5 ಭಾಷೆಗಳಲ್ಲಿ ತೋತಾಪುರಿ ರಿಲೀಸ್ ಆದ್ರೆ, ಇದು ಪ್ಯಾನ್ ಇಂಡಿಯಾ ಚಿತ್ರ ಅಲ್ವಂತೆ
ಕನ್ನಡದ ಸಿನಿಮಾದಗಳು ಇತ್ತೀಚೆಗೆ ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಲ್ಲು ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿವೆ. ಸಾಕಷ್ಟು ಸಿನಿಮಾಗಳು ಈಗಾಗಲೇ ಕನ್ನಡ ಮಾತ್ರವಲ್ಲದೇ ಪರಭಾಷೆಗಳಲ್ಲೂ ರಿಲೀಸ್ ಆಗಿ ಜನ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿವೆ. ಬೇರೆ ಭಾಷೆಯ ಸಿನಿಮಾಗಳು ಕನ್ನಡದಲ್ಲಿ ರಿಲೀಸ್ ಆಗಿ ಹೇಗೆ ನಮ್ಮ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೋ ಹಾಗೇ ಕನ್ನಡ ಸಿನಿಮಾಗಳು ಕೂಡ ಕನ್ನಡದ ಹೊರತಾಗಿಯೂ ಪ್ರೇಕ್ಷಕರನ್ನು ಸೆಳೆಯುತ್ತಿದೆ.
ಇದೀಗ ಕನ್ನಡದ ತೋತಾಪುರಿ ಸಿನಿಮಾ ಕೂಡ ಐದು ಭಾಷೆಗಳಲ್ಲಿ ರಿಲೀಸ್ ಆಗಲು ಸಜ್ಜಾಗುತ್ತಿದೆ. ನವರಸ ನಾಯಕ ಜಗ್ಗೇಶ್ ಅಭಿನಯದ ಈ ಸಿನಿಮಾ ಸೆಟ್ಟೇರಿದಾಗಿನಿಂದಲೂ ಸುದ್ದಿಯಲ್ಲಿದೆ. ನೀರ್ ದೋಸೆ ಸಿನಿಮಾ ಹಿಟ್ ಆದ ನಂತರದಲ್ಲಿ ವಿಜಯ್ ಪ್ರಸಾದ್ ತೋತಾಪುರಿ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಈ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ನಗೆಕಡಲಲ್ಲಿ ತೇಲಿಸಲು ಜಗ್ಗೇಶ್ ಮತ್ತು ವಿಜಯ್ ಪ್ರಸಾದ್ ಒಟ್ಟಾಗಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಲುಕ್, ಟೀಸರ್ಗಳು ರಿಲೀಸ್ ಆಗಿದ್ದು ಸಿನಿಪ್ರಿಯರು ಚಿತ್ರ ವೀಕ್ಷಣೆಗೆ ತುದಿಗಾಲಲ್ಲಿ ನಿಂತಿದ್ದಾರೆ. ಇದರ ಬೆನ್ನಲ್ಲೆ ಚಿತ್ರತಂಡ ಮತ್ತೊಂದು ಸುದ್ದಿಯನ್ನು ಹೊರಬಿಟ್ಟಿದ್ದು, 5 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ತಿಳಿಸಿದೆ. ಇದರ ಪೋಸ್ಟರ್ಅನ್ನು ಚಿತ್ರತಂಡ ರಿಲೀಸ್ ಮಾಡಿದೆ.
ಜಗ್ಗೇಶ್ ಮುಖ್ಯಭೂಮಿಕೆಯ ತೋತಾಪುರಿ ಸಿನಿಮಾ ಈಗಾಗಲೇ ಚಿತ್ರೀಕರಣ ಕಂಪ್ಲೀಟ್ ಮಾಡಿ ಥಿಯೇಟರ್ಗೆ ಪ್ರವೇಶ ಪಡೆಯಲು ಸಜ್ಜಾಗಿದೆ. ಜೊತೆಗೆ ಐದು ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗುತ್ತಿರುವ ಬಗ್ಗೆ ಚಿತ್ರತಂಡ ಅನೌನ್ಸ್ ಮಾಡಿದ್ದು, ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಹಾಗೆಯೇ ರಿಲೀಸ್ ಆಗಿರೋ ಪೋಸ್ಟರ್ ಕೂಡ ವಿಭಿನ್ನವಾಗಿದೆ.

"ದೇವ್ರಾಣೆಗು ನಮ್ದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲಾ,ನಮ್ದು ಬರೀ ಸಿನಿಮಾ. ದೃಷ್ಟಿ ಬಿದ್ರು ಪರ್ವಾಗಿಲ್ಲ ಆದ್ರೆ ವಕ್ರ ದೃಷ್ಠಿ ಬೀಳ್ದೇ ಇರ್ಲಿ" ಎಂದು ಹೇಳಿರುವ ತೋತಾಪುರಿ ಸಿನಿಮಾ ತಂಡ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಈ ರೀತಿ ಭಿನ್ನವಾಗಿ ಪೋಸ್ಟರ್ ಬಿಟ್ಟಿರುವ ಚಿತ್ರತಂಡ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಂತಿದೆ.
