ಸುಳ್ಳು ಆರೋಪ ಮಾಡಿದವರ ವಿರುದ್ಧ ಮೊಕದ್ದಮೆ ದಾಖಲಿಸಿದ ಜಗ್ಗೇಶ್
ತಮ್ಮ ವಿರುದ್ಧ ಸುಳ್ಳು ಆರೋಪ ಹೊರಿಸಿದ ವ್ಯಕ್ತಿಯ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ನಟ ಜಗ್ಗೇಶ್ ದಾಖಲಿಸಿದ್ದಾರೆ.
ಜಗ್ಗೇಶ್ ಸಹೋದರ, ನಟ, ಉದ್ಯಮಿ ಕೋಮಲ್ ಬಿಬಿಎಂಪಿ ವ್ಯಾಪ್ತಿಯ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ಸ್ವೆಟರ್ ನೀಡುವ ಟೆಂಡರ್ ಪಡೆದು ಅದರಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಡಿಎಸ್ಎಸ್ ಸಂಘಟನೆ ಪ್ರತಿಭಟನೆ ನಡೆಸಿತ್ತು ಈ ಸಂದರ್ಭದಲ್ಲಿ ಸಂಘಟನೆ ಮುಖಂಡ ರಘು ಕೋಮಲ್, ಜಗ್ಗೇಶ್ ಹಾಗೂ ಸಚಿವ ಆರ್.ಅಶೋಕ್ ವಿರುದ್ಧ ಆರೋಪಗಳನ್ನು ಮಾಡಿದ್ದರು.
ಭ್ರಷ್ಟಾಚಾರ ಆರೋಪದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ನಟ ಕೋಮಲ್, ''ನನಗೂ ಆ ಹಗರಣಕ್ಕೂ ಸಂಬಂಧವೇ ಇಲ್ಲ. ನಾನು ಸ್ವೆಟರ್ ಹಂಚಿಕೆ ಮಾಡುವ ಯಾವುದೇ ಟೆಂಡರ್ ಪಡೆದಿಲ್ಲ. ಅಂಥಹಾ ಟೆಂಡರ್ಗಳನ್ನು ನೇರವಾಗಿ ಸರ್ಕಾರದ ಕೈಮಗ್ಗ ಅಭಿವೃದ್ಧಿ ಪ್ರಾಧೀಕಾರಕ್ಕೆ ನೀಡಲಾಗುತ್ತದೆ. ಖಾಸಗಿ ವ್ಯಕ್ತಿಗಳಿಗಲ್ಲ. ಸುಮ್ಮನೆ ನನ್ನ ಹೆಸರನ್ನು ಜೊತೆಗೆ ಅಣ್ಣ ಜಗ್ಗೇಶ್ ಹಾಗೂ ಇತರೆ ಕೆಲವು ಮುಖಂಡರ ಹೆಸರುಗಳನ್ನು ಇದರಲ್ಲಿ ಎಳೆದು ತರಲಾಗುತ್ತಿದೆ'' ಎಂದಿದ್ದರು.

ನನ್ನ ಹಾಗೂ ಆರ್.ಅಶೋಕ್ ಹೆಸರು ಏಕೆ ತೆಗೆದಿರಿ: ಜಗ್ಗೇಶ್ ಪ್ರಶ್ನೆ
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಟ, ರಾಜಕಾರಣಿ ಜಗ್ಗೇಶ್, ''ಸಂಬಂಧವಿಲ್ಲದೆ ನನ್ನ ಹೆಸರು ಹಾಗೂ ಆರ್.ಅಶೋಕ್ ಹೆಸರುಗಳನ್ನು ತೆಗೆದು ಡಿಎಸ್ಎಸ್ನ ರಘು ಎಂಬುವವರು ಅಪಮಾನಿಸಿದ್ದಾರೆ. ಇದು ನನಗೆ ಬಹಳ ನೋವುಂಟು ಮಾಡಿದೆ. ಸಂಬಂಧವಿಲ್ಲದೆ ನನ್ನ ಮೇಲೆ ಸುಳ್ಳು ಆಪಾದನೆ ಹೊರಿಸಿರುವ ರಘು ಅವರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸುತ್ತಿರುವೆ. ದಯವಿಟ್ಟು ಯಾರೇ ಆಗಲಿ ಸತ್ಯ ಅರಿತು ನುಡಿಯುವ ಗುಣ ಬೆಳೆಸಿಕೊಳ್ಳಿ'' ಎಂದು ಜಗ್ಗೇಶ್ ಇಂದು ಬೆಳಿಗ್ಗೆ ಟ್ವೀಟ್ ಮಾಡಿದ್ದರು.

