ರಾಜ್ ಜೊತೆ ನಟಿಸಲು ಬಯಸಿದ ಅಭಿಮಾನಿ : ಇಂದಿಗೂ ಮರೆತಿಲ್ಲ ಆ ಘಟನೆ
ಡಾ ರಾಜ್ ಕುಮಾರ್ ಅವರ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ. ಅವರ ಬಗ್ಗೆ ಎಷ್ಟೊಂದು ತಿಳಿದುಕೊಂಡಿದ್ದರು, ಮತ್ತಷ್ಟು ವಿಷಯಗಳು, ಘಟನೆಗಳು ನಮ್ಮ ಕಿವಿಗೆ ಬೀಳುತ್ತಿರುತ್ತವೆ.
ಇದೀಗ ಡಾ ಶಿವರಾಜ್ ಕುಮಾರ್ ಮತ್ತು ಡಾ ವಿಷ್ಣುವರ್ಧನ್ ಕುರಿತಾಗಿ ಪುಸ್ತಕಗಳನ್ನು ಬರೆದಿರುವ ಲೇಖಕ ಜನಾರ್ಧನ ರಾವ್ ಸಾಳಂಕೆ ರಾಜ್ ಕುಮಾರ್ ಬಗೆಗಿನ ಒಂದು ಘಟನೆಯನ್ನು ತಿಳಿಸಿದ್ದಾರೆ.
80ರ ದಶಕದಲ್ಲಿ ಅವರಿಗೆ ಸಿನಿಮಾ ಅಂದರೆ ಒಂದು ರೀತಿಯ ಪ್ರೀತಿ ಮತ್ತು ಅಭಿಮಾನ ಇತ್ತಂತೆ. ಈ ವೇಳೆಯೇ ಡಾ.ರಾಜ್ ಕುಮಾರ್ ಅವರನ್ನು ತುಂಬಾ ಹತ್ತಿರದಿಂದ ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಈ ಘಟನೆಯ ಮೂಲಕ ರಾಜ್ ಬಗ್ಗೆಯ ಒಂದಷ್ಟು ವಿಷಯಗಳನ್ನು ಇಲ್ಲಿ ತಿಳಿಸಿದ್ದಾರೆ. ಮುಂದೆ ಓದಿ....
ಫೋಟೋಗಳು : ಡಾ ರಾಜ್ ಕುಮಾರ್ ಫೇಸ್ ಬುಕ್ ಖಾತೆ

'ಪರಶುರಾಮ್' ಚಿತ್ರದ ಚಿತ್ರೀಕರಣದ ಸಮಯ
''ನಾನು ಎಸ್.ಎಸ್.ಎಲ್.ಸಿ ಪರೀಕ್ಷೆ ಪ್ರಥಮ ದರ್ಜೆಯಲ್ಲಿ ಪಾಸ್ ಮಾಡಿ, ಕೆ.ಎಸ್.ಆರ್.ಟಿ.ಸಿ ಯಲ್ಲಿ ಐ.ಟಿ.ಐ ಗೆ ಸೇರಿಕೊಂಡೆ. 1989ರಲ್ಲಿ ಅಣ್ಣಾವ್ರ "ಪರಶುರಾಮ್" ಚಿತ್ರದ ಚಿತ್ರೀಕರಣ ಜಯನಗರದ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ನಡೆಯುತ್ತಿದೆ ಎಂದು ನನ್ನ ಸ್ನೇಹಿತ ಶ್ರೀಧರನ್ ಅವರಿಂದ ತಿಳಿಯಿತು. ಈ ಆಸ್ಪತ್ರೆಯು ಮನೆ ಆಸ್ಪತ್ರೆಯ ಸಮೀಪದಲ್ಲೇ ಇತ್ತು (ತಿಲಕ್ ನಗರ). ಸಂಜೆ ಕ್ಲಾಸ್ಸಿ ಮುಗಿದ ಮೇಲೆ ನೇರ ಚಿತ್ರೀಕರಣ ನಡೆಯುತ್ತಿದ್ದ ಆಸ್ಪತ್ರೆಗೆ ಬಂದೆ. ಆಗ ಸುಮಾರು 5 ಗಂಟೆಯ ಸಮಯ.''

