ಮಗನ ಚಿತ್ರಕ್ಕೆ ಸಿಕ್ಕ ಓಪನಿಂಗ್ ನೋಡಿ ಭಾವುಕರಾದ ಜಗ್ಗೇಶ್
ನವರಸ ನಾಯಕ ಜಗ್ಗೇಶ್ ಹಿರಿಯ ಪುತ್ರ ಗುರುರಾಜ್ ನಟನೆಯ 'ಕಾಗೆಮೊಟ್ಟೆ' ಚಿತ್ರ ಬಿಡುಗಡೆಯಾಗಿದೆ. ಕೊರೊನಾದಿಂದ ಬಹಳಷ್ಟು ದಿನ ಚಿತ್ರಮಂದಿರಗಳು ಮುಚ್ಚಿದ್ದವು. ಆಮೇಲೆ ಸ್ವಲ್ಪ ದಿನ 50ರಷ್ಟು ಆಸನ ಭರ್ತಿಯೊಂದಿಗೆ ಪ್ರದರ್ಶನ ಮುಂದುವರಿಸಿದವು. ಈಗ ಅಕ್ಟೋಬರ್ 1 ರಿಂದ 100% ಅನುಮತಿ ಸಿಕ್ಕಿದೆ. ಪೂರ್ಣ ಪ್ರಮಾಣದ ಅವಕಾಶ ಸಿಕ್ಕಿದ ನಂತರ ತೆರೆಗೆ ಬಂದಿರುವ ಮೊದಲ ಚಿತ್ರ ಕಾಗೆಮೊಟ್ಟೆ.
ಜಗ್ಗೇಶ್ ಪುತ್ರನ ಚಿತ್ರಕ್ಕೆ ಮೊದಲ ದಿನ ಒಳ್ಳೆಯ ಪ್ರೇಕ್ಷಕರು ಸಿಕ್ಕಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ 'ಕಾಗೆಮೊಟ್ಟೆ' ನೋಡಿ ಜನ ಎಂಜಾಯ್ ಮಾಡ್ತಿರುವ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಶೇರ್ ಮಾಡಿರುವ ಜಗ್ಗೇಶ್ ಸಂತಸ ಹಂಚಿಕೊಂಡಿದ್ದಾರೆ.

''ಈ ಚಪ್ಪಾಳೆಯ ಹರ್ಷೋಧ್ಘಾರ ನನ್ನ ಕುಟುಂಬದ ಮೇಲೆ ಕನ್ನಡಿಗರ ಪ್ರೀತಿ ನೋಡಿ ಗುರುರಾಜನ ಅಪ್ಪನಾಗಿ ಕಣ್ಣು ಒದ್ದೆಯಾಯಿತು. 'ಭಂಡ ನನ್ನ ಗಂಡ' ದಿನಗಳಲ್ಲಿ ಕಂಡ ಆನಂದ ನೆನಪಾಯಿತು. ಕೋಟಿ ವಂದನೆಗಳು ಆತ್ಮೀಯ ಹೃದಯಗಳಿಗೆ'' ಎಂದು ಜಗ್ಗೇಶ್ ಕೃತಜ್ಞತೆ ವ್ಯಕ್ತಪಡಿಸಿದರು.
ಇನ್ನು ಮುಂದಿನ ದಿನಗಳಲ್ಲಿ ತೆರೆಕಾಣಲಿರುವ ಚಿತ್ರಗಳಿಗೆ ಒಳ್ಳೆಯದಾಗಲಿ ಎಂದು ವಿಶ್ ಮಾಡಿದರು. ''ಕೊರೊನಾ ಸಂಕಷ್ಟದಿಂದ ಸಿನಿಮಾರಂಗ ಹೊರಬಂದು ಮತ್ತೆ ಎದ್ದುನಿಲ್ಲಲಿ. #ಕೋಟಿಗೊಬ್ಬ #ಸಲಗ #ಶಿವಣ್ಣ ಮುಂದಿನ ಚಿತ್ರಕ್ಕೆ best of luck'' ಎಂದು ಟ್ವಿಟ್ಟರ್ ಮೂಲಕ ಶುಭಕೋರಿದರು.
ಈ ಹಿಂದೆ 'ಕಾಗೆಮೊಟ್ಟೆ' ಸಿನಿಮಾದ ಟ್ರೈಲರ್ ಬಿಡುಗಡೆಯಾದಗಲೂ ಜಗ್ಗೇಶ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ''It's raw subject. ಗುರುರಾಜ ಈ ಚಿತ್ರದಲ್ಲಿ ಒಳ್ಳೆಯ ಹುಡುಗನ ಬದುಕು #slumrowdy ಆಗಿ ಪರಿವರ್ತನೆ ಆಗುವ ಪಾತ್ರ. ಗುರುರಾಜನ ಪ್ರತಿಭೆ ನೋಡಿ ಮೂಕವಿಸ್ಮಿತನಾದೆ..ಕೊರೊನಾ ಇಂದ ಬಿಡುಗಡೆ ತಡವಾಯಿತು. ಆದರು ನನ್ನ ನಂಬಿಕೆ ಗುರುರಾಜ ಪ್ರೇಕ್ಷಕನ ಮನ ಗೆಲ್ಲುತ್ತಾನೆ ಎಂದು. ತಮಿಳು ಚಿತ್ರತಂಡ ಈ ಚಿತ್ರಕಥೆಗಾಗಿ ಬೇಡಿಕೆ ಇಟ್ಟಿದ್ದಾರೆ. Good luck'' ಎಂದು ಟ್ವೀಟ್ ಮಾಡಿದ್ದರು.

