ರಣಧೀರನಲ್ಲಿ ಒಂದಾಗಲಿರುವ ಪ್ರೇಮಲೋಕ ಜೋಡಿ
ಒಂದು ಕಾಲದ ಕನ್ನಡ ಬೆಳ್ಳಿಪರದೆಯ ರೊಮ್ಯಾಂಟಿಕ್ ಜೋಡಿ ಮತ್ತೆ ಪ್ರೇಕ್ಷಕರ ಮುಂದೆ ಬರಲು ಅಣಿಯಾಗುತ್ತಿದ್ದಾರೆ. ಕನಸುಗಾರ, ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಜೂಹಿ ಚಾವ್ಲಾ ಮತ್ತೆ ಜೊತೆಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಇವರಿಬ್ಬರೂ ಒಂದಾಗಲಿರುವುದು ಮನೋರಂಜನ್ ಅವರ 'ರಣಧೀರ' ಚಿತ್ರದಲ್ಲಿ ಎಂಬುದು ವಿಶೇಷ.
ಸ್ವತಃ ಈ ಬಗ್ಗೆ ರವಿಚಂದ್ರನ್ ಅವರು ಗುಟ್ಟು ಬಿಟ್ಟುಕೊಟ್ಟಿದ್ದಾರೆ. ತಾವಿಬ್ಬರೂ ಮತ್ತೆ ಒಂದಾಗುತ್ತಿದ್ದೇವೆ ಎಂದಿದ್ದಾರೆ. ತಮ್ಮ ಪುತ್ರನ 'ರಣಧೀರ' ಚಿತ್ರದ ಮುಹೂರ್ತಕ್ಕೆ ಜೂಹಿ ಚಾವ್ಲಾ ಬರಬೇಕಾಗಿತ್ತು. ಸ್ವಲ್ಪ ತಡವಾಗಿ ಆಗಮಿಸಿ ಶುಭಕೋರಲಿದ್ದಾರಂತೆ. [ಸ್ಯಾಂಡಲ್ ವುಡ್ ನಲ್ಲಿ ಹೊಸ ರಣಧೀರನ ಉದಯ]
ರವಿ ಅವರಿಗೇನೋ ಜೂಹಿ ಜೊತೆ ಮತ್ತೆ ಬಣ್ಣ ಹಚ್ಚುವ ಆಸೆ ಇದೆ. ಆದರೆ ಜೂಹಿ ಕಡೆಯಿಂದ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಒಂದು ವೇಳೆ ಒಪ್ಪಿದರೆ ಮನೋರಂಜನ್ ಗೆ ಚಿತ್ರದಲ್ಲಿ ರವಿ ಮತ್ತು ಜೂಹಿ ತಂದೆತಾಯಿಯಾಗಿ ಕಾಣಿಸಲಿದ್ದಾರೆ ಎಂಬುದು ಸದ್ಯದ ಮಾಹಿತಿ.ಇದು ಕಂಪ್ಲೀಟ್ ತಮ್ಮ ಪುತ್ರನ ಚಿತ್ರವಾಗಬೇಕು ಎಂಬುದು ರವಿ ಅಭಿಲಾಷೆ. ಅನಾವಶ್ಯಕ ಪಾತ್ರಗಳನ್ನು ತುರುಕಲು ಅವರಿಗೂ ಸುತಾರಾಂ ಇಷ್ಟವಿಲ್ಲವಂತೆ. ಹಾಗಾಗಿ ಆದಷ್ಟು ಪಾತ್ರಗಳನ್ನು ಕಡಿಮೆ ಮಾಡಬೇಕೆಂಬುದು ರವಿ ಇಚ್ಛೆ. ಈ ಮಾಜಿ ಮಿಸ್ ಇಂಡಿಯಾ ಮತ್ತೆ ಕನ್ನಡದಲ್ಲಿ ಬಣ್ಣ ಹಚ್ಚುತ್ತಾರಾ? ಎಂಬುದನ್ನು ಕಾದು ನೋಡಬೇಕು.
ರವಿಚಂದ್ರನ್ ಹಾಗೂ ಜೂಹಿ ಚಾವ್ಲಾ ಜೋಡಿಯಾಗಿ ಅಭಿನಯಿಸಿದ ಕೊನೆಯ ಚಿತ್ರ 'ಶಾಂತಿಕ್ರಾಂತಿ' (1991). ಇದಾದ ಬಳಿಕ ಜೂಹಿ ಕನ್ನಡದಲ್ಲಿ ಅಭಿನಯಿಸಲಿಲ್ಲ. 'ಪ್ರೇಮಲೋಕ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟ ಜೂಹಿ ಚಾವ್ಲಾ ಬಳಿಕ 'ಕಿಂದರಿ ಜೋಗಿ' ಹಾಗೂ 'ಶಾಂತಿ ಕ್ರಾಂತಿ' ಚಿತ್ರಗಳಲ್ಲಿ ರವಿಚಂದ್ರನ್ ಜೊತೆ ಅಭಿನಯಿಸಿದ್ದರು.
ಇತ್ತೀಚೆಗೆ ಜೂಹಿ ಚಾವ್ಲಾ ಬಾಲಿವುಡ್ ನಲ್ಲಿ ಅಭಿನಯಿಸಿದ 'ಗುಲಾಬ್ ಗ್ಯಾಂಗ್' ಚಿತ್ರ ಉತ್ತಮ ವಿಮರ್ಶೆಗೆ ಪಾತ್ರವಾಯಿತು. ಈ ಚಿತ್ರದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಹೋಲುವ ಸುಮಿತ್ರಾ ದೇವಿ ಪಾತ್ರವನ್ನು ಪೋಷಿಸಿದ್ದರು. (ಏಜೆನ್ಸೀಸ್)


Click it and Unblock the Notifications