ರಾಜ್ ರನ್ನು ನೋಡಿ ರೋಮಾಂಚನಗೊಂಡೆ
''ಅಲ್ಲಿ ಸಾಕಷ್ಟು ಜನ ಜಮಾಯಿಸಿದ್ದಾರೆ. ಒಂದು ಕಡೆ ಚಿತ್ರದ ನಿರ್ದೇಶಕರಾದ ವಿ.ಸೋಮಶೇಖರ್ ಅವರು ಶಾಟ್ ಗಾಗಿ ಸಿದ್ಧತೆ ಮಾಡುತ್ತಿದ್ದಾರೆ. ಮತ್ತೊಂದು ಕಡೆ ತಾಂತ್ರಿಕ ವರ್ಗದವರು ತಮ್ಮ ಪಾಡಿಗೆ ತಾವು ಕೆಲಸದಲ್ಲಿ ಮಗ್ನರಾಗಿದ್ದಾರೆ. ನನ್ನ ನಯನಗಳು ಒಬ್ಬ ವಿಶೇಷ ವ್ಯಕ್ತಿಯನ್ನು ಹುಡುಕುತ್ತಿತ್ತು, ಹಾಗೆ ಎಲ್ಲ ಕಡೆಯೂ ನಾನು ಕನ್ನಡಿಸಿಕೊಂಡು ಬರುವಾಗ ಸ್ವಲ್ಪ ಹತ್ತಿರದಲ್ಲೇ ರಾಜ್ ರವರು ನಿಂತಿದ್ದರು. ಸೂಟ್ ಡ್ರೆಸ್ ನಲ್ಲಿ ಬಹಳ ಅಂದವಾಗಿ ಕಾಣುತ್ತಿದ್ದರು. ಅವರನ್ನು ಕಂಡೊಡನೆ ರೋಮಾಂಚನಗೊಂಡೆ.

ಅಣ್ಣಾವ್ರು ಬಹಳ ಶಾಂತಚಿತ್ತರಾಗಿ ನಿಂತಿದ್ದಾರೆ
''ನನ್ನ ಮೈಯಲ್ಲಿ ವಿದ್ಯುತ ಸಂಚಾರವಾದಂತೆ ಭಾಸವಾಯಿತು. ಅವರ ಪಕ್ಕದಲ್ಲಿಯೇ ನಾಯಕ ನಟಿ ವಾಣಿ ವಿಶ್ವನಾಥ್ ಸಹ ನಿಂತಿದ್ದರು. ಅಣ್ಣಾವ್ರು ಬಹಳ ಶಾಂತಚಿತ್ತರಾಗಿ ನಿಂತಿದ್ದಾರೆ. ಸಂಪೂರ್ಣ ನಿಶ್ಯಬ್ದ ಆವರಿಸಿದೆ. ನನ್ನಗೊಂಡು ಆಸೆ, ಹೇಗಾದರೂ ಮಾಡಿ ಅಣ್ಣಾವ್ರ ಬಳಿ ಹೋಗಿ ಅವರ ಹಸ್ತಾಕ್ಷರ ಪಡೆಯಬೇಕು ಎಂದು. ಸರಿ ನನ್ನ ಬ್ಯಾಗ್ ನಿಂದ ಸರಕ್ಕನೆ ಒಂದು ಪುಸ್ತಕ ಮತ್ತು ಲೇಖನಿ ಹೊರತೆಗೆದು ಅವರ ಬಳಿ ಹೋಗಲು ಸಿದ್ದನಾದೆ. ಆದರೆ ಅವರ ಬಳಿ ಹೋಗಲು ಒಂದು ರೀತಿಯ ಭಯ. ರಾಜ್ ಅವರು ಎಲ್ಲಿ ನನಗೆ ಬೈದುಬಿಡುವರೋ ಎಂಬ ಆತಂಕ. ಅವರ ಹತ್ತಿರದಲ್ಲೇ ಅವರ ಅಂಗರಕ್ಷಕರು ಸಹ ಇದ್ದಾರೆ.''