ಚಂದ್ರಹಾಸ ಈ ಚಿತ್ರ ನಿರ್ದೇಶಿಸಿದ್ದು ಗುರುರಾಜ್ ಜೊತೆಗೆ ಮಾದೇಶ, ಹೇಮಂತ್ ರೆಡ್ಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತನುಜಾ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಸೌಜನ್ಯಾ, ಶರತ್ ಲೋಹಿತಾಶ್ವ, ಪೊನ್ನಂಬಳಂ, ರಾಜ್ ಬಹದ್ದೂರ್, ಸತ್ಯಜಿತ್ ಇನ್ನೂ ಹಲವು ನಟರು ಸಿನಿಮಾದಲ್ಲಿದ್ದಾರೆ.
ದಸರಾ ಹಬ್ಬಕ್ಕೆ ಸಲಗ-ಕೋಟಿಗೊಬ್ಬ 3
ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶಿಸಿರುವ ಸಲಗ ಹಾಗೂ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷೆಯ ಕೋಟಿಗೊಬ್ಬ 3 ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿದೆ. ದಸರಾ ಹಬ್ಬದ ವಿಶೇಷವಾಗಿ ಅಕ್ಟೋಬರ್ 14 ರಂದು ಈ ಎರಡು ಚಿತ್ರಗಳು ಥಿಯೇಟರ್ಗೆ ಬರ್ತಿದೆ. ಎರಡು ನಿರೀಕ್ಷಿತ ಸಿನಿಮಾಗಳು ಏಕಕಾಲಕ್ಕೆ ಚಿತ್ರಮಂದಿರಕ್ಕೆ ಬರುವುದು ಬೇಡ ಎಂಬ ಅಭಿಪ್ರಾಯ ಕೇಳಿ ಬಂತು. ಇಂಡಸ್ಟ್ರಿಯಿಂದಲೇ ಶಿವಣ್ಣ ಸೇರಿದಂತೆ ಹಲವರು ಸಲಹೆ ಕೊಟ್ಟರು. ಆದರೆ, ಈಗಾಗಲೇ ಬಹಳಷ್ಟು ತಡವಾಗಿರುವ ಕಾರಣ ಕಾಯಲು ಸಾಧ್ಯವಿಲ್ಲ ಎಂದು ನಿರ್ಧರಿಸಿದ ಎರಡು ಚಿತ್ರದ ನಿರ್ಮಾಪಕ ಒಂದೇ ದಿನ ಬಿಡುಗಡೆ ಮಾಡ್ತಿದ್ದಾರೆ.
ಜಗ್ಗೇಶ್ ಸಿನಿಮಾಗಳು
2019ರಲ್ಲಿ ತೆರೆಕಂಡ 'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರದ ನಂತರ ಜಗ್ಗೇಶ್ ನಟನೆಯ ಯಾವ ಚಿತ್ರವೂ ಇನ್ನು ಬಿಡುಗಡೆಯಾಗಿಲ್ಲ. ನೀರ್ದೋಸೆ ಖ್ಯಾತಿಯ ವಿಜಯ್ ಪ್ರಸಾದ್ ಜೊತೆ 'ತೋತಾಪುರಿ' ಸಿನಿಮಾ ಮಾಡಿದರು. ಈ ಚಿತ್ರ ಸಂಪೂರ್ಣವಾಗಿ ಮುಗಿದಿದ್ದು, ತೆರೆಗೆ ಬರಲು ಸಜ್ಜಾಗಿದೆ. ವರದಿಗಳ ಪ್ರಕಾರ ಈ 'ತೋತಾಪುರಿ 2' ಸಿನಿಮಾವೂ ತಯಾರಾಗ್ತಿದೆ. 'ಮಠ' ಗುರುಪ್ರಸಾದ್ ನಿರ್ದೇಶನದ 'ರಂಗನಾಯಕ' ಚಿತ್ರದಲ್ಲಿಯೂ ಜಗ್ಗೇಶ್ ನಾಯಕನಟನಾಗಿ ಅಭಿನಯಿಸುತ್ತಿದ್ದಾರೆ. ವಿಖ್ಯಾತ್ ಈ ಚಿತ್ರ ನಿರ್ಮಿಸುತ್ತಿದ್ದು, ಚಿತ್ರೀಕರಣ ಹಂತದಲ್ಲಿದೆ.
ಇತ್ತೀಚಿಗಷ್ಟೆ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ 'ರಾಘವೇಂದ್ರ ಸ್ಟೋರ್ಸ್' ಎಂಬ ಹೊಸ ಸಿನಿಮಾ ಘೋಷಣೆಯಾಗಿದ್ದು, ಈ ಚಿತ್ರವನ್ನು ರಾಜಕುಮಾರ, ಯುವರತ್ನ ಖ್ಯಾತಿಯ ಸಂತೋಷ್ ಆನಂದ್ ರಾಮ್ ನಿರ್ದೇಶಿಸುತ್ತಿದ್ದಾರೆ.


Click it and Unblock the Notifications











