರ ಕಾರ್ಮಿಕರ ಒಕ್ಕೂಟದ ಉಪಾಧ್ಯಕ್ಷ ರವಿಶಂಕರ್ ಮಾತನಾಡಿ, ''ನನಗೆ ಅಮ್ಮ ಸುಧಾಮೂರ್ತಿ ಅವರ ಸಂಪರ್ಕ ಇರಲಿಲ್ಲ. ಎರಡನೇ ಬಾರಿ ನಾನು ಮಾಡಿದ ಎಸ್ ಎಂ ಎಸ್ ನೋಡಿ ಸುಧಾಮೂರ್ತಿ ಅವರೇ ಫೋನ್ ಮಾಡಿದ್ದರು. ಎಷ್ಟು ಜನರು ಸಂಕಷ್ಟದಲ್ಲಿದ್ದಾರೆ ಹಾಗೂ ಎಷ್ಟು ಕಿಟ್ ಗಳ ಅವಶ್ಯಕತೆ ಇದೆ ಎನ್ನುವುದನ್ನ ಸ್ವತಃ ಅವರೇ ವಿಚಾರಿಸಿಕೊಂಡರು.
ಲಾಕ್ಡೌನ್ ಸಂಧರ್ಬದಲ್ಲಿ 2 ಸಾವಿರಕ್ಕೂ ಹೆಚ್ಚು ಕಲಾವಿದರಿಗೆ, ಕಾರ್ಮಿಕರಿಗೆ ಪ್ರತಿಷ್ಠಾನದ ವತಿಯಿಂದ ಕಿಟ್ ವಿತರಿಸಲಾಗಿತ್ತು. ಆ ವೇಳೆ ಅರ್ಹ ಕಲಾವಿದರಿಗೆ ಸಿಕ್ಕಿಲ್ಲ ಎನ್ನುವ ಮನವಿಯ ಹಿನ್ನಲೆಯಲ್ಲಿ ಇಂದು ಮತ್ತೆ ಒಂದು ಸಾವಿರ ಮಂದಿಗೆ ನೆರವು ನೀಡಲಾಗಿದೆ'' ಎಂದು ತಿಳಿಸಿದರು.
''ಚಲನಚಿತ್ರ ಕಾರ್ಮಿಕರು ಮತ್ತು ಕಲಾವಿದರು 17 ಸಂಘಟನೆಯ ಸದಸ್ಯರಿಗೆ ನೆರವು ನೀಡುವ ಮೂಲಕ ಕೊರೊನಾದಿಂದ ಕೆಲಸ ಸಿಗದೆ ಕಂಗಾಲಾಗಿರುವ ಕಲಾವಿದರಿಗೆ ಕಿಟ್ ವಿತರಿಸಲಾಗಿದೆ. ಲಾಕ್ ಡೌನ್ ಬಳಿಕ ಚಿತ್ರಗಳ ಚಿತ್ರೀಕರಣ ಪ್ರಾರಂಭವಾಗಿದ್ದರೂ ಕೆಲವೇ ಕೆಲವು ಕಲಾವಿದರನ್ನು ಚಿತ್ರೀಕರಣದಲ್ಲಿ ಬಳಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಬಹುತೇಕ ಕಲಾವಿದರು. ಕಾರ್ಮಿಕರು ಕೆಲಸವಿಲ್ಲದೆ ದೈನಂದಿನ ಬದುಕು ಸಾಗಿಸಲು ಪರದಾಡುತ್ತಿದ್ದಾರೆ. ಇಂತವರನ್ನು ಗುರುತಿಸಿ ನೆರವು ನೀಡಲು ಇನ್ಫೋಸಿಸ್ ಪ್ರತಿಷ್ಠಾನ ಮುಂದಾಗಿದ್ದು ಬಹಳ ಸಂತಸದ ವಿಷಯ'' ಎಂದು ರವಿಶಂಕರ್ ಹೇಳಿದರು.

ಈ ಕಾರ್ಯಕ್ರಮದಲ್ಲಿ ನಿರ್ಮಾಪಕ ರಮೇಶ್ ರೆಡ್ಡಿ, ಹಾಸ್ಯ ಕಲಾವಿದ ಡಿಂಗ್ರಿ ನಾಗರಾಜ್ ಸೇರಿದಂತೆ ಕಾರ್ಯಕ್ರಮದಲ್ಲಿ ನೂರಾರು ಪೋಷಕ ಕಲಾವಿದರ ಭಾಗವಹಿಸಿದ್ದರು.


Click it and Unblock the Notifications











