'ನಾನು ಕೇಳಿದ ಪ್ರಶ್ನೆಗೆ ಅನಂತ್ ನಾಗ್ ಕೊಟ್ಟ ಉತ್ತರ ಕೇಳಿ ಓಡಿಹೋದೆ'
ಕನ್ನಡ ಚಿತ್ರರಂಗ ಕಂಡ ಮಿಸ್ಟರ್ ಪರ್ಫೆಕ್ಟ್, ಸಜ್ಜನ ಕಲಾವಿದ ಅನಂತ್ ನಾಗ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಹಿಂದಿನ ಪೀಳಿಗೆ ಹಾಗೂ ಈಗಿನ ಪೀಳಿಗೆಯೂ ಇಷ್ಟಪಡುವ ಕಲಾವಿದ, ಜಂಟಲ್ಮ್ಯಾನ್ ಅನಂತ್ ನಾಗ್.
ಅನಂತ್ ನಾಗ್ ಅವರ ಜನುಮದಿನಕ್ಕೆ ಅಭಿಮಾನಿಗಳು, ಚಿತ್ರರಂಗದ ಆಪ್ತರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸಿದ್ದಾರೆ. ಅವರಂತೆ ಹಿರಿಯ ನಟ ಜಗ್ಗೇಶ್ ಸಹ ಟ್ವಿಟ್ಟರ್ನಲ್ಲಿ ಅನಂತ್ ನಾಗ್ಗೆ ವಿಶ್ ಮಾಡಿದ್ದಾರೆ.
ಹುಟ್ಟುಹಬ್ಬಕ್ಕೆ ಶುಭಕೋರಿದ ಜಗ್ಗೇಶ್ ಅಭಿಮಾನಿಗಳ ತಲೆಗೆ ಒಂದು ಹುಳ ಬಿಟ್ಟಿದ್ದಾರೆ. 1983ರಲ್ಲಿ ಶ್ವೇತಾಗುಲಾಭಿ ಚಿತ್ರದ ಕ್ಲೈಮ್ಯಾಕ್ಸ್ ವೇಳೆ ನಡೆದ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ. ಬಹಳ ಆಸಕ್ತಿಕರ ವಿಷಯವನ್ನು ಹಂಚಿಕೊಂಡಿರುವ ಜಗ್ಗೇಶ್, ಕ್ಲೈಮ್ಯಾಕ್ಸ್ನಲ್ಲಿ ಟ್ವಿಸ್ಟ್ ಕೊಟ್ಟು ಕಥೆ ಅರ್ಧಕ್ಕೆ ನಿಲ್ಲಿಸಿಬಿಟ್ಟಿದ್ದಾರೆ. ಇದರಿಂದ ಫ್ಯಾನ್ಸ್ ಗೊಂದಲಕ್ಕೆ ಒಳಗಾಗಿ ಜಗ್ಗೇಶ್ ಹಿಂದೆ ಬಿದ್ದಿದ್ದಾರೆ.

