'ಗಾಳಿಪಟ 2' ಸ್ಟಾರ್ ಗಳ ಬದಲಾವಣೆಗೆ ಇದೇ ಕಾರಣವೇ?
'ಗಾಳಿಪಟ 2' ಸಿನಿಮಾದ ಸ್ಟಾರ್ ಗಳು ಬದಲಾಗಿದ್ದಾರೆ. ಶರಣ್ ಹಾಗೂ ರಿಷಿ ಚಿತ್ರದಿಂದ ಹೊರ ಹೋಗಿ, ಆ ಜಾಗಕ್ಕೆ ಗಣೇಶ್ ಹಾಗೂ ದಿಗಂತ್ ಬಂದಿದ್ದಾರೆ.
ಇದ್ದಕ್ಕಿದ್ದ ಹಾಗೆ ಕಲಾವಿದರ ಬದಲಾವಣೆ ನೂರಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಎಲ್ಲ ಫೈನಲ್ ಆದ ಮೇಲೆ ಸಿನಿಮಾದ ನಾಯಕರು ಬದಲಾಗಿದ್ದು, ಯಾಕೆ ಎನ್ನುವ ಗೊಂದಲ ಸೃಷ್ಟಿಯಾಗಿದೆ. ಈ ಬಗ್ಗೆ ನಿರ್ದೇಶಕ ಯೋಗರಾಜ್ ಭಟ್ ಎಲ್ಲಿಯೂ ಸ್ಪಷ್ಟನೆ ನೀಡಿಲ್ಲ.
ಆದರೆ, 'ಗಾಳಿಪಟ 2' ಸಿನಿಮಾದ ಇತ್ತೀಚಿಗಿನ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕೆಳಗಿನ ಕೆಲವು ಕಾರಣಗಳಿಂದ ಚಿತ್ರದ ಕಲಾವಿದರು ಬದಲಾವಣೆಗೆ ಕಾರಣವಿದ್ದ ಹಾಗೆ ಕಾಣುತ್ತದೆ.

ಅಭಿಮಾನಿಗಳ ಒತ್ತಡ
'ಗಾಳಿಪಟ 2' ಸಿನಿಮಾ ಘೋಷಣೆ ಆದಾಗಿನಿಂದ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರು ಆಗಿತ್ತು. ಹಳೆ 'ಗಾಳಿಪಟ' ಚಿತ್ರದ ಕಲಾವಿದರನ್ನೇ ಇಲ್ಲಿ ಬಳಸಿಕೊಳ್ಳಿ ಎಂದು ಅಭಿಮಾನಿಗಳು ಒತ್ತಡ ತಂದಿದ್ದರು. ಚಿತ್ರತಂಡ ಹಾಕುವ ಪ್ರತಿ ಪೋಸ್ಟ್ ಗೂ ಈ ರೀತಿಯಾದ ಪ್ರತಿಕ್ರಿಯೆ ಸಿಗುತ್ತಿತ್ತು. ಇದೇ ಕಾರಣದಿಂದ ಅಭಿಮಾನಿಗಳ ಒತ್ತಾಯಕ್ಕೆ ಚಿತ್ರತಂಡ ಮಣಿದಿರಬಹುದು.

ಪ್ಯಾನ್ ಇಂಡಿಯಾ ಐಡಿಯಾ
'ಗಾಳಿಪಟ 2' ಸಿನಿಮಾ ಪ್ರಾರಂಭ ಆದಾಗ ಅದನ್ನು ಪ್ಯಾನ್ ಇಂಡಿಯಾ ಚಿತ್ರ ಮಾಡುವ ಯಾವುದೇ ಐಡಿಯಾ ಇರಲಿಲ್ಲ. ಆದರೆ, ನಂತರ ಚಿತ್ರವನ್ನು ಬೇರೆ ಬೇರೆ ಭಾಷೆಗಳಲ್ಲಿಯೂ ಬಿಡುಗಡೆ ಮಾಡುವ ನಿರ್ಧಾರಕ್ಕೆ ಚಿತ್ರತಂಡ ಬಂದರು. ಪ್ಯಾನ್ ಇಂಡಿಯಾ ಚಿತ್ರಕ್ಕೆ ಶರಣ್ ಹಾಗೂ ರಿಷಿಗೆ ಹೋಲಿಕೆ ಮಾಡಿದರೆ, ಗಣೇಶ್ ಹಾಗೂ ದಿಗಂತ್ ಬೆಸ್ಟ್ ಆಯ್ಕೆ ಎಂದು ಸ್ಟಾರ್ ಗಳನ್ನು ಬದಲು ಮಾಡಿರಬಹುದು.

