ನಟ ದುನಿಯಾ ವಿಜಯ್ ವಿರುದ್ಧ ಜೀವ ಬೆದರಿಕೆ ದೂರು
ನಟ ದುನಿಯಾ ವಿಜಯ್ ಅವರು ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಈ ಬಾರಿ ಅವರ ಮೇಲೆ ಕೇಳಿಬಂದಿರುವ ಆರೋಪ ಚಿತ್ರ ವಿತರಕ, ನಿರ್ಮಾಪಕ ಜಯಣ್ಣ ಅವರಿಗೆ ಜೀವಬೆದರಿಕೆ ಹಾಕಿದ್ದಾರೆ ಎಂಬುದು. ಈ ಸಂಬಂಧ ಜಯಣ್ಣ ಅವರು ಬೆಂಗಳೂರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ.
ಆರಂಭಿಕ ಹಂತದ ವಿಚಾರಣೆ ನಿಮಿತ್ತ ಸೋಮವಾರ (ಜನವರಿ 5) ಸಿಸಿಬಿ ಕಚೇರಿಗೆ ವಿಜಯ್ ಅವರು ವಿಚಾರಣೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, "ನಾನು ಮತ್ತು ಜಯಣ್ಣ ಒಳ್ಳೆಯ ಸ್ನೇಹಿತರು. ನಮ್ಮಿಬ್ಬರ ನಡುವಿನ ಸಂಬಂಧ ಚೆನ್ನಾಗಿದೆ. ಆದರೆ ಅವರು ನನ್ನ ವಿರುದ್ಧ ದೂರು ನೀಡಿದ ವಿಷಯ ಕೇಳಿ ಆಘತವಾಗಿದೆ" ಎಂದರು. [ಸ್ಟಾರ್ ವಾರ್ ನಿಂದ ಹಿಂದೆ ಸರಿದ ದುನಿಯಾ ವಿಜಯ್]
"ಅವರು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ನೀಡಬಹುದಿತ್ತು. ಆದರೆ ಸಿಸಿಬಿ ಯಾಕೆ ಹೋದರೋ ನನಗೆ ಗೊತ್ತಿಲ್ಲ. ಜಯಣ್ಣ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ವಿಶ್ವಾಸ ಇದೆ, ಜಯಣ್ಣ ಅವರನ್ನು ಕರೆಸಿ ಮಾತನಾಡುತ್ತೇನೆ" ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಷ್ಟಕ್ಕೂ ಜಯಣ್ಣ ಹಾಗೂ ವಿಜಿ ನಡುವೆ ನಡೆದದ್ದೇನು? ದುನಿಯಾ ವಿಜಯ್ ಅಭಿನಯದ 'ಜಾಕ್ಸನ್' ಚಿತ್ರದ ವಿತರಣೆ ಸಂಬಂಧ ಇಬ್ಬರ ನಡುವೆ ಜಗಳವಾಗಿರುವ ಸಾಧ್ಯತೆಗಳಿವೆ. ಜಾಕ್ಸನ್ ಚಿತ್ರದ ವಿತರಣೆಗಾಗಿ ಜಯಣ್ಣ ಅವರನ್ನು ವಿಜಿ ಕೋರಿದ್ದರಂತೆ.
ಆದರೆ ತಮ್ಮ 'ಮಿಸ್ಟರ್ ಅಂಡ ಮಿಸಸ್ ರಾಮಾಚಾರಿ' ಚಿತ್ರ ಬಿಡುಗಡೆ ಸಂಬಂಧ ಬಿಜಿಯಾಗಿದ್ದ ಜಯಣ್ಣ ಅವರು ಜಾಕ್ಸನ್ ವಿತರಣೆ ಬಗ್ಗೆ ಸಮ್ಮತಿಸಲಿಲ್ಲ ಎನ್ನಲಾಗಿದೆ. ಈ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿರುವ ಶಂಕೆ ವ್ಯಕ್ತವಾಗಿದೆ.
ಇದೇ ವಿಚಾರವಾಗಿ ಡಿಸೆಂಬರ್ 30 ಹಾಗೂ 31ರಂದು ದುನಿಯಾ ವಿಜಯ್ ಅವರು ಒಮ್ಮೆ ಮೊಬೈಲ್ ಗೆ ಕರೆ ಮಾಡಿ ಹಾಗೂ ಮತ್ತೊಮ್ಮೆ ಕಚೇರಿಗೆ ರೌಡಿಗಳನ್ನು ಕರೆತಂದು ಜಯಣ್ಣ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಜಾಕ್ಸನ್ ಚಿತ್ರ ಸಂಕ್ರಾಂತಿ ಹಬ್ಬಕ್ಕೆ ಅಂದರೆ ಜನವರಿ 15ರಂದು ಪ್ರಮುಖ ಚಿತ್ರಮಂದಿರ ನರ್ತಕಿ ಸೇರಿದಂತೆ ರಾಜ್ಯದಾದ್ಯಂತ ತೆರೆಕಾಣುತ್ತಿದೆ. (ಏಜೆನ್ಸೀಸ್)


Click it and Unblock the Notifications











