'ಕನ್ನಡಿಗರು ಹೆಣ್ಣು ಸಿಂಹ, ಪರಭಾಷಿಕರು ಗಂಡು ಸಿಂಹ': ಜಗ್ಗೇಶ್ ಹೀಗೇಳಿದ್ದೇಕೆ?
ಒಂದು ಸಮಯದಲ್ಲಿ ಕನ್ನಡ ಸಿನಿಮಾಗಳನ್ನು ನೋಡಲು ಥಿಯೇಟರ್ ಗೆ ಜನ ಮುಗಿಬೀಳುತ್ತಿದ್ದರು. ಆದ್ರೀಗ ಜನರನ್ನು ಚಿತ್ರಮಂದಿರಕ್ಕೆ ಬನ್ನಿ ಬನ್ನಿ ಎಂದು ಕೇಳಿಕೊಳ್ಳಬೇಕಾದ ಸ್ಥಿತಿ. ಸ್ಯಾಂಡಲ್ ವುಡ್ ವಿಚಾರಕ್ಕೆ ಬಂದರೆ ವಾರಕ್ಕೆ ಏಳೆಂಟು ಚಿತ್ರಗಳನ್ನು ರಿಲೀಸ್ ಮಾಡ್ತಾರೆ.
ಯಾವುದನ್ನು ನೋಡುವುದು, ಯಾವುದನ್ನು ಬಿಡುವುದು ಎಂಬ ಗೊಂದಲಕ್ಕೆ ಪ್ರೇಕ್ಷಕರು ಸಿಲುಕಿಕೊಂಡಿದ್ದಾರೆ. ಹೆಚ್ಚು ಹೆಚ್ಚು ಚಿತ್ರಗಳು ಬರುತ್ತಿರುವುದರಿಂದ ಚಿತ್ರಮಂದಿರ ಸಮಸ್ಯೆ ಎದುರಾಗುತ್ತಿದೆ. ಇದರಿಂದ ಒಳ್ಳೆಯ ಚಿತ್ರಗಳು ಥಿಯೇಟರ್ ನಿಂದ ಎತ್ತಂಗಡಿಯಾಗುವಂತಹ ಸನ್ನಿವೇಶ ಎದುರಾಗಿದೆ.
ಇದಕ್ಕೆ ನೇರ ಕಾರಣ ಪರಭಾಷಿಗರು ಎನ್ನುವುದು ಒಂದು ವರ್ಗದ ಅಭಿಪ್ರಾಯ. ಇದೇ ವಿಚಾರವಾಗಿ ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ ಕಾರಣ, ಜಗ್ಗೇಶ್ ಸಿಂಹದ ಕಥೆ ಹೇಳಿ ಪರೋಕ್ಷವಾಗಿ ಇಂಡಸ್ಟ್ರಿಯ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ, ಜಗ್ಗೇಶ್ ಹೇಳಿದ ಸಿಂಹದ ಕಥೆ ಏನು? ಮುಂದೆ ಓದಿ...

ಅಭಿಮಾನಿ ಮಾಡಿದ ಟ್ವೀಟ್ ಏನು?
ಫೆಬ್ರವರಿ 14 ರಂದು 9 ಸಿನಿಮಾ ಬಿಡುಗಡೆ. ಇದುವರೆಗೂ ಸುಮಾರು 20 ಚಿತ್ರಗಳು ಬಿಡುಗಡೆಯಾಗಿದೆ. ಅದಕ್ಕು ಮುಂದಿನ ವಾರ 7 ಚಿತ್ರ ತೆರೆಗೆ ಬರಲಿದೆ. ಒಟ್ಟಾರೆ ಈ ತಿಂಗಳಲ್ಲಿ 30-35 ಚಿತ್ರಗಳು ಚಿತ್ರಮಂದಿರಕ್ಕೆ ಬಂದಂತೆ ಆಗುತ್ತೆ. ಇದರಲ್ಲಿ ಸುಮಾರು 29 ಚಿತ್ರದ ನಿರ್ಮಾಪಕರು ಹಣವನ್ನು ಕಳೆದುಕೊಂಡಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ. ಇದು ವಿತರಕರ ವಾದ'' ಎಂದು ಜಗ್ಗೇಶ್ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಸಿಂಹದ ಕಥೆ ಹೇಳಿದ ನಟ
ಅಭಿಮಾನಿಯ ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ ಜಗ್ಗೇಶ್ ಸಿಂಹದ ಕಥೆ ಹೇಳಿದ್ದಾರೆ. ''ಸಣ್ಣ ಸತ್ಯಕಥೆ.! ಕಾಡಿನಲ್ಲಿ ನೂರಾರು ಸಿಂಹಗಳು ಇರುತ್ತದೆ! ಬೇಟೆ ಆಡೋದು ಹೆಣ್ಣು ಸಿಂಹಗಳು! ಕಡೆಗೆ ಬೇಟೆ ತಿನ್ನಲು ಮೊದಲು ಬರುವುದು ಗಂಡು ಸಿಂಹ ! ಮಧ್ಯ ಅನ್ಯ ಬಾಯಿ ಹಾಕಿದರೆ ಶಿಕ್ಷೆತಪ್ಪೊಲ್ಲಾ! ಹೆಣ್ಣು ಸಿಂಹ ಕನ್ನಡಿಗರು! ಗಂಡು ಸಿಂಹ ಪರಭಾಷಿಕರು! ಅವರ ಮನೆಯಲ್ಲೆ ಕನ್ನಡ ಚಿತ್ರರಂಗದ ಸದಸ್ಯ ಭಿಕ್ಷುಕ! ಆದರು ನಾವು ಗಂಡೆದೆ ಕನ್ನಡಿಗರು ವಿಪರ್ಯಾಸ!'' ಎಂದು ಟೀಕಿಸಿದ್ದಾರೆ.