ಕಲೆಕ್ಷನ್ ಲೆಕ್ಕಾಚಾರ
'ಗಾಳಿಪಟ 2' ಮೇಲೆ ದೊಡ್ಡ ನಿರೀಕ್ಷೆ ಇದೆ. ಸಿನಿಮಾ ಚೆನ್ನಾಗಿ ಬಂದರೆ ಕೆಲೆಕ್ಷನ್ ಕೂಡ ಹೆಚ್ಚಿರುತ್ತದೆ. ಗಣೇಶ್ ಇದ್ದರೆ, ಸಿನಿಮಾದ ಕೆಲೆಕ್ಷನ್, ಟಿವಿ ರೈಟ್ಸ್, ಆಡಿಯೋ ಹಕ್ಕು, ಡಬ್ಬಿಂಗ್ ಹೀಗೆ ಎಲ್ಲದರ ಬೆಲೆ ಹೆಚ್ಚಾಗುತ್ತದೆ. ಹೀಗಾಗಿ, ಕಲಾವಿದರ ಬದಲಾವಣೆ ಮಾಡಲು ಇದೂ ಕೂಡ ಒಂದು ಕಾರಣ ಆಗಿರಬಹುದು.

ಗಣೇಶ್, ದಿಗಂತ್ ಮೇಲೆ ಭಟ್ಟರ ಒಲವು
ಗಣೇಶ್ ಮತ್ತು ದಿಗಂತ್ ಮೇಲೆ ಯೋಗರಾಜ್ ಭಟ್ ರಿಗೆ ವಿಶೇಷ ಒಲವು ಇದೆ. ಭಟ್ಟರ 'ಮುಂಗಾರು ಮಳೆ' ಹಾಗೂ 'ಗಾಳಿಪಟ' ಸಿನಿಮಾದಲ್ಲಿ ಈ ಇಬ್ಬರು ನಟಿಸಿದ್ದರು. ಭಟ್ಟರು ತಮ್ಮ ಕೆರಿಯರ್ ನಲ್ಲಿ ಹೆಚ್ಚು ಸಿನಿಮಾ ಮಾಡಿದ್ದೆ, ಈ ನಟರ ಜೊತೆಗೆ. ಈ ಕಾರಣ ಭಟ್ಟರ ಗ್ಯಾಂಗ್ ಗೆ ಮತ್ತೆ ಗಣೇಶ್ ಮತ್ತು ದಿಗಂತ್ ಸೇರಿಕೊಂಡಿರಬಹುದು.

ಏನೇ ಆಗಲಿ, ಒಳ್ಳೆಯ ಸಿನಿಮಾ ಬರಲಿ
ಕನ್ನಡದಲ್ಲಿ ಬಂದ ಬೆಸ್ಟ್ ಲವ್ ಸ್ಟೋರಿಗಳ ಪೈಕಿ 'ಗಾಳಿಪಟ' ಕೂಡ ಒಂದಾಗಿದೆ. ಅಂತಹ ಒಳ್ಳೆಯ ಸಿನಿಮಾದ ಹೆಸರಿನಲ್ಲಿ ಮತ್ತೊಂದು ಚಿತ್ರ ಬರುತ್ತಿದ್ದು, ಈ ಚಿತ್ರ ಕೂಡ ಚೆನ್ನಾಗಿ ಇರಲಿ ಎನ್ನುವುದೇ ಎಲ್ಲ ಆಸೆ. ಯಾವ ಕಲಾವಿದರೇ ನಟಿಸಲಿ, ಸಿನಿಮಾ ಗೆಲ್ಲಲಿ. 'ಗಾಳಿಪಟ' ಮಟ್ಟಿಗೆ ಜನರಿಗೆ ಜನರನ್ನು ಮುಟ್ಟಲಿ.


Click it and Unblock the Notifications











