ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದ ಜಗ್ಗೇಶ್
ಸಿದ್ಧಗಂಗಾ ಮಠದ ಶ್ರೀಗಳು, ಡಾ ಶಿವಕುಮಾರ ಸ್ವಾಮೀಜಿ ಅವರ ಅಂತಿಮ ದರ್ಶನ ಪಡೆಯುವುದಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಸಮಯದ ಅಭಾವದಿಂದ ಅನೇಕ ಮಂದಿ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ.
ಆದ್ರೆ, ದೇಶಾದ್ಯಂತ ಅನೇಕ ಭಕ್ತರು ಮನೆಯಲ್ಲೇ ಕೂತು 'ನಡೆದಾಡುವ ದೇವರ' ಅಂತಿಮ ದರ್ಶನ ಪಡೆಯುವಂತೆ ಮಾಡಿದ ಕನ್ನಡ ದೃಶ್ಯ ಮಾಧ್ಯಮಗಳಿಗೆ ಕನ್ನಡ ನಟ ಜಗ್ಗೇಶ್ ಧನ್ಯವಾದ ತಿಳಿಸಿದ್ದಾರೆ.
''ನಡೆದಾಡುವ ದೇವರ ಅಂತಿಮ ಕ್ರಿಯೇ ನೇರಪ್ರಸಾರ ಮಾಡಿ ನಾವು ಸಾಕ್ಷಾತ್ ಕಣ್ಣೆದುರೆ ನಮ್ಮ ನೆಚ್ಚಿನದೇವರು ಸಿದ್ಧಗಂಗಾ ಶ್ರೀಗಳ ಅಂತ್ಯ ಕಾರ್ಯ ನೋಡುವಂತ ಸೌಭಾಗ್ಯ ಕರುಣಿಸಿದ ನಮ್ಮ ಹೆಮ್ಮೆಯ ಕನ್ನಡದ ದೃಶ್ಯಮಾಧ್ಯಮಗಳ ಮಹನೀಯರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.. ವರ್ಣಿಸಲಾಗದ ಸಂತೋಷ ಭಾವುಕನಾದೆ ಅವರ ಅಂತಿಮ ಕರ್ತವ್ಯಕಂಡು.. ಓಂ ನಮಃ ಶಿವಾಯಃ..'' ಎಂದು ಟ್ವೀಟ್ ಮಾಡಿದ್ದಾರೆ.

ಇಂದು ಬೆಳಗ್ಗೆ ಶ್ರೀಗಳ ಅಂತಿಮ ದರ್ಶನ ಪಡೆದ ಜಗ್ಗೇಶ್ ಸಿದ್ದಗಂಗಾ ಮಠದ ಜೊತೆಗಿನ ತಮ್ಮ ಬಾಂಧವ್ಯವನ್ನ ಹೇಳಿಕೊಂಡರು. ಅಂದ್ಹಾಗೆ, ಸಿದ್ದಗಂಗಾ ಮಠದಿಂದ ಕೆಲವೇ ಕಿ.ಮೀ ದೂರದಲ್ಲಿರುವ ಜಡೆಮಾಯಸಂದ್ರ ಊರಿನವಾರಿಗುವ ಜಗ್ಗೇಶ್ ಅವರ ಕುಟುಂಬಕ್ಕೆ ಸಿದ್ದಗಂಗಾ ಮಠದ ಜೊತೆಗೆ ಹಿಂದಿನಿಂದಲೂ ನಂಟು. ತಾಯಿಯ ಜೊತೆ ಮಠಕ್ಕೆ ಬಂದು ಶ್ರೀಗಳಿಂದ ವಿಭೂತಿ ಪಡೆದ, ಶ್ರೀಗಳ ಪುಣ್ಯ ಪಾದಕ್ಕೆ ಹಣೆ ಒತ್ತಿದ ನೆನಪುಗಳನ್ನು ಜಗ್ಗೇಶ್ ಅವರು ಮರೆತಿಲ್ಲ.


Click it and Unblock the Notifications











