ಡಾ.ವಿಷ್ಣುವರ್ಧನ್ ಬಗ್ಗೆ ಹಲವು ಆಸಕ್ತಿಕರ ಸಂಗತಿಗಳು
ಅಭಿಮಾನಿಗಳ ಆರಾಧ್ಯ ದೈವ, ಕನ್ನಡಿಗರ ಮನೆ, ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ನಟ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ 62ನೇ ಹುಟ್ಟುಹಬ್ಬ (ಸೆ.18) ರಾಜ್ಯದಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ.
ಸೋಮವಾರ (ಸೆ.17) ಮಧ್ಯರಾತ್ರಿಯಿಂದಲೇ ವಿಷ್ಣು ಅಭಿಮಾನಿಗಳು ಜಯನಗರ ಟಿ ಬ್ಲ್ಯಾಕ್ ನಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಅವರ ಹುಟ್ಟುಹಬ್ಬ ಚಾಲನೆ ಪಡೆದುಕೊಂಡಿತು. ವಿಷ್ಣು ಅವರ ಸಮಾಧಿ ಸ್ಥಳ ಕೆಂಗೇರಿ ಬಳಿಯ ಅಭಿಮಾನ್ ಸ್ಟುಡಿಯೋಗೆ ಅಭಿಮಾನಿಗಳ ಮಹಾಪೂರವೇ ಹರಿದು ಬರುತ್ತಿದೆ.

ವಿಷ್ಣು ಓದಿದ್ದು ಮೈಸೂರು ಗೋಪಾಲಸ್ವಾಮಿ ಸ್ಕೂಲಲ್ಲಿ
ವಿಷ್ಣುವರ್ಧನ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ್ದು ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ. ಬಳಿಕ ಮಾಧ್ಯಮಿಕ ಶಿಕ್ಷಣ ಪಡೆದದ್ದು ಬೆಂಗಳೂರಿನ ಕನ್ನಡ ಮಾದರಿ ಶಾಲೆಯಲ್ಲಿ. ಹೈಸ್ಕೂಲು ಹಾಗೂ ಕಾಲೇಜು ಶಿಕ್ಷಣ ಪೂರೈಸಿದ್ದು ಬಸವನಗುಡಿ ನ್ಯಾಷನಲ್ ಕಾಲೇಜು.

ವಿಷ್ಣುಗೆ ಒಬ್ಬ ಅಣ್ಣ ಹಾಗೂ ನಾಲ್ಕು ಮಂದಿ ತಂಗಿಯರು
ವಿಷ್ಣುವರ್ಧನ್ ಅವರಿಗೆ ಒಬ್ಬ ಅಣ್ಣ ಹಾಗೂ ನಾಲ್ಕು ಮಂದಿ ತಂಗಿಯರು. ಅಣ್ಣನ ಹೆಸರು ಎನ್ ರವಿಕುಮಾರ್, ತಂಗಿಯರ ಹೆಸರು ಇಂದ್ರಾಣಿ, ಜಯಶ್ರೀ, ರಮಾ, ಪೂರ್ಣಿಮಾ. ಒಂದು ವೇಳೆ ವಿಷ್ಣು ಚಿತ್ರರಂಗಕ್ಕೆ ಬರದಿದ್ದರೆ ಆರ್ಮಿಗೆ ಸೇರುತ್ತಿದ್ದರಂತೆ. ಅವರಿಗೆ ಚಾಲೆಂಜ್ ಹಾಗೂ ಸಾಹಸ ಎಂದರೆ ಇಷ್ಟ ಎಂದು ಒಮ್ಮೆ ಹೇಳಿಕೊಂಡಿದ್ದರು.

ವಿಷ್ಣುವರ್ಧನ್ ಆಸಕ್ತಿಗಳು ಹತ್ತು ಹಲವು
ಅವರಿಗೆ ಸ್ಫೋರ್ಟ್ಸ್ ಕಾರುಗಳೆಂದರೆ ಇಷ್ಟ. ಹೋಟೆಲ್ ತಾಜ್ ನ ಚೈನೀಸ್ ಅಡುಗೆಗಳೆಂದರೆ ಅವರು ಇಷ್ಟಪಡುತ್ತಿದ್ದರು. ವಿಷ್ಣುಗೆ ಪುಸ್ತಕಗಳೆಂದರೆ ಆಸಕ್ತಿ ಇತ್ತು. ಆದರೆ ಅವರು ಪುಸ್ತಕದ ಹುಳುವಾಗಿರಲಿಲ್ಲ. ಜೇಮ್ಸ್ ಹ್ಯಾಡ್ಲಿ ಚೇಸ್ ಅವರ ಪುಸ್ತಕಗಳನ್ನು ಬಿಡುವಿನಲ್ಲಿ ಓದುತ್ತಿದ್ದರು. ಕುದುರೆ ಸವಾರಿ, ಹಾಡುಗಾರಿಕೆ, ಸುಗಮ ಸಂಗೀತ ಕೇಳುವುದು, ಕ್ರಿಕೆಟ್ ಹಾಗೂ ಟೆನ್ನಿಸ್ ಎಂದರೆ ಪಂಚಪ್ರಾಣ.