ಜಗ್ಗೇಶ್ ಪೋಸ್ಟ್....
''ಅನಂತನಾಗ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು.. ನಾನು ಶೇಷಾದ್ರಿಪುರ ಕಾಲೇಜಿನಲ್ಲಿ ಪಿಯುಸಿ ಓದುವಾಗ ಸ್ವಸ್ತಿಕ್ ಚಿತ್ರಮಂದಿರದಲ್ಲಿ ಚಂದನದಗೊಂಬೆ, ಗೀತಾಂಜಲಿಯಲ್ಲಿ 'ಕನ್ನೇಶ್ವರರಾಮ', ಅನುಪಮದಲ್ಲಿ 'ನಾನಿನ್ನಬಿಡಲಾರೆ' ಅನೇಕ ಚಿತ್ರಗಳ ನೋಡಿ ಅವರ ತುಂಬ ಇಷ್ಟಪಟ್ಟಿದ್ದೆ. 1983 'ಶ್ವೇತಗುಲಾಭಿ' ಚಿತ್ರದಲ್ಲಿ ಖಳಪಾತ್ರ ಮಾಡಿದೆ. ಆ ಸಂದರ್ಭದಲ್ಲಿ ನಡೆದ ಘಟನೆ. ಕ್ಲೈಮ್ಯಾಕ್ಸ್ ಚಿತ್ರಿಕರಣ ಅನಂತ ಸಾರ್ ಒಬ್ಬರೆ ಕೊತು ವಾಚ್ ತಿರುಗಿಸುತ್ತಿದ್ದರು. ನಾನು ಮಾತಾಡಿಸುವ ಆಸೆಯಿಂದ ಒಂದು ಪ್ರಶ್ನೆ ಕೇಳಿದೆ. ಅದಕ್ಕೆ ಅವರು ಕೊಟ್ಟ ಉತ್ತರ ಅದರಿ ಅಲ್ಲಿಂದ ಓಡಿಹೋದೆ. ಆ ಉತ್ತರ ಮಾತ್ರ ಹೇಳಲಾರೆ ಆದರು ಭಯಂಕರ. ನಂತರ ನಾನು ನಾಯಕನಾಗಿ ಗಣೇಶ, ವಾಸ್ತುಪ್ರಕಾರ, ನಟಿಸುವಾಗ ಆ ಮಾತು ನೆನೆದು ಒಬ್ಬನೆ ಜೋರಾಗಿ ನಗುತ್ತಿದ್ದೆ'' ಎಂದು ಪೋಸ್ಟ್ ಹಾಕಿದ್ದಾರೆ.

ಜಗ್ಗೇಶ್ ಈ ಪೋಸ್ಟ್ ಓದಿದ ಮೇಲೆ ನೆಟ್ಟಿಗರಿಗೆ ಆ ಪ್ರಶ್ನೆ ಏನಿರಬಹುದು ಎಂದು ತಿಳಿದುಕೊಳ್ಳುವ ಕಾತುರ ಹೆಚ್ಚಾಗಿದೆ. ಈ ಬಗ್ಗೆ ಅಭಿಮಾನಿಗಳು ಜಗ್ಗೇಶ್ ಅವರನ್ನು ಪ್ರಶ್ನೆಯಾದರೂ ಹೇಳಿ ಸರ್, ಉತ್ತರ ನಾವೇ ಊಹಿಸಿಕೊಳ್ಳುತ್ತೇವೆ ಎಂದು ಕೇಳುತ್ತಿದ್ದಾರೆ.
ಮತ್ತೊಂದು ಪೋಸ್ಟ್ನಲ್ಲಿ ''ಅಪರೂಪಕ್ಕೆ ಹುಟ್ಟುವ ಇಂಥ ಕಲಾವಿದರು ನಮ್ಮ ನಾಡಲ್ಲಿ ಹುಟ್ಟಿದ್ದು ನಮ್ಮ ಪುಣ್ಯ. ಎಲ್ಲರು ಅವರ ನಟನೆ ನೋಡಿದ್ದಾರೆ. ನಾನು ಅವರು ಹಿಂದುಸ್ತಾನಿ ಚೀಸ್ ಗಳ ಗುನುಗೋದು ಹಾಗು ಭಾಗ್ಯದಲಕ್ಷ್ಮೀ ಬಾರಮ್ಮ ಹಾಡೋದು ಕೇಳಿರುವೆ. ಇಂಥ ಅದ್ಭುತ ನಟನಿಗೆ ರಾಷ್ಟ್ರ ಪುರಸ್ಕಾರಕ್ಕೆ ನಮ್ಮ ಕರ್ನಾಟಕ ಮುಖ್ಯಮಂತ್ರಿಗಳು ಪರಿಗಣಿಸಬೇಕು ಅದು ನನ್ನ ವಿನಂತಿ'' ಎಂದು ವಿನಂತಿಸಿದ್ದಾರೆ.


Click it and Unblock the Notifications