ಯಾಕಂದ್ರೆ ಈ ಹಿಂದೆ ನಟ ಜಗ್ಗೇಶ್ ಅವರೇ ಸ್ವತಃ ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಗರಂ ಆಗಿದ್ರು. ಪ್ಯಾನ್ ಇಂಡಿಯಾ ಸಿನಿಮಾ ಕನ್ನಡಿಗರಿಗೆ ವರ್ಕ್ಔಟ್ ಆಗಲ್ಲ ಎಂದಿದ್ದ ಜಗ್ಗೇಶ್ ಮಾತು ಈ ಸಂದರ್ಭದಲ್ಲಿ ನೆನಪಿಗೆ ಬರುತ್ತಿದೆ. ಹೀಗಾಗಿ ತೋತಾಪುರಿಯ ಈ ಪೋಸ್ಟರ್ ಪ್ರೇಕ್ಷಕರ ತಲೆಗೆ ಕೆಲಸ ಕೊಟ್ಟಂತಿದೆ. ಹೆಚ್ಚೇನು ಮಾಹಿತಿ ನೀಡದ ಚಿತ್ರತಂಡ ಸಿನಿಮಾ ಆದಷ್ಟು ಬೇಗ ರಿಲೀಸ್ ಆಗಲಿದೆ ಎಂಬ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ಇನ್ನು ಈ ತೋತಾಪುರಿ ಸಿನಿಮಾ ರೋಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದ್ದು, ಎರಡು ಭಾಗಗಳ ಸರಣಿಯಲ್ಲಿ ಚಿತ್ರ ರಿಲೀಸ್ ಆಗಲಿದೆ. ಮೊದಲ ಭಾಗದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಇದು ರಿಲೀಸ್ ಆದ ನಂತರದಲ್ಲಿ ಎರಡನೇ ಭಾಗ ರಿಲೀಸ್ ಆಗಲಿದೆ. ಚಿತ್ರ ಶೂಟಿಂಗ್ ಆರಂಭಿಸಿದಾಗ ಎರಡು ಭಾಗಗಳಲ್ಲಿ ಸಿನಿಮಾ ತಯಾರು ಮಾಡುವ ಬಗ್ಗೆ ಚಿಂತಿಸಿರಲಿಲ್ಲ ಆದರೆ ಶೂಟಿಂಗ್ ಮಾಡುವಾಗ ತಲೆಗೆ ಬಂದ ಯೋಚನೆ ಇದು ಹೀಗಾಗಿ ಎರೆಡು ಭಾಗಗಳಾಗಿ ಸಿನಿಮಾ ರಿಲೀಸ್ ಮಾಡುತ್ತಿರುವ ಬಗ್ಗೆ ನಿರ್ದೇಶಕ ವಿಜಯ್ ಪ್ರಸಾದ್ ಇತ್ತೀಚೆಗೆ ತಿಳಿಸಿದ್ರು. ಮೊದಲ ಭಾಗದ ಕ್ಲೈಮ್ಯಾಕ್ಸ್ನಲ್ಲಿ ಮುಂದಿನ ಭಾಗಕ್ಕೆ ಲಿಂಕ್ ಕೊಟ್ಟಿರುವ ಚಿತ್ರತಂಡ ಎರಡನೇ ಭಾಗವನ್ನು ಜನ ಮಿಸ್ ಮಾಡದೇ ನೊಡಬೇಕು ಎಂಬ ನಿಟ್ಟಿನಲ್ಲಿ ಕುತೂಹಲ ಹುಟ್ಟಿಸಿದ್ದಾರಂತೆ.
ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಪ್ರೋಮೊದಲ್ಲಿ ನಿರೀಕ್ಷೆ ಹುಟ್ಟಿಸಿರುವ ತೋತಾಪುರಿ ತಂಡ ಸಾಕಷ್ಟು ಪ್ರಯೋಗಗಳನ್ನು ಈ ಚಿತ್ರದಲ್ಲಿ ಮಾಡಿದೆ. ಇನ್ನು ಸಿನಿಮಾದಲ್ಲಿ ಸಾಕಷ್ಟು ತಾರಾಗಣವಿದ್ದು, ಜಗ್ಗೇಶ್ ರೈತನ ಪಾತ್ರದಲ್ಲಿ ಅಭಿನಯಿಸಿದ್ದು, ರಾಘವೇಂದ್ರ ಸ್ವಾಮಿಗಳ ಭಕ್ತರಾಗಿದ್ದಾರೆ. ಹಾಗೆ ಅದಿತಿ ಪ್ರಭುದೇವ ಮುಸ್ಲಿಂ ಯುವತಿ ಪಾತ್ರ, ಧನಂಜಯ್ ನಾರಾಯಣ ಪಿಳೈ ಪಾತ್ರ ನಿರ್ವಹಿಸಿದ್ದು, ಸುಮನ್ ರಂಗನಾಥ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನೂಪ್ ಸೀಳಿನ್ ಸಂಗೀತ ಚಿತ್ರಕ್ಕಿದೆ. ಕೆ.ಎ ಸುರೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ


Click it and Unblock the Notifications











