ಮಗನ ಜಾತಕ ಫಲದ ಬಗ್ಗೆ ಜಗ್ಗೇಶ್ ಮಾತು
ಹಿರಿಯ ನಟ ಜಗ್ಗೇಶ್ ಆಧ್ಯಾತ್ಮದ ಬಗ್ಗೆ ಟ್ವಿಟ್ಟರ್ನಲ್ಲಿ ಆಗಾಗ್ಗೆ ಮಾತನಾಡುತ್ತಿರುತ್ತಾರೆ. ಮಹಾನ್ ದೈವ ಭಕ್ತರಾಗಿರುವ ಜಗ್ಗೇಶ್ ಜ್ಯೋತಿಷ್ಯವನ್ನು ನಂಬುತ್ತಾರೆ.
ಮಗ ಗುರುರಾಜ್ ನಟಿಸಿರುವ 'ಕಾಗೆ ಮೊಟ್ಟೆ' ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟ ಜಗ್ಗೇಶ್, ಮಗನ ಜಾತಕ ಫಲ, ಅವನ ಭವಿಷ್ಯ ಹಾಗೂ ಮಗ ನಿರ್ದೇಶಿಸಿ, ತಾವು ನಟಿಸುತ್ತಿರುವ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ.
''ನನ್ನ ಮಗನಿಗೆ ಬುಧಾದಿತ್ಯ ಯೋಗವಿದೆ. ಎರಡು ಗ್ರಹಗಳು ಒಟ್ಟಿಗೆ ಸೇರುವ ಯೋಗ ಬರುವುದು ಅಪರೂಪ ಅದು ಗುರುಗೆ ಇದೆ. ಹಾಗಾಗಿ ಅವನು ಮಾಡುವ ಕೆಲಸಗಳೆಲ್ಲವೂ ಯಶಸ್ವಿಯಾಗುತ್ತವೆ'' ಎಂದಿದ್ದಾರೆ ನಟ ಜಗ್ಗೇಶ್.

ಮಗ ಗುರುರಾಜ್ ಸಿನಿಮಾ ಒಂದನ್ನು ನಿರ್ದೇಶಿಸುತ್ತಿದ್ದು, ಸಿನಿಮಾದಲ್ಲಿ ಜಗ್ಗೇಶ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕತೆಯನ್ನು ಜಗ್ಗೇಶ್ ಬಹುವಾಗಿ ಮೆಚ್ಚಿಕೊಂಡಿದ್ದು, ಕೆಲವು ಬದಲಾವಣೆಗಳಿಗೆ ಸೂಚಿಸಿದ್ದಾರಂತೆ.
ಈ ಬಗ್ಗೆ ಮಾತನಾಡಿದ ಜಗ್ಗೇಶ್, ''ಗುರು ನನಗೆ ಕತೆ ಹೇಳಿದಾಗ ದಂಗಾಗಿಬಿಟ್ಟೆ. ಕತೆ ಬಹಳ ಚೆನ್ನಾಗಿದೆ. ಆದರೆ ನನಗೆ ಇನ್ನೂ ಒಳ್ಳೆ ಡೈಲಾಗ್ಸ್ ಬೇಕು, ಚಿತ್ರಕತೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡು. ಆಗ ನಾನು ನಟಿಸುತ್ತೇನೆ'' ಎಂದು ಹೇಳಿದ್ದೇನೆ ಎಂದರು.
ಗುರುರಾಜ್ ನಟಿಸುತ್ತಿರುವ 'ಕಾಗೆ ಮೊಟ್ಟೆ' ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಿದ್ದು, ಮೂವರು ಹಳ್ಳಿ ಯುವಕರು ಬೆಂಗಳೂರಿಗೆ ಬಂದು ಇಲ್ಲಿ ಭೂಗತ ಲೋಕಕ್ಕೆ ಪ್ರವೇಶಿಸಿ ದೊಡ್ಡ ರೌಡಿಗಳನ್ನು ಎದುರು ಹಾಕಿಕೊಂಡು ಅವರೊಟ್ಟಿಗೆ ಹೋರಾಡುವ ಕತೆಯನ್ನು ಹೊಂದಿದೆ.
'ಕಾಗೆ ಮೊಟ್ಟೆ' ಸಿನಿಮಾವನ್ನು ಚಂದ್ರಹಾಸ ನಿರ್ದೇಶನ ಮಾಡಿದ್ದು, ಗುರುರಾಜು ಜೊತೆಗೆ ಹೇಮಂತ್ ರೆಡ್ಡಿ ಮತ್ತು ಮಾದೇಶ್ ಸಹ ನಟಿಸಿದ್ದಾರೆ. ನಾಯಕಿಯಾಗಿ ತನುಜಾ ನಟಿಸಿದ್ದು, ಈ ಹುಡುಗರಿಗೆ ಬೆಂಬಲವಾಗಿ ನಿಲ್ಲುವ ವೇಶ್ಯೆ ಪಾತ್ರದಲ್ಲಿ ಸುಕನ್ಯಾ ನಟಿಸಿದ್ದಾರೆ. ಶರತ್ ಲೋಹಿತಾಶ್ವ, ಪೊನ್ನಂಬಲಂ, ರಾಜ್ ಬಹದ್ದೂರ್ ಅವರುಗಳು ಸಿನಿಮಾದಲ್ಲಿ ಖಳರ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ನಾಗೇಂದ್ರ ಪ್ರಸಾದ್ ಸಂಭಾಷಣೆ ಬರೆದಿದ್ದಾರೆ. ಕವಿರಾಜ್ ಹಾಗೂ ಜಯಂತ್ ಕಾಯ್ಕಿಣಿ ಹಾಡುಗಳನ್ನು ಬರೆದಿದ್ದಾರೆ.
ಈ ಸಿನಿಮಾದ ಬಗ್ಗೆ ಜಗ್ಗೇಶ್ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದು, ಸಿನಿಮಾ ಪಕ್ಕಾ ಹಿಟ್ ಆಗಲಿದೆ ಎಂದು ಇಂದಿನ ಸಮಾರಂಭದಲ್ಲಿ ಹೇಳಿದ್ದಾರೆ. ಸಮಾರಂಭದಲ್ಲಿ ಹಲವು ವಿಷಯಗಳ ಬಗ್ಗೆ ಜಗ್ಗೇಶ್ ಮಾತನಾಡಿದ್ದು, ''ಮಗ ಗುರುರಾಜ್ಗೆ ಪರಭಾಷೆಗಳಿಂದ ಹಲವು ಅವಕಾಶಗಳು ಬಂದವು ಆದರೆ ನಾನೇ ಅವನ್ನು ಬೇಡವೆಂದೆ. ನನ್ನ ಜೀವನದಲ್ಲಿ ಮಾಡಿದ ದೊಡ್ಡ ತಪ್ಪು ಅದು, ನಾನು ಹಾಗೆ ಮಾಡಬಾರದಿತ್ತು'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


Click it and Unblock the Notifications











