ಅಧಿಕೃತವಾಗಿ ಸೆಟ್ಟೇರಿದೆ ಜಗ್ಗೇಶ್-ಗುರುಪ್ರಸಾದ್ ಜೋಡಿಯ 'ರಂಗನಾಯಕ'
ಮಠ, ಎದ್ದೇಳು ಮಂಜುನಾಥ ಸಿನಿಮಾಗಳ ನಂತರ ಸೂಪರ್ ಹಿಟ್ ಕಾಂಬಿನೇಷನ್ ಮತ್ತೆ ಬರ್ತಿದೆ ಎಂಬ ಸುದ್ದಿ ಈ ಹಿಂದೆಯೇ ಘೋಷಣೆಯಾಗಿತ್ತು. ನವರಸ ನಾಯಕ ಜಗ್ಗೇಶ್ ಮತ್ತು ನಿರ್ದೇಶಕ ಗುರುಪ್ರಸಾದ್ ಸುಮಾರು 11 ವರ್ಷದ ನಂತರ ಒಟ್ಟಿಗೆ ಸಿನಿಮಾ ಮಾಡ್ತಿದ್ದಾರೆ.
ಕನ್ನಡದ ಯಶಸ್ವಿ ಜೋಡಿ ಹೊಸ ಚಿತ್ರ ರಂಗನಾಯಕ ಇಂದು ಅಧಿಕೃತವಾಗಿ ಸೆಟ್ಟೇರಿದೆ. ಬಸವನಗುಡಿಯ ರಾಯರ ಮಠದಲ್ಲಿ ಸಿನಿಮಾದ ಮುಹೂರ್ತ ನೆರವೇರಿದ್ದು, ಚಿತ್ರೀಕರಣ ಸಹ ಪ್ರಾರಂಭವಾಗಿದೆ.
ರಂಗನಾಯಕ ಸಿನಿಮಾ ಮುಹೂರ್ತದ ಫೋಟೋ ಹಂಚಿಕೊಂಡಿರುವ ನಟ ಜಗ್ಗೇಶ್ ಟ್ವಿಟ್ಟರ್ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ''ಭ್ರಾಹ್ಮೀ ಮುಹೂರ್ತದ ಶುಭಸಮಯ ರಂಗನಾಯಕ ಚಿತ್ರ ಬಸವನಗುಡಿ ರಾಯರಮಠದಲ್ಲಿ ಪ್ರಥಮ ಆರಂಭಪಲಕ ಹಾಗು ರಾಯರ ಬೃಂದಾವನದ ಚಿತ್ರಿಕರಣ ಮಾಡಿ ಕಾರ್ಯ ಆರಂಭವಾಯಿತು. ಮಠ, ಎದ್ದೇಳು ಮಂಜುನಾಥ ನಂತರ ಗುರುಪ್ರಸಾಧ್ ನನ್ನ ಸಮ್ಮಿಲನ...ನಗಿಸಲು ನಾವು ರೆಡಿ ಶುಭಹಾರೈಸಿ'' ಎಂದು ಟ್ವೀಟ್ ಮಾಡಿದ್ದಾರೆ.

ವಿಖ್ಯಾತ್ ಪ್ರೊಡಕ್ಷನ್ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಈ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ.
ಅಂದ್ಹಾಗೆ, ಅನೂಪ್ ಸೀಳಿನ್ ಮತ್ತು ಗುರು ಪ್ರಸಾದ್ ಕಾಂಬಿನೇಷನ್ನಲ್ಲಿ ಮೂರು ಸಿನಿಮಾಗಳು ಬಂದಿದ್ದು, ಈ ಮೂರು ಚಿತ್ರದ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಅದ್ಭುತ ಎನಿಸಿಕೊಂಡಿದೆ. ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್ ಹಾಗೂ ಎರಡನೇ ಸಲ ಸಿನಿಮಾಗೆ ಅನೂಪ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ಎಲ್ಲ ಅಂದುಕೊಂಡಂತೆ ಆಗಿದ್ದರೆ 2020ರಲ್ಲೇ ಈ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದ್ರೆ, ಲಾಕ್ಡೌನ್ ಇನ್ನಿತರ ಕಾರಣಗಳಿಂದ ಅದು ಆಗಲಿಲ್ಲ. ಕಥೆ-ಚಿತ್ರಕಥೆ-ಸಂಭಾಷಣೆ-ಸಾಹಿತ್ಯದ ಜೊತೆಗೆ ನಿರ್ದೇಶನ ಮಾಡ್ತಿರುವ ಗುರು ಪ್ರಸಾದ್ ಈಗ ಚಿತ್ರೀಕರಣ ಸಜ್ಜಾಗಿದ್ದಾರೆ. ಬಹುಶಃ ಮುಂದಿನ ವರ್ಷದ ಮೊದಲಾರ್ಧದಲ್ಲಿ ಸಿನಿಮಾ ತೆರೆಗೆ ಬರಬಹುದು.
ಜಗ್ಗೇಶ್ ಅವರನ್ನು ಹೊರತುಪಡಿಸಿ ರಂಗನಾಯಕ ಚಿತ್ರದಲ್ಲಿ ಬೇರೆ ಯಾವೆಲ್ಲ ಕಲಾವಿದರು ಇರಲಿದ್ದಾರೆ ಎನ್ನುವುದು ಸದ್ಯಕ್ಕೆ ಕುತೂಹಲ ಮೂಡಿಸಿದೆ. ಆದ್ರೆ, ಗುರು ಪ್ರಸಾದ್ ಸಿನಿಮಾಗಳನ್ನು ಗಮನಿಸಿದರೆ ಒಂದೊಳ್ಳೆ ಕಾಂಬಿನೇಷನ್ನ ಪಾತ್ರಗಳು ಈ ಚಿತ್ರದಲ್ಲಿ ಸಿಗುವುದರಲ್ಲಿ ಯಾವುದೇ ಅನುಮಾನ ಇಲ್ಲ.


Click it and Unblock the Notifications











