ಮಗನ ಆಕ್ಸಿಡೆಂಟ್, ತಮ್ಮ ಕೋಮಲ್ನ ಕೆಟ್ಟ ಸಮಯದ ಬಗ್ಗೆ ಜಗ್ಗೇಶ್ ಮಾತು
ನಟ, ರಾಜಕಾರಣಿ ಜಗ್ಗೇಶ್ ಅಧ್ಯಾತ್ಮದ ಬಗ್ಗೆ ಒಲವುಳ್ಳವರು. ಸಾಮಾಜಿಕ ಜಾಲತಾಣಗಳಲ್ಲಿ ತಾವು ನಂಬುವ ಮಂತ್ರಾಲಯ ರಾಯರ ಬಗ್ಗೆ ಅವರ ಪವಾಡಗಳ ಬಗ್ಗೆ, ರಾಯರಿಂದ ತಮ್ಮ ಜೀವನದಲ್ಲಾದ ಬದಲಾವಣೆಗಳ ಬಗ್ಗೆ ಆಗಾಗ್ಗೆ ಪೋಸ್ಟ್ ಮಾಡುತ್ತಲೇ ಇರುತ್ತಾರೆ.
ದೇವರ ಜೊತೆಗೆ ಜ್ಯೋತಿಷ್ಯ ಇನ್ನಿತರೆಗಳಲ್ಲಿಯೂ ವಿಶ್ವಾಸವುಳ್ಳ ಜಗ್ಗೇಶ್ ತಮ್ಮ ಕುಟುಂಬದ ಏರಿಳಿತಗಳನ್ನು ಅದರೊಟ್ಟಿಗೆ ಸಮೀಕರಿಸಿ ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಇದೀಗ ಜಗ್ಗೇಶ್ರ ಸಹೋದರ ಕೋಮಲ್ ಹೊಸದೊಂದು ಸಿನಿಮಾದೊಂದಿಗೆ ಕಮ್ಬ್ಯಾಕ್ಗೆ ಸಜ್ಜಾಗಿದ್ದು, ಆ ಬಗ್ಗೆ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ನಟ ಜಗ್ಗೇಶ್ ತಮ್ಮ ಪುತ್ರನ ಆಕ್ಸಿಡೆಂಟ್ ವಿಚಾರ ಹಾಗೂ ಕೋಮಲ್, ತಮ್ಮ ವೃತ್ತಿಯಲ್ಲಿ ಅನುಭವಿಸಿದ ಹಿನ್ನೆಡೆ ಬಗ್ಗೆ ಮಾತನಾಡಿದ್ದಾರೆ.

ಅಮಿತಾಬ್ ಬಚ್ಚನ್ಗೂ ಕಾಡಿತ್ತು ಕೇತು ದೆಸೆ
ಕೋಮಲ್ಗೆ ಕೇತು ದೆಸೆ ಇತ್ತು ಅದು ಅವನಿಗೆ ಏಳು ವರ್ಷ ಹಿನ್ನೆಡೆ ತಂದಿತು. ಏಳು ವರ್ಷದ ಹಿಂದೆಯೇ ಈ ಬಗ್ಗೆ ಅವನಿಗೆ ನಾನು ಎಚ್ಚರಿಕೆ ನೀಡಿದ್ದೆ. ಈಗ ಅದನ್ನು ಕಳೆದುಕೊಂಡು ಮತ್ತೆ ಕಮ್ಬ್ಯಾಕ್ ಮಾಡುತ್ತಿದ್ದಾರೆ. ಅಮಿತಾಬ್ ಬಚ್ಚನ್ ಸಹ ಏಳು ವರ್ಷ ತೀವ್ರ ಹಿನ್ನೆಡೆ ಅನುಭವಿಸಿದರು. ಆ ಏಳು ವರ್ಷ ಮುಗಿದ ಮೇಲೆ ರಾಜಕಾರಣಿ ಅಮರ್ಸಿಂಗ್, ಅಮಿತಾಬ್ರನ್ನು ಶಿವ ಮಂದಿರಕ್ಕೆ ಕರೆದುಕೊಂಡು ಹೋದರು. ಅಲ್ಲಿಂದ ಬಂದ ಬಳಿಕ ಅವರಿಗೆ ಕೌನ್ ಬನೇಗಾ ಕರೋಡ್ಪತಿ ದೊರಕಿತು. ದೊಡ್ಡ ಸ್ಟಾರ್ ಹೇಗೆ ಟಿವಿ ಶೋಗೆ ಬರುವುದು ಎಂದು ಕೊಂಡರು. ಆದರೂ ಬಂದರು ಆಮೇಲೆ ಆಗಿದ್ದೆಲ್ಲ ಇತಿಹಾಸ ಈಗವರು ವರ್ಷಕ್ಕೆ 200-300 ಕೋಟಿ ಆದಾಯ ತೆರಿಗೆ ಪಾವತಿಸುತ್ತಾರೆ'' ಎಂದಿದ್ದಾರೆ ಜಗ್ಗೇಶ್.