ವೃದ್ಧರಿಗೆ ಹಣ ನೀಡಿದ ರಾಜ್ ಕುಮಾರ್
''ಈ ಮಧ್ಯೆ ನಾನು ಅಣ್ಣಾವ್ರ ಚಲನ-ವಲನ, ಮುಖ ಭಾವ ಗಮನಿಸುತ್ತಿದ್ದೆ. ತನ್ನ ಅಂಗ ರಕ್ಷಕನನ್ನು ಕರೆದು ಸ್ವಲ್ಪ ದೂರದಲ್ಲಿ ನಿಂತ್ತಿದ್ದ ಒಬ್ಬ ವೃದ್ಧರ ಕಡೆ ಬೊಟ್ಟು ಮಾಡಿ "ನೋಡಿ ಅಲ್ಲೊಬ್ಬರು ವ್ಯಕ್ತಿ ಇದ್ದಾರೆ, ಅವರು ಕಿವಿಗೆ ವೊಲೆ ಧರಿಸಿದ್ದಾರೆ. ಅವರಿಗೆ ಸ್ವಲ್ಪ ಹಣದ ಸಹಾಯ ಮಾಡಿ ಎಂದು ಹೇಳಿದರು. ಕೂಡಲೇ ಆ ವೃದ್ಧರಿಗೆ ಹಣವನ್ನು ತಲುಪಿಸಲಾಯಿತು. ಈ ಕೆಲಸ ಹೆಚ್ಚು ಹೊತ್ತು ಹಿಡಿಯಲಿಲ್ಲ. ಇದನ್ನು ಕಂಡು ನಾನು ಮೂಕನಾದೆ. ನೋಡಿ ನೂರಾರು ಜನರ ಮಧ್ಯೆ ಇದ್ದ ವ್ಯಕ್ತಿಯನ್ನು ಅಣ್ಣಾವ್ರು ಗುರುತಿಸಿ ಸಹಾಯ ಮಾಡಿದ್ದು ನನ್ನಲ್ಲಿ ಆಶ್ಚರ್ಯವುಂಟು ಮಾಡಿತು.''

ಸೋಮಶೇಖರ್ ಶಾಟ್ ರೆಡಿ ಎಂದು ಹೇಳಿದರು
''ಅವರ ಬಳಿ ಹೋಗಲು ಒಂದು ಹೆಜ್ಜೆ ಮುಂದೆ ಇಡುವೆ, ಮತ್ತೆ ಹೆಜ್ಜೆ ಹಿಂದೆ ಇಡುತ್ತಿದ್ದೇನೆ. ಇದು ಹತ್ತರಿಂದ ಹದಿನೈದು ನಿಮಿಷ ಹೀಗೆ ನಡೆಯಿತು. ಕೊನೆಗೂ ಅವರ ಬಳಿ ಹೋಗಲು ಆಗಲಿಲ್ಲ. ಸೋಮಶೇಖರ್ ಶಾಟ್ ರೆಡಿ ಎಂದು ಹೇಳಿದರು. ರಾಜ್ ಮತ್ತು ವಾಣಿ ವಿಶ್ವನಾಥ್ ಅವರು "ಪಾಪು" ಎಂದು ಕೂಗುತ್ತಾ ಕೊಠಡಿಗೆ ಹೋಗುವ ದೃಶ್ಯ ಅದು. ಶಾಟ್ ಎರಡು ಟೇಕ್ ಗೆ ಓ.ಕೆ ಆಯಿತು. ಶಾಟ್ ಮುಗಿದ ನಂತರ ಸೋಮಶೇಖರ್ ಪ್ಯಾಕ್ ಅಪ್ ಎಂದು ಹೇಳಿದರು. ಅಣ್ಣಾವ್ರು ನಾನು ನಿಂತಿದ್ದ ವಿರುದ್ಧ ದಿಕ್ಕಿನತ್ತ ಹೆಜ್ಜೆ ಹಾಕುತ್ತಾ ಮುನ್ನಡೆದರು.''