ಸಿನಿಮಾ ಚೆನ್ನಾಗಿದ್ದರೂ ಥಿಯೇಟರ್ ಇಲ್ಲ
ಲವ್ ಮಾಕ್ಟೈಲ್, ದಿಯಾ, ಜಂಟಲ್ ಮ್ಯಾನ್, ಮತ್ತೆ ಉದ್ಭವ ಅಂತಹ ಚಿತ್ರಗಳು ಕಳೆದ ವಾರ ತೆರೆಕಂಡಿತ್ತು. ಸಿನಿಮಾ ನೋಡಿದ ಪ್ರೇಕ್ಷಕರು ಚೆನ್ನಾಗಿದೆ ಎಂದು ಹೊಗಳುತ್ತಿದ್ದಾರೆ. ಆದರೂ ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್ ಇಲ್ಲ. ಎಲ್ಲೊ ಒಂದೊಂದು ಚಿತ್ರಮಂದಿರದಲ್ಲಿ ಒಂದೊಂದು ಶೋ ನೀಡಿದ್ದಾರೆ. ಅದು ಪ್ರೇಕ್ಷಕರಿಗೆ ಅನುಕೂಲವಾಗುವಂತಹ ಸಮಯ ಮತ್ತು ಬೆಲೆಯೂ ಇಲ್ಲ. ಅನೇಕ ಚಿತ್ರಮಂದಿರಗಳಲ್ಲಿ ಜನರೇ ಇಲ್ಲ ಎಂದು ಸಿನಿಮಾವನ್ನು ತೆಗೆದುಹಾಕಿದ್ದಾರೆ. ಇದರ ವಿರುದ್ಧ ಚಿತ್ರತಂಡಗಳೇ ಹೋರಾಡುತ್ತಿವೆ.

ಕನ್ನಡಿಗರ ನಡುವೆಯೇ ಕಾದಾಟ
ಇಲ್ಲಿ ಕನ್ನಡ ಚಿತ್ರಕ್ಕೆ ಇನ್ನೊಂದು ಕನ್ನಡ ಚಿತ್ರವೇ ಪೈಪೋಟಿಯಾಗಿ ನಿಲ್ಲುತ್ತಿದೆ. ಕನ್ನಡ ಸಿನಿಮಾ ನಟ ಮತ್ತು ನಿರ್ಮಾಪಕರೇ ನಮಗೆ ಚಿತ್ರಮಂದಿರ ಬೇಕು ಎಂದು ಕಿತ್ತಾಡುವಂತಾಗಿದೆ. ಇದರ ಮಧ್ಯೆ ಪರಭಾಷೆ ಚಿತ್ರಗಳು ಕರ್ನಾಟಕದಲ್ಲಿ ಯಾವುದೇ ಸಮಸ್ಯೆ ಇಲ್ಲದೇ ಪ್ರದರ್ಶನ ಕಾಣುತ್ತಿದೆ. ಕಲೆಕ್ಷನ್ ಮಾಡುತ್ತಿದೆ. ಇಂತಹ ವ್ಯವಸ್ಥೆಯ ಬಗ್ಗೆಯೇ ಜಗ್ಗೇಶ್ ಅಣುಕಿಸಿ ಟ್ವೀಟ್ ಮಾಡಿದ್ದಾರೆ ಎನ್ನುವುದು ವಾಸ್ತವ.

ಎಚ್ಚೆತ್ತುಕೊಳ್ಳುವುದು ಯಾವಾಗ?
ಪ್ರತಿಬಾರಿಯೂ ಇಂತಹ ಸನ್ನಿವೇಶಗಳು ಬಂದಾಗ, ಫಿಲಂ ಚೇಂಬರ್ ಹಾಗೂ ಚಿತ್ರಮಂದಿರದ ಮಾಲೀಕರ ಜೊತೆ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುತ್ತಾರೆ. ಸ್ವಲ್ಪ ದಿನ ಇದು ಸುಮ್ಮನಾಗುತ್ತೆ. ಮತ್ತೆ ಪರಭಾಷೆಯ ದೊಡ್ಡ ಚಿತ್ರ ಬಂದಾಗ, ಮತ್ತೆ ಅದೇ ಸಮಸ್ಯೆ ಎದುರಾಗುತ್ತೆ. ಹೀಗೆ ಬಗೆಹರಿಯದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಯಾವಾಗ?


Click it and Unblock the Notifications