ವಿಷ್ಣು ನೆಚ್ಚಿನ ಬಣ್ಣ, ಪ್ರಾಣಿ, ಹಾಲಿವುಡ್ ಚಿತ್ರ
ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು ಎಂಬಂತೆ ವಿಷ್ಣುವರ್ಧನ್ ಅವರಿಗೆ ಶ್ವೇತ ವರ್ಣ ನೆಚ್ಚಿನ ಬಣ್ಣವಾಗಿತ್ತು. ಅವರಿಗೆ ಸಾಕು ಪ್ರಾಣಿ ಹಾಗೂ ಕಾಡು ಪ್ರಾಣಿಗಳೆಂದರೆ ಎಲ್ಲಿಲ್ಲದ ಅಕ್ಕರೆ. ಅದರಲ್ಲೂ ನಾಯಿ ಎಂದರೆ ತುಂಬ ಇಷ್ಟ. ಹಾಲಿವುಡ್ ನಟರಾದ ಬ್ರುನೋ ಹಾಗೂ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಚಿತ್ರಗಳನ್ನು ಇಷ್ಟಪಡುತ್ತಿದ್ದರು.

ವಿಷ್ಣು ಅವರ ನೆಚ್ಚಿನ ನಿರ್ದೇಶಕ, ತಾರೆಗಳು
ಹಾಲಿವುಡ್ ತಾರೆ ಮರ್ಲಿನ್ ಮನ್ರೋ ಎಂದರೆ ಅವರಿಗೆ ಇಷ್ಟ. ಬಾಲಿವುಡ್ ನಲ್ಲಿ ಶಮ್ಮಿ ಕಪೂರ್, ರಾಜ್ ಕುಮಾರ್, ದಿಲೀಪ್ ಕುಮಾರ್, ಮೌಸ್ಮಿ ಚಟರ್ಜಿ, ಶರ್ಮಿಳಾ ಠಾಗೂರ್ ಹಾಗೂ ಹೆಲೆನ್ ಅಭಿನಯವನ್ನು ಇಷ್ಟಪಡುತ್ತಿದ್ದರು. ಅವರ ನೆಚ್ಚಿನ ನಿರ್ದೇಶಕರಲ್ಲಿ ಪುಟ್ಟಣ್ಣ ಕಣಗಾಲ್ ಅವರಿಗೆ ಅಗ್ರಪಟ್ಟ. ಸುಭಾಷ್ ಘಾಯ್, ವಿಲಿಯಂ ವೈಲರ್ ನಿರ್ದೇಶನ ಎಂದರೆ ಇಷ್ಟಪಡುತ್ತಿದ್ದರು.
ವಿಷ್ಣು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. ರಕ್ತದಾನ, ಅನ್ನದಾನ, ನೇತ್ರದಾನ ಕಾರ್ಯಕ್ರಮಗಳನ್ನು ವಿಭಾ ಚಾರಿಟಬಲ್ ಟ್ರಸ್ಟ್ ಹಾಗೂ ಕರ್ನಾಟಕ ಸರ್ಕಾರ ವಾರ್ತಾ ಇಲಾಖೆ ಜಂಟಿಯಾಗಿ ಹಮ್ಮಿಕೊಂಡಿವೆ. ವಿಷ್ಣು ಹುಟ್ಟುಹಬ್ಬ ಐದು ವಿಭಿನ್ನ ಕಾರ್ಯಕ್ರಮಗಳ ವಿವರಗಳು.
ವಿಷ್ಣುವರ್ಧನ್ ಅವರ ಅನುಪಸ್ಥಿತಿಯಲ್ಲಿ ಅವರ ಅಭಿಮಾನಿಗಳು ಕಳೆದ ಎರಡು ವರ್ಷಗಳಿಂದ ಅವರ ಹುಟ್ಟುಹಬ್ಬವನ್ನು ಸಡಗರ, ಸಂಭ್ರಮದಿಂದಲೇ ಆಚರಿಸಿಕೊಳ್ಳುತ್ತಾ ಬಂದಿದ್ದಾರೆ. ಅವರು ನಮ್ಮೊಂದಿಗಿಲ್ಲ ಎಂಬ ಕೊರತೆಯನ್ನು ಬಿಟ್ಟರೆ ಈಗಲೂ ಅಷ್ಟೇ ಅವರ ಹುಟ್ಟುಹಬ್ಬ ಕಾರ್ಯಕ್ರಮಗಳು ಸಾಂಗವಾಗಿ ನೆರವೇರುತ್ತಿದೆ.
ಈ ಹಿನ್ನೆಲೆಯಲ್ಲಿ ವಿಷ್ಣು ಅವರ ಬಗೆಗಿನ ಒಂದಷ್ಟು ಆಸಕ್ತಿಕರ ಸಂಗತಿಗಳನ್ನು ಒನ್ಇಂಡಿಯಾ ಕನ್ನಡ ನೀಡುತ್ತಿದೆ. ಅವರ ಓದಿದ್ದು, ಅವರ ಕುಟುಂಬ, ಅವರ ಆಸಕ್ತಿಗಳು, ಆಹಾರ, ಅವರಿಗೆ ಇಷ್ಟವಾದ ಪುಸ್ತಕ, ಬಣ್ಣ, ಹಾಲಿವುಡ್ ಚಿತ್ರ ಮುಂತಾದವು.


Click it and Unblock the Notifications