ರಾಜ್ ಕೈ ಕುಲುಕಿ ಹಾಗೆಯೇ ಹಿಡಿದುಕೊಂಡೆ
''ನಾನು ಮತ್ತೊಂದು ಮಾರ್ಗ ಅನುಸರಿಸಿ, ಅಣ್ಣಾವ್ರು ಮತ್ತು ನಾನು ಎದುರು ಬದುರು ಬರುವಂತೆ ಮಾಡಿಕೊಂಡೆ. "ಅಣ್ಣ ನಮಸ್ಕಾರ ಎಂದು ಹೇಳಿ ಅಣ್ಣಾವ್ರ ಕೈ ಕುಲುಕಿ ಹಾಗೆಯೇ ಹಿಡಿದುಕೊಂಡೆ. ರಾಜ್ ಅಷ್ಟೇ ಪ್ರೀತಿ ಪೂರ್ವಕವಾಗಿ ಕೈ ಕುಲುಕಿದರು. ನಾನು ಎಷ್ಟು ಭಾವುಕನಾದೆ ಅಂದರೆ ಸುಮಾರು ಏಳೆಂಟು ಹೆಜ್ಜೆ ಅವರ ಕೈ ಹಿಡಿದುಕೊಂಡೆ ನಾನು ಸಹ ಹೆಜ್ಜೆ ಹಾಕಿದೆ. ಅಷ್ಟರಲ್ಲಿ ಅಂಗರಕ್ಷಕರು ದಾರಿ ಬಿಡಿ ಎಂದು ಹೇಳಿದಾಗ ನಾನು ಅಲ್ಲಿಂದ ಪಾಕಕ್ಕೆ ಸರಿದೆ. ಅಷ್ಟರಲ್ಲಿ ಅಣ್ಣಾವ್ರಿಗೆ ಜೈಕಾರ ಹಾಕುತ್ತಾ ನೂರಾರು ಜನ ಹಿಂದೆ ಬರುತ್ತಿದ್ದರು.''

ನಾನು ಅಣ್ಣಾವ್ರ ಜೊತೆ ನಟಿಸಬೇಕು
''ಆಸ್ಪತ್ರೆಯಿಂದ ಹೊರಬಂದಾಗ ನಿರ್ದೇಶಕರಾದ ವಿ.ಸೋಮಶೇಖರ್ ಅವರನ್ನು ಕಂಡು ಮಾತನಾಡಿದೆ. ಮನಸ್ಸು ತಡೆಯಲಾರದೆ "ಸರ್ ನನಗೆ ಪರಶುರಾಮ್ ಚಿತ್ರದಲ್ಲಿ ಒಂದು ಚಿಕ್ಕ ಪಾತ್ರ ಇದ್ದಾರೆ ಕೊಡಿ, ನಾನು ಅಣ್ಣಾವ್ರ ಜೊತೆ ನಟಿಸಬೇಕು" ಎಂದು ಮನದಾಳದ ಮಾತನ್ನು ಹೇಳಿದೆ. ಅದಕ್ಕೆ ಅವರು "ನೋಡಪ್ಪ ನಾನು ನಿನ್ನ ಹಾಗೆ ನಟ ಆಗಬೇಕೆಂದು ಸಿನೆಮಾಗೆ ಬಂದೆ. ಆದ್ರೆ ಈಗ ನಿರ್ದೇಶಕನಾಗಿದ್ದೇನೆ. ಎಲ್ಲ ದೈವ ಇಚ್ಛೆ. ನಿಮಗೆ ಒಳ್ಳೆಯದಾಗಲಿ" ಎಂದು ಹೇಳಿದ್ದರು. ಅಂದು ರಾತ್ರಿ ನಿದ್ದೆ ಮಾಡದೆ ಇದೇ ಘಟನೆಯನ್ನು ನೆನಪಿಸಿಕೊಳ್ಳುತ್ತಿದ್ದೆ. ಈ ಘಟನೆ ಇಂದಿಗೂ ನನ್ನ ಮನದಲ್ಲಿ ಅಚ್ಚ ಹಸಿರಾಗಿದೆ.


Click it and Unblock the Notifications