ಮೊಕದ್ದಮೆ ದಾಖಲಿಸಿದ ನಟ ಜಗ್ಗೇಶ್
ಅದರ ಬಳಿಕ ಮತ್ತೊಂದು ಟ್ವೀಟ್ನಲ್ಲಿ ಜಗ್ಗೇಶ್, ರಘು ಎಂಬುವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿರುವ ದಾಖಲೆಗಳನ್ನು ಸಹ ಹಂಚಿಕೊಂಡರು. ಜೆಪಿ ಅಸೋಸಿಯೇಟ್ಸ್ ಲಾ ಫರ್ಮ್ ಮೂಲಕ ಜಗ್ಗೇಶ್ ಲೀಗಲ್ ನೊಟೀಸ್ ಅನ್ನು ನೀಡಿದ್ದಾರೆ. ದಾಖಲೆ ಹಂಚಿಕೊಳ್ಳುವ ಜೊತೆಗೆ ''ಮಾನ್ಯ ರಘು ಅವರಿಗೆ, ಮಾನ್ಯರೇ ತಾವು ಹಾಗೂ ತಮ್ಮ ವಿಳಾಸ ತಿಳಿಯದ ಕಾರಣ ಸಾಮಾಜಿಕ ಜಾಲತಾಣ (ಟ್ವಿಟ್ಟರ್) ಮೂಲಕ ತಮಗೆ ತಿಳಿಸುತ್ತಿರುವೆ. ಸತ್ಯಾಸತ್ಯತೆ ಅರಿಯದೆ ನನ್ನ ತೇಜೋವಧೆ ಮಾಧ್ಯಮದ ಮುಂದೆ ಮಾಡಿದ್ದೀರಿ. ನಾನು ತಪ್ಪು ಮಾಡಿಲ್ಲ, ಮಾಡುವುದೂ ಇಲ್ಲ. ಹಾಗಾಗಿ ನಿಮ್ಮ ಮೇಲೆ ಕಾನೂನು ಪ್ರಕ್ರಿಯೆ. ಉತ್ತರಿಸಿ'' ಎಂದಿದ್ದಾರೆ ಜಗ್ಗೇಶ್.

ತಪ್ಪು ಸಂದೇಶ ರವಾನಿಸಿದ ನಿಮ್ಮನ್ನು ಕ್ಷಮಿಸಲ್ಲ: ಜಗ್ಗೇಶ್
ಮುಂದುವರೆದು, ''ಎಲ್ಲೋ ನಡೆದ ವಿಷಯಕ್ಕೆ ನನ್ನ ಹೆಸರು ಏಕೆ ಎಳೆದು ತಂದಿರಿ. ನೀವು ನ್ಯಾಯಪರ ಹೋರಾಟ ಮಾಡಿ ನನ್ನ ಬೆಂಬಲವೂ ಇರುತ್ತದೆ. ಆದರೆ ನನಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಆದರೂ ನನ್ನ ಹೆಸರು ಏಕೆ ತಂದಿರಿ. ಯಾವ ಪುರುಷಾರ್ಥಕ್ಕೆ? ನಾನು ತಪ್ಪು ಮಾಡಲ್ಲ ತಲೆ ತಗ್ಗಿಸಲ್ಲ. ನನ್ನ ಕೋಟ್ಯಂತರ ಅಭಿಮಾನಿಗಳಿಗೆ ತಪ್ಪು ಸಂದೇಶ ರವಾನಿಸುವ ಕಾರ್ಯ ಮಾಡಿದ್ದೀರಿ. ಕ್ಷಮಿಸಲ್ಲ'' ಎಂದು ಜಗ್ಗೇಶ್ ಹೇಳಿದ್ದಾರೆ.