ಮಗನ ಕಾರು ಅಪಘಾತದ ಬಗ್ಗೆ ಜಗ್ಗೇಶ್ ಮಾತು
ಮಗ ಯತೀಶ್ ಕಾರು ಆಕ್ಸಿಡೆಂಟ್ ಬಗ್ಗೆಯೂ ಮಾತನಾಡಿರುವ ಜಗ್ಗೇಶ್, ''ಅವನಿಗೆ ಬುಧ ಭುಕ್ತಿ ಇತ್ತು. ಹುಷಾರಾಗಿರುವಂತೆ ಹೇಳಿದ್ದೆ. ಕೋವಿಡ್ ಸಮಯದಲ್ಲೆಲ್ಲ ರೂಮ್ನಿಂದಲೇ ಹೊರಗೆ ಬರುತ್ತಿರಲಿಲ್ಲ ಅಷ್ಟು ಭಯಸ್ತ. ಅಂದೂ ಸಹ ಹೊರಗೆ ಹೋಗಬೇಡ ಎಂದಿದ್ದೆ ಆದರೆ ಯಾರಿಗೂ ಹೇಳದೆ ಕಾರ್ ತಗೋಂಡು ಹೊರಗೆ ಹೋಗಿಬಿಟ್ಟ. ಎ.ಆರ್.ಬಾಬು ಪುತ್ರನಿಗೆ ಕರೆ ಮಾಡಿ ಬಿರಿಯಾನಿ ಮಾಡಿಸು ಎಂದು ಹೇಳಿ ವಾಪಸ್ ಬರುವಾಗ ಆಕ್ಸಿಡೆಂಟ್ ಆಯಿತು. ಅಂದು ಸಾವನ್ನು ಗೆದ್ದು ಬಂದ ಅವನು. ಆಕ್ಸಿಡೆಂಟ್ ಆದ ಕಾರನ್ನು ನಾವು ತೂಕಕ್ಕೆ ಹಾಕಬೇಕಾಗಿ ಬಂತು. ಅವನಿಗೂ ಈಗ ಬುದ ಭುಕ್ತಿ ಮುಕ್ತಾಯ ಆಗಿದೆ'' ಎಂದರು ಜಗ್ಗೇಶ್.

ಚಿಕ್ಕಬಳ್ಳಾಪುರದಲ್ಲಿ ಅಪಘಾತಕ್ಕೆ ಈಡಾಗಿದ್ದ ಕಾರು
ಜಗ್ಗೇಶ್ ಪುತ್ರ ಯತೀಶ್ ಚಲಾಯಿಸುತ್ತಿದ್ದ ಕಾರು ಚಿಕ್ಕಬಳ್ಳಾಪುರದ ಬಳಿ ಅಪಘಾತಕ್ಕೆ ಈಡಾಗಿತ್ತು. ಯತೀಶ್ ಪುತ್ರ ಮದ್ಯ ಸೇವನೆ ಮಾಡಿ ಕಾರು ಚಲಾಯಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದ್ದಿದ್ದವು. ಆಗ ಯತೀಶ್ ವಿರುದ್ಧ ಪ್ರಕರಣ ಸಹ ದಾಖಲಾಗಿತ್ತು. ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜಗ್ಗೇಶ್ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು. ಆಗ ಆಕ್ಸಿಡೆಂಟ್ ಬಗ್ಗೆ ಮಾತನಾಡದಿದ್ದ ಜಗ್ಗೇಶ್ ಕೊನೆಗೂ ಈಗ ಮಾತನಾಡಿದ್ದಾರೆ.

ನಗಿಸುವುದೇ ನಮ್ಮ ಕುಟುಂಬದ ಕಾಯಕ: ಜಗ್ಗೇಶ್
ನಾನು ಇದನ್ನೆಲ್ಲ ನಂಬ್ತೀನಿ, ಕೆಲವರು ದೇವರಿಲ್ಲ ಜ್ಯೋತಿಷ್ಯ ವಿಜ್ಞಾನ ಸುಳ್ಳು ಎಂದೆಲ್ಲ ವಿತಂಡ ಮಾಡ್ತಾರೆ ಅವರ ಬಗ್ಗೆ ಏನೂ ಹೇಳಲಾಗದು. ಈಗ ಕೋಮಲ್ ಕಾಲದ ಮೇಲೆ ಸಿನಿಮಾ ಮಾಡ್ತಿದ್ದಾರೆ, 'ಕಾಲಾಯ ನಮಃ' ಎಂದು ಹೆಸರಿಟ್ಟಿದ್ದಾರೆ. ನನ್ನ ಪುತ್ರ ಸಹ ಸಿನಿಮಾದಲ್ಲಿ ನಟಿಸುತ್ತಿದ್ದಾನೆ. ಕೋಮಲ್ನ ಶ್ರಮ-ಚಿಂತನೆ, ತಾಳ್ಮೆಗೆ, ಕಾಯುವಿಕೆಗೆ ಬೆಂಬಲ ನೀಡಲೇ ಬೇಕು. ನಗಿಸುವುದೇ ನಮ್ಮ ಕುಟುಂಬದ ಕಾಯಕ, ಅದನ್ನು ಮಾಡುತ್ತಾ ಬಂದಿದ್ದೀವಿ. ಸಣ್ಣ ಗ್ರಾಮದಿಂದ ಬಂದ ನನ್ನನ್ನು ಪಾರ್ಲಿಮೆಂಟಿನಲ್ಲಿ ಕೂಡಿಸಿರುವುದು ಈ ಕಲೆ, ನಮ್ಮ ರಾಜ್ಯದ ಜನರು. ಹಾಗಾಗಿ ಮತ್ತೊಮ್ಮೆ ನಮ್ಮ ಜನರನ್ನು ನಗಿಸಲು ನಮ್ಮ ಕುಟುಂಬದವರು ಬಂದಿದ್ದಾರೆ. ಒಳ್ಳೆಯ ತಂಡವನ್ನು ಕಟ್ಟಿಕೊಂಡು ಬಂದಿದ್ದಾರೆ ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಮನವಿ ಮಾಡಿದರು ಜಗ್ಗೇಶ್.


Click it and Unblock the Notifications











