ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಚುನಾವಣೆಯಲ್ಲಿ ಸ್ಪರ್ಧಿಸುವುದು ಪಕ್ಕಾ.?
ರೆಬೆಲ್ ಸ್ಟಾರ್ ಅಂಬರೀಶ್ ಚಿತ್ರರಂಗದಲ್ಲಿ ಎಷ್ಟು ಖ್ಯಾತಿ ಹೊಂದಿದ್ದರೋ, ಅಷ್ಟೇ ಜನಪ್ರಿಯತೆ ರಾಜಕೀಯ ರಂಗದಲ್ಲೂ ಪಡೆದಿದ್ದರು. 'ಮಂಡ್ಯದ ಗಂಡು' ಎಂದೇ ಕರೆಯಿಸಿಕೊಳ್ಳುತ್ತಿದ್ದ ಅಂಬರೀಶ್ ಗೆ ರಾಜಕಾರಣದಲ್ಲಿ ಕೈಹಿಡಿದದ್ದು ಸಕ್ಕರೆ ನಾಡು ಮಂಡ್ಯ ಕ್ಷೇತ್ರ.
ಮಂಡ್ಯ ಜನತೆಯ ಅಕ್ಕರೆಯ ನಾಯಕನಾಗಿದ್ದ ಅಂಬರೀಶ್ ಇಂದು ನಮ್ಮ-ನಿಮ್ಮೊಂದಿಲ್ಲ. ಹೀಗಾಗಿ, ಅಂಬರೀಶ್ ಸ್ಥಾನವನ್ನು ಸುಮಲತಾ ತುಂಬಬೇಕು ಎಂಬುದು ಮಂಡ್ಯ ಜನತೆ ಹಾಗೂ ಅಭಿಮಾನಿಗಳ ಇಚ್ಛೆ ಆಗಿದೆ.
ಲೋಕಸಭೆ ಚುನಾವಣೆ ಇನ್ನೇನು ಹತ್ತಿರ ಸಮೀಪಿಸುತ್ತಿರುವುದರಿಂದ, ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್ ರನ್ನೇ ಕಣಕ್ಕೆ ಇಳಿಸಲು ಕಾಂಗ್ರೆಸ್ ಪಕ್ಷ ಮುಂದಾಗಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.
ಹಾಗಾದ್ರೆ, ರಾಜಕೀಯಕ್ಕೆ ಧುಮುಕಲು ಸುಮಲತಾ ಮೇಡಂ ರೆಡಿ ಇದ್ದಾರಾ.? ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಸ್ಪರ್ಧಿಸುತ್ತಾರಾ.? ಈ ಎಲ್ಲಾ ಪ್ರಶ್ನೆಗಳಿಗೂ ಸುಮಲತಾ ಉತ್ತರ ಕೊಟ್ಟಿದ್ದಾರೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಮಂಡ್ಯದಿಂದ ಮಾತ್ರ..!
''ರಾಜಕೀಯಕ್ಕೆ ಬರುವ ಆಲೋಚನೆ ಇರಲಿಲ್ಲ. ಆದರೆ ಅಭಿಮಾನಿಗಳ ಆಶಯದಂತೆ ನಡೆಯುವೆ. ಒಂದು ವೇಳೆ ರಾಜಕೀಯಕ್ಕೆ ಬಂದರೆ ಮಂಡ್ಯದಿಂದ ಮಾತ್ರ'' ಎಂದಿದ್ದಾರೆ ಸುಮಲತಾ ಅಂಬರೀಶ್. ಅಲ್ಲಿಗೆ, ರಾಜಕೀಯಕ್ಕೆ ಧುಮುಕಲು ಸುಮಲತಾ ಅಂಬರೀಶ್ ಮನಸ್ಸು ಮಾಡಿರುವಂತಿದೆ.

ಕಾಂಗ್ರೆಸ್ ಪಕ್ಷದಿಂದ ಅಖಾಡಕ್ಕೆ.?
''ಅಂಬರೀಶ್ ಅವರು ಕಾಂಗ್ರೆಸ್ ಪಕ್ಷದಿಂದ ಗುರುತಿಸಿಕೊಂಡವರು. ಅಭಿಮಾನಿಗಳು ಯಾವ ತೀರ್ಮಾನ ಮಾಡುತ್ತಾರೋ, ಅದನ್ನೇ ಆಯ್ಕೆ ಮಾಡಿಕೊಳ್ಳುವೆ'' ಅಂತ ಸುಮಲತಾ ಅಂಬರೀಶ್ ಹೇಳಿದ್ದಾರೆ.

ಮಂಡ್ಯ ಜನರ ಭಾವನೆಗೆ ಬೆಲೆ ಕೊಡುವೆ.!
''ಮಂಡ್ಯ ಜನರೊಂದಿಗೆ ಅಂಬರೀಶ್ ಅವರಿಗೆ ಇದ್ದ ಸಂಬಂಧವನ್ನು ಕಡಿದುಕೊಳ್ಳಲು ಸಾಧ್ಯವಿಲ್ಲ. ಮಂಡ್ಯ ಜನತೆಯ ಭಾವನೆಗೆ ಬೆಲೆ ಕೊಡುವುದು ನನ್ನ ಕರ್ತವ್ಯ. ಅವರು ಹೇಳಿದ ಹಾಗೆ ನಡೆಯುವೆ'' ಎಂದು ಸುಮಲತಾ ಅಂಬರೀಶ್ ತಿಳಿಸಿದ್ದಾರೆ.

ಜನರ ಒತ್ತಾಯಕ್ಕೆ ಮಣಿಯುತ್ತಾರಾ ಸುಮಲತಾ.?
ಮಂಡ್ಯ ಜನರ ಒತ್ತಾಯಕ್ಕೆ ಮಣಿದು ಸುಮಲತಾ ಅಂಬರೀಶ್ ಚುನಾವಣೆಗೆ ನಿಲ್ಲಲು ಮುಂದಾಗಿರುವ ಹಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಅಂಬರೀಶ್ ಇದ್ದಿದ್ರಿಂದ, ಅದೇ ಪಕ್ಷದಲ್ಲಿ ಸುಮಲತಾ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ. ಚುನಾವಣಾ ರಾಜಕೀಯದಲ್ಲಿ ಮುಂದೆ ಏನೇನು ಬದಲಾವಣೆ ಆಗುತ್ತೋ, ಕಾದು ನೋಡಬೇಕು.


Click it and Unblock the Notifications











