ವಿಷ್ಣು ದಾದಾನ ಪ್ರತಿಮೆ ಧ್ವಂಸ; ಕನ್ನಡಿಗರನ್ನು 45 ವರ್ಷ ರಂಜಿಸಿದ ತಪ್ಪಿಗೆ ಈ ಶಿಕ್ಷೆನಾ? ನಟ ಜಗ್ಗೇಶ್ ಪ್ರಶ್ನೆ
ಕನ್ನಡ ಚಿತ್ರರಂಗದ ದಿಗ್ಗಜ ನಟ ದಿವಂಗತ ವಿಷ್ಣುವರ್ಧನ್ ಅವರ ಪುತ್ಥಳಿಯನ್ನು ಯಾರೊ ಕಿಡಿಗೇಡಿಗಳು ನೆಲಸಮ ಮಾಡಿದ ಘಟನೆ ಚಿತ್ರರಂಗ ಮತ್ತು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
Recommended Video

ಮಾಗಡಿ ರಸ್ತೆಯ ಬಾಲಗಂಗಾಧರ ಸ್ವಾಮೀಜಿ ವೃತ್ತದಲ್ಲಿ ವಿಷ್ಣುವರ್ಧನ್ ಅವರ ಪ್ರತಿಮೆ ನಿರ್ಮಿಸಲಾಗಿತ್ತು. ಈ ಪ್ರತಿಮೆಯನ್ನು ಶುಕ್ರವಾರ (ಡಿ.25) ರಾತ್ರಿ ಯಾರೊ ಕಿಡಿಗೇಡಿಗಳು ಕೆಡವಿ ಕೊಂಡೊಯ್ದಿದ್ದಾರೆ. ಈ ಘಟನೆ ಖಂಡಿಸಿ ವಿಷ್ಣು ಅಭಿಮಾನಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಅಲ್ಲದೇ ಅನೇಕ ಗಣ್ಯರು ಈ ಘಟನೆಯನ್ನು ಖಂಡಿಸಿದ್ದಾರೆ.
ನಟ ದರ್ಶನ್ ಸೇರಿದಂತೆ ಅನೇಕರು ಆ ಘಟನೆಯ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಈ ಘಟನೆಯ ಬಗ್ಗೆ ನಟ ಜಗ್ಗೇಶ್ ಪ್ರತಿಕ್ರಿಯೆ ನೀಡಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಜಗ್ಗೇಶ್, 'ಕನ್ನಡಿಗರನ್ನ 45 ವರ್ಷ ರಂಜಿಸಿದ ತಪ್ಪಿಗೆ ಈ ಶಿಕ್ಷೆನಾ? ಎಂದು ಪ್ರಶ್ನೆ ಮಾಡಿದ್ದಾರೆ.

'ಕನ್ನಡಿಗರನ್ನ 45 ವರ್ಷ ರಂಜಿಸಿದ ತಪ್ಪಿಗೆ ಈ ಶಿಕ್ಷೆನಾ? ಆತನ ಆತ್ಮ ಈ ರಾಕ್ಷಸಿ ಕೃತ್ಯ ಗಮನಿಸದೆ ಇರಬಹುದು. ಆದರೆ ನೆನಪಿಡಿ ರಕ್ಕಸರೆ ನೀವು ಅಪಮಾನಿಸಿದ್ದು ನಿಮ್ಮ ರಂಜಿಸಿ ನಿರ್ಗಮಿಸಿದ ನಟನ ಅಲ್ಲ. ಬದಲಾಗಿ ನಿಮ್ಮ ಕನ್ನಡ ನೆಲದ ಮೆಚ್ಚಿನ ಮಗನನ್ನ. ನಿಮ್ಮ ತಂದೆ ತಾಯಿವಂಶ ಮೆಚ್ಚಿದ ಆತ್ಮ ಅದು. ನಿಮ್ಮ ಕೃತ್ಯ ಯಾವದೇವರು ಕ್ಷಮಿಸನು, ನತದೃಷ್ಟರೆ.' ಎಂದಿದ್ದಾರೆ.
'ಯಾವುದೋ ಭಾಷೆ ನಟನ ವೈಭವಿಕರಿಸಿ ವಿಶಾಲ ಹೃದಯ ಎನ್ನುವವರೆ. ನಿಮ್ಮ ರಂಜಿಸಿ ಖುಷಿ ಪಡಿಸಿ ಸಂತನಂತೆ ಬಾಳಿ ನಿರ್ಗಮಿಸಿದ ಕಲಾಬಂಧು ಸತ್ತಮೇಲು ಕೊಂದು ಅಪಮಾನಿಸಿದ ಪಾಪಿಗಳಿಗೆ ತಕ್ಕ ಪಾಠಕಲಿಸಿ. ಕಲಾ ಬಂಧು ಶಿಲೆಯನ್ನ ಮರು ಸ್ಥಾಪಿಸಿ ಗೌರವಿಸಿ ಕನ್ನಡತನದ ವಿಶಾಲ ಹೃದಯ ಪ್ರದರ್ಶಿಸಿ. ರಂಜಿಸಿ ಕಣ್ಮರೆಯಾದ ಕಲಾವಿದರಿಗೆ ಹೃದಯದಲ್ಲಿ ಜಾಗನೀಡಿ. ಅದು ಕನ್ನಡದ ಧರ್ಮ' ಎಂದು ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇನ್ನು ನಟ ದರ್ಶನ್ ಟ್ವೀಟ್ ಮಾಡಿ 'ಕರ್ನಾಟಕದಲ್ಲಿ ಅತಿಯಾಗಿ ಪ್ರೀತಿಸೋ, ಆರಾಧಿಸೋ ವ್ಯಕ್ತಿಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ನಮ್ಮ ನಲ್ಮೆಯ ಸಾಹಸ ಸಿಂಹ ಡಾ.ವಿಷ್ಣು ಸರ್ ಪುತ್ಥಳಿಯನ್ನು ಯಾರೋ ಕಿಡಿಗೇಡಿಗಳು ಯಾರು ಇಲ್ಲದ ಹೊತ್ತಿನಲ್ಲಿ ಧ್ವಂಸ ಮಾಡಿರುವುದು ನಾಚಿಕೆಯ ಸಂಗತಿ. ಇಂತ ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು' ಎಂದು ಆಗ್ರಹಿಸಿದ್ದಾರೆ.


Click it and Unblock the Notifications











