ಏನ್ ಜಗ್ಗೇಶ್ ! ಕನ್ನಡ ಚಿತ್ರಗಳ ಬಗ್ಗೆ ಹೀಗೆ ಹೇಳ್ಬಿಟ್ರಿ

ನಮ್ಮವರಿಗೆ ಕನ್ನಡ ಚಿತ್ರ ನೋಡೋದು, ಕನ್ನಡ ಪತ್ರಿಕೆ ಓದೋದು, ಕನ್ನಡ ಮಾತಾಡೋದು ಅಂದ್ರೆ ಏನೋ ಒಂಥರಾ ಬೇಸರ. ಕನ್ನಡ ಚಿತ್ರಗಳ ದಯನೀಯ ಸ್ಥಿತಿಗೆ ಇಂದು ಯಾರು ಕಾರಣ ಎಂದು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ನವರಸನಾಯಕ ಜಗ್ಗೇಶ್ ಬೇಸರದ ಮಾತನ್ನು ಆಡಿದ್ದಾರೆ.
ಮುಖ್ಯವಾಗಿ ಯುವಕರು ಅನ್ಯಭಾಷೆಯ ಚಿತ್ರಗಳ ವ್ಯಾಮೋಹಕ್ಕೆ ಬಿದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಯೂಟೂಬ್, ಫೇಸ್ ಬುಕ್. ಕನ್ನಡ ಚಿತ್ರಗಳ ಬಗ್ಗೆ ತಾತ್ಸಾರ ಮನೋಭಾವ ಬೇಡ. ಕನ್ನಡ ಚಿತ್ರಗಳಿಗೂ ಕೋಟಿ ಕೋಟಿ ರೂಪಾಯಿ ವ್ಯಾಪಾರ ಮಾಡುವ ತಾಕತ್ತಿದೆ. ಯುವ ಪೀಳಿಗೆ ಕನ್ನಡ ಸಿನಿಮಾ ಕಡೆ ತಿರುಗಿ ನೋಡದಿದ್ದರೆ ನಮ್ಮ ಸಾಹಿತ್ಯ, ಸಂಸ್ಕೃತಿ ಉಳಿಯುವುದು ಹೇಗೆ ಎಂದು ಜಗ್ಗೇಶ್ ನೋವು ವ್ಯಕ್ತ ಪಡಿಸಿದ್ದಾರೆ.
ಕನ್ನಡ ಚಿತ್ರೋದ್ಯಮದವರು ತಮ್ಮಮ್ಮ ಅಹಂ ಬದಿಗೊತ್ತಿ ಚಿತ್ರರಂಗದ ಏಳಿಗೆಗೆ ಮುಂದಾಗಬೇಕು ಎನ್ನುವುದು ನನ್ನ ಅಭಿಪ್ರಾಯ. ಕನ್ನಡ ಚಿತ್ರಗಳ ಯಶಸ್ಸಿಗೆ ಚಿತ್ರೋದ್ಯಮ ಮತ್ತು ಕನ್ನಡಿಗರು ಠೊಂಕಕಟ್ಟಿ ನಿಲ್ಲೋಣ. ಚಿತ್ರೋದ್ಯಮ ನಿಮ್ಮನ್ನೇ ನಂಬಿಕೊಂಡಿರುವುದು ಎಂದು ಜಗ್ಗೇಶ್ ಅಭಿಮಾನಿಗಳನ್ನು ಕೋರಿದ್ದಾರೆ.
'ಮಂಜುನಾಥ ಬಿಎಎಲ್ಎಲ್ಬಿ' ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಈ ಚಿತ್ರ ಎದ್ದೇಳು ಮಂಜುನಾಥ ಚಿತ್ರದ ಮುಂದುವರಿದ ಭಾಗವೇ ಎಂದು ಬಹಳಷ್ಟು ಜನರು ನನ್ನನ್ನು ಕೇಳಿದ್ದರು. ಇದು ಆ ಚಿತ್ರದ ಎರಡನೇ ಭಾಗವಲ್ಲ, ಚಿತ್ರದ ನಿರ್ದೇಶಕ ಮೋಹನ್ ಒಂದು ನೀಟಾದ ಸಿನಿಮಾ ಮಾಡಿದ್ದಾರೆ.
ರಾಜರತ್ನಂ ಅವರ ಬ್ರಹ್ಮ ನಿನಗೆ ಜೋಡಿಸ್ತೀನಿ ಹಾಡನ್ನು ರಿಮಿಕ್ಸ್ ಮಾಡಲಾಗಿದೆ. ಜಗ್ಗೇಶ್ ಈ ಹಾಡನ್ನು ಹಾಡಿದ್ದಾರೆ. ಅವರ ಡಿಫರೆಂಟ್ ವಾಯ್ಸ್ ಎಲ್ಲರಿಗೂ ಇಷ್ಟವಾಗುತ್ತೆ. ಕುಡುಕರಿಗಾಗಿಯೇ ಚಿತ್ರದಲ್ಲಿ ಹಾಡೊಂದು ಇದೆ. ಈ ಹಾಡೂ ಕಿಕ್ ಕೊಡುತ್ತೆ ಎಂದು ನಿರ್ದೇಶಕ ಮೋಹನ್ ಭರವಸೆಯ ಮಾತನ್ನಾಡಿದ್ದಾರೆ.
ಕೃಪೆ:ಉದಯವಾಣಿ


Click it and Unblock the Notifications