ಪ್ರತಿಭಟನೆ ನಡೆಸಿದ್ದ ಡಿಎಸ್ಎಸ್ ಕಾರ್ಯಕರ್ತರು
ಬಿಬಿಎಂಪಿ ವ್ಯಾಪ್ತಿಯ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಸ್ವೆಟರ್ ವಿತರಿಸುವ 1.20 ಕೋಟಿ ರು ಮೊತ್ತದ ಟೆಂಡರ್ ಅನ್ನು ಕೋಮಲ್ ಪಡೆದಿದ್ದಾರೆ. ಆದರೆ ಕೋಮಲ್ ಯಾವುದೇ ಸ್ವೆಟರ್ ಅನ್ನು ಹಂಚಿಕೆಯೇ ಮಾಡಿಲ್ಲ. ಆದರೆ ಬಿಲ್ಗಳನ್ನು ಮಾತ್ರ ಬಿಬಿಎಂಪಿಯಿಂದ ಪಡೆದಿದ್ದಾರೆ ಎಂದು ಆರೋಪಿಸಿ ಡಿಎಸ್ಎಸ್ ಕಾರ್ಯಕರ್ತರು ನಿನ್ನೆ (ಆಗಸ್ಟ್ 24)ರಂದು ಬಿಬಿಎಂಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಬಳಿ ಮಾತನಾಡಿದ್ದ ಮುಖಂಡ ರಘು, ಕೋಮಲ್, ಜಗ್ಗೇಶ್, ಆರ್.ಅಶೋಕ್ ಹಾಗೂ ಬಿಬಿಎಂಪಿಯ ಕೆಲವು ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದರು.

ಆರೋಪದ ಬಗ್ಗೆ ಕೋಮಲ್ ಪ್ರತಿಕ್ರೆಯೆ ಏನು?
ಆರೋಪಕ್ಕೆ ಸಂಬಂಧಿಸಿದಂತೆ ಖಾಸಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ನಟ ಕೋಮಲ್, ''ಆ ಪ್ರಕರಣಕ್ಕೂ ನನಗೂ ಸಂಭಂಧವೇ ಇಲ್ಲ. ಸ್ವೆಟರ್ ನೀಡುವ ಟೆಂಡರ್ ಅನ್ನು ಯಾವುದೇ ಖಾಸಗಿ ವ್ಯಕ್ತಿಗೆ ಸರ್ಕಾರ ನೀಡುವುದೇ ಇಲ್ಲ. ಬದಲಿಗೆ ಅದನ್ನು ಸರ್ಕಾರದ್ದೇ ಸಂಸ್ಥೆಯಾದ ಕೈಮಗ್ಗ ಇಲಾಖೆಗೆ ನೀಡಲಾಗುತ್ತದೆ. ಅವರೇ ಬಿಬಿಎಂಪಿ ವ್ಯಾಪ್ತಿಯ ಶಾಲೆಗಳಿಗೆ ಸ್ವೆಟರ್ ವಿತರಣೆ ಮಾಡುತ್ತಾರೆ. ಯಾವುದೇ ಖಾಸಗಿ ವ್ಯಕ್ತಿಗೆ ಈ ಟೆಂಡರ್ ದೊರಕುವುದಿಲ್ಲ. ವಿನಾ ಕಾರಣ ಈ ಪ್ರಕರಣದಲ್ಲಿ ನನ್ನ ಹೆಸರನ್ನು ಎಳೆದು ತರಲಾಗುತ್ತಿದೆ. ನನ್ನ ಹೆಸರು ಮಾತ್ರವೇ ಅಲ್ಲದೆ ನನ್ನ ಅಣ್ಣನವರ ಹೆಸರು (ಜಗ್ಗೇಶ್) ಕೆಲವು ಅಧಿಕಾರಿಗಳ ಹೆಸರನ್ನು ಎಳೆದು ತರಲಾಗುತ್ತಿದೆ. ಆದರೆ ಈ ಪ್ರಕರಣಕ್ಕೂ ನನಗೂ ಯಾವುದೇ ರೀತಿಯ ಸಂಬಂಧವೇ ಇಲ್ಲ. ನಾನು ಆ ಟೆಂಡರ್ ಪಡೆಯಲು ಯತ್ನಿಸಿಯೂ ಇಲ್ಲ. ಆ ಟೆಂಡರ್ ನನಗೆ ಸಿಕ್ಕೂ ಇಲ್ಲ. ನನ್ನ ಹೆಸರನ್ನು ವಿನಾ ಕಾರಣ ಎಳೆದು ತರುತ್ತಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಯೋಜಿಸಿದ್ದು ಈ ಬಗ್ಗೆ ನಮ್ಮ ವಕೀಲರ ಬಳಿ ಮಾತುಕತೆ ನಡೆಸುತ್ತಿದ್ದೇನೆ'' ಎಂದಿದ್ದರು.


Click it and Unblock the Notifications











