ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿ ಅಳಿಲು ಸೇವೆ ಮಾಡಿ: ನಟ ಜಗ್ಗೇಶ್ ಮನವಿ
ಐತಿಹಾಸಿಕ ರಾಮ ಮಂದಿರ ನಿರ್ಮಾಣಕ್ಕೆ ಈಗಾಗಲೇ ನಿಧಿ ಸಮರ್ಪಣ ಅಭಿಯಾನ ಪ್ರಾರಂಭವಾಗಿದೆ. ಈಗಾಗಲೇ ಅನೇಕರು ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುತ್ತಿದ್ದಾರೆ. ದೇಶಾದ್ಯಂತ ಮನೆ ಮನೆಗೆ ತಲುಪಿ ಜನರಿಂದ ದೇಣಿಗೆ ಸಂಗ್ರಹಿಸಲು ರಾಮ ಮಂದಿರ ಟ್ರಸ್ಟ್ ನಿರ್ಧರಿಸಿದೆ.
ರಾಜ್ಯದಲ್ಲಿ ಜನವರಿ 15 ರಿಂದ ಫೆಬ್ರವರಿ 27ರವರೆಗೂ ವಿಶ್ವ ಹಿಂದೂ ಪರಿಷತ್ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಮಾಡಲಿದೆ. ತಲಾ 5 ಮಂದಿಯನ್ನು ಒಳಗೊಂಡ ವಿ ಎಚ್ ಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಹಣ ಸಂಗ್ರಹಿಸಲಿದ್ದಾರೆ ಎಂದು ಕೇಂದ್ರಿಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಡಿ ಮಾಹಿತಿ ನೀಡಿದ್ದಾರೆ.
ಐತಿಹಾಸಿಕ ರಾಮ ಮಂದಿರ ನಿರ್ಮಾಣದ ಅನೇಕ ವರ್ಷಗಳ ಕನಸು ನನಸಾಗುತ್ತಿದೆ. ಇತ್ತೀಚಿಗಷ್ಟೆ ನಟಿ ಪ್ರಣಿತಾ ಸುಭಾಷ್ ಒಂದು ಲಕ್ಷ ದೇಣಿಗೆ ನೀಡಿ, ನೀವು ನೀಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಇದೀಗ ನಟ ಜಗ್ಗೇಶ್ ಸಹ ದೇಣಿಗೆ ನೀಡಿ ಎಂದು ಕೇಳಿಕೊಂಡಿದ್ದಾರೆ.

ಎಲ್ಲಾ ಬಾಂಧವರಲ್ಲಿ ಮನವಿ
'ಎಲ್ಲಾ ಕನ್ನಡದ ಮನಗಳಿಗೆ ನಮಸ್ಕಾರ. ಗುರು ರಾಯರ ನೆಚ್ಚಿನ ದೇವರು ಶ್ರೀರಾಮ. ರಾಮ ನಮ್ಮ ದೊರೆ, ಭಾರತದ ಪ್ರತೀಕ. 500 ವರ್ಷದ ಹೋರಾಟದ ನಂತರ ರಾಮ ಮಂದಿರ ಕಟ್ಟಬೇಕು ಎನ್ನುವ ಘನವಾದ ನಿರ್ಣಯವಾಗಿದೆ. ಎಲ್ಲಾ ನನ್ನ ಬಾಂಧವರಲ್ಲಿ ನನ್ನ ಮನವಿ ಇಷ್ಟೆ.'

ನಿಮ್ಮ ಕೈಯಲ್ಲಿ ಎಷ್ಟು ಆಗುತ್ತೋ ಅಷ್ಟು ಕೊಡಿ
'ನಿಮ್ಮ ಕೈಯಲ್ಲಿ ಎಷ್ಟು ಆಗುತ್ತೋ ಅಷ್ಟು ಹಣವನ್ನು ರಾಮ ಮಂದಿರ ಕಟ್ಟಲು ದೇಣಿಗೆಯಾಗಿ ಕೊಡಿ. ದೇವಸ್ಥಾನ ಮುಗಿದ ಮೇಲೆ ಇಡೀ ವಿಶ್ವವೇ ಬಂದು ನೋಡುತ್ತೆ. ನಾವು ಹೋಗುತ್ತೇವೆ, ನೀವು ಹೋಗಿ. ನಿಂತಾಗ ನಮ್ಮ ಮನಸ್ಸು ಹೆಮ್ಮೆ ಪಡಬೇಕು. ನನ್ನ ಒಂದು ಅಳಿಲು ಕಾಣಿಕೆ ಕೂಡ ಈ ಆಲಯದಲ್ಲಿ ಸೇರಿದೆ ಅಂತ. ಆ ಕರ್ತವ್ಯವನ್ನು ಮಾಡೋಣ' ಎಂದಿದ್ದಾರೆ.

ನಮ್ಮ ತಲೆಮಾರಿನಲ್ಲಿ ಆಗುತ್ತಿರುವುದೇ ದೊಡ್ಡ ಪುಣ್ಯ
'ಈ ಪುಣ್ಯ ಇನ್ನೊಂದು ಜನ್ಮಕ್ಕೆ ಯಾರಿಗೂ ಸಿಗಲ್ಲ. ನಮ್ಮ ಕಾಲದಲ್ಲಿ, ನಮ್ಮ ತಲೆಮಾರಿನಲ್ಲಿ ಆಗಿದೆಯಲ್ಲ ಎನ್ನುವುದೇ ದೊಡ್ಡ ಪುಣ್ಯ ಅಂತ ಭಾವಿನೋಣ. ದಯಮಾಡಿ ತಾವು ದೇಣಿಗೆ ಕೊಡಲು ತಯಾರಾಗಿ. ದೇಣಿಗೆಯನ್ನು ನೇರವಾಗಿ ತಲುಪಿಸಿ. ಜೈ ಶ್ರೀರಾಮ್' ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
Recommended Video

1 ಲಕ್ಷ ರೂ. ನೀಡಿದ ಪ್ರಣಿತಾ
ರಾಮ ಮಂದಿರ ನಿರ್ಮಾಣ ನಿಧಿ ಸಂಗ್ರಹಕ್ಕೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿರುವ ನಟಿ ಪ್ರಣಿತಾ, ನೀವೆಲ್ಲರೂ ಕೈ ಜೋಡಿಸಿ ಎಂದು ಮನವಿ ಮಾಡಿದ್ದಾರೆ. ಈ ಕುರಿತು ಟ್ವಿಟ್ಟರ್ನಲ್ಲಿ ವಿಡಿಯೋ ಮೂಲಕ ಮಾಹಿತಿ ನೀಡಿರುವ ಪ್ರಣಿತಾ ಸುಭಾಷ್ 'ಅಯೋಧ್ಯೆ ರಾಮ ಮಂದಿರ ನಿಧಿ ಸಂಗ್ರಹ ಅಭಿಯಾನಕ್ಕಾಗಿ ನಾನು 1 ಲಕ್ಷ ರೂ ನೀಡಿದ್ದೇನೆ. ನೀವೆಲ್ಲರೂ ಕೈಜೋಡಿಸಿ ಈ ಐತಿಹಾಸಿಕ ಅಭಿಯಾನದಲ್ಲಿ ಭಾಗಿಯಾಗಿ' ಎಂದು ಮನವಿ ಮಾಡಿಕೊಂಡಿದ್ದಾರೆ.


Click it and Unblock the Notifications











