'ಮಠ' ಸಿನಿಮಾದ ವಿರುದ್ಧ ಕಿಡಿಕಾರಿದ ಕಾಳಿ ಸ್ವಾಮಿ
ಹೊಸದಾಗಿ ಬರುತ್ತಿರುವ 'ಮಠ' ಸಿನಿಮಾದ ವಿರುದ್ಧ ಮಾಜಿ ಬಿಗ್ಬಾಸ್ ಸ್ಪರ್ಧಿಯೂ ಆಗಿರುವ ಕಾಳಿ ಸ್ವಾಮಿ ಕಿಡಿಕಾರಿದ್ದಾರೆ.
ಮಠ ಎಂಬುದು ಪವಿತ್ರವಾದ ಸ್ಥಳ. ರಾಜ್ಯದಲ್ಲಿ ಪರಮಪುಣ್ಯವಾದ ಹಲವು ಮಠಗಳಿವೆ. ದೇವಾಲಯಗಳನ್ನೂ ಸಹ ಮಠಗಳೆಂದು ಕರೆಯುವ ಪ್ರತೀತಿ ಇದೆ. ಹೀಗಿರುವಾಗ 'ಮಠ' ಎಂದು ಧಾರ್ಮಿಕ ಕ್ಷೇತ್ರದ ಹೆಸರಿಟ್ಟುಕೊಂಡು ತಮಾಷೆ ಮಾಡುವ ಅಸಭ್ಯಗಳನ್ನು ತೋರಿಸುವ ಕೆಲಸ ಆಗುತ್ತಿದೆ ಎಂದು ಕಾಳಿ ಸ್ವಾಮಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಠಗಳಲ್ಲಿ ಸಮಸ್ಯೆ ಇದ್ದರೆ ಅದನ್ನು ಪರಿಹರಿಸಿಕೊಳ್ಳಲು ವ್ಯವಸ್ಥೆ ಇದೆ, ನ್ಯಾಯಾಲಯಗಳಿವೆ. ಆದರೆ ಅದನ್ನೇ ಎತ್ತಿ ತೋರಿಸಿ ಹೀಗಳೆಯುವ ಕಾರ್ಯ ಆಗಬಾರದು. ಕರ್ನಾಟಕದಲ್ಲಿ ಸಾವಿರಾರು ಮಂದಿ ಮಠಾಧೀಶರಿದ್ದಾರೆ ಅವರೆಲ್ಲರೂ ಈ ಮಠ ಸಿನಿಮಾದ ವಿರುದ್ಧ ದನಿ ಎತ್ತಬೇಕು ಎಂದು ಕಾಳಿ ಸ್ವಾಮಿ ಕರೆ ನೀಡಿದರು.
ಚಲನಚಿತ್ರರಂಗದ ಹಾಸ್ಯನಟರನ್ನು ಆರಿಸಿ ಅವರಿಗೆ ಖಾವಿ ಹಾಕಿಸಿ ಸ್ವಾಮಿಗಳನ್ನಾಗಿ ಮಾಡಿ, ಹಾಸ್ಯ ನಟರ ಮೂಲಕ ಸ್ವಾಮೀಜಿಗಳನ್ನು ಹಾಸ್ಯ ಮಾಡುವ ಕಾರ್ಯ ಮಾಡಲಾಗುತ್ತಿದೆ. ಅಲ್ಲಿಗೆ ಕರ್ನಾಟಕದ ಸ್ವಾಮೀಜಿಗಳೆಲ್ಲ ಹಾಸ್ಯನಟರಾ ಹಾಗಿದ್ದರೆ? ಸುದೀಪ್, ದರ್ಶನ್, ಅಪ್ಪು ಮಾಡುವ ಪಾತ್ರಕ್ಕೂ ಹಾಸ್ಯನಟರು ಪಾತ್ರಕ್ಕೂ ವ್ಯತ್ಯಾಸವಿದೆ'' ಎಂದಿದ್ದಾರೆ.

ಸತ್ಯಕತೆ ಹೇಗೆ ಆಗುತ್ತದೆ: ಕಾಳಿ ಸ್ವಾಮಿ ಪ್ರಶ್ನೆ
ಕರ್ನಾಟಕದಲ್ಲಿರುವ 5265 ಮಠಗಳ ಸತ್ಯಕತೆ ಎಂದು ಸಿನಿಮಾದ ಟ್ರೈಲರ್ನಲ್ಲಿ ಹೇಳಲಾಗಿದೆ. ಒಂದು ಸಿನಿಮಾ ಅಂದ ಮೇಲೆ 60 ಸೀನ್ಗಳ ಮೇಲೆ ಮಾಡಲಿಕ್ಕಾಗಲ್ಲ, ಆದರೆ ಇವರು 5265 ಮಠಗಳ ಸತ್ಯಕತೆ ಎಂದಿದ್ದಾರೆ ಹಾಗಾದರೆ ಇವರು 5000 ಸೀನ್ಗಳುಳ್ಳ ಸಿನಿಮಾ ಮಾಡುತ್ತಿದ್ದಾರಾ? ಎಂದಿರುವ ಕಾಳಿ ಸ್ವಾಮಿ, ಟ್ರೈಲರ್ನಲ್ಲಿರುವ ಒಂದು ದೃಶ್ಯದ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದರು.

ಯಾವ ಸ್ವಾಮೀಜಿ ಧರ್ಮ ಒಡೆದಿದ್ದಾರೆ: ಕಾಳಿ ಸ್ವಾಮಿ ಪ್ರಶ್ನೆ
''ಟ್ರೈಲರ್ನಲ್ಲಿ ಒಂದು ದೃಶ್ಯವಿದೆ. ಅದರಲ್ಲಿ ರಾಜಕಾರಣಿಯೊಬ್ಬ ಯಡಿಯೂರಪ್ಪ ಅವರನ್ನು ಅನುಕರಿಸುವಂತೆ ಒಂದು ಐದಾರು ಸ್ವಾಮೀಜಿಗಳನ್ನು ಕರೆದುಕೊಂಡು ಬಾ ಒಳಜಾತಿಗಳನ್ನೆಲ್ಲ ಒಡೆದು ಬಿಡುವ ಎನ್ನುತ್ತಾನೆ. ಹಾಗಾದರೆ ಸ್ವಾಮೀಜಿಗಳು ಎಷ್ಟು ಒಳಜಾತಿಗಳನ್ನು ಒಡೆದಿದ್ದಾರೆ ಹೇಳಲಿ. ಮೀಸಲಾತಿಗಾಗಿ ಬೃಹತ್ ಹೋರಾಟ ಮಾಡಿದರಲ್ಲ ಸ್ವಾಮೀಜಿಗಳು ಅವರೆಲ್ಲ ಏನು ರಾಜಕಾರಣಿಗಳ ಪ್ರಭಾವದಿಂದ ಕೂತಿದ್ದರಾ? ಎಂದು ಕಾಳಿ ಸ್ವಾಮಿ ಪ್ರಶ್ನೆ ಮಾಡಿದ್ದಾರೆ.

'ನಮ್ಮ ಧರ್ಮದ ಬಗ್ಗೆ ಮಾತ್ರವೇ ಏಕೆ ಸಿನಿಮಾ ಮಾಡ್ತೀರಿ?'
ಯಾರೊ ಒಬ್ಬರು ತಪ್ಪು ಮಾಡಿದ್ದಾರೆಂದು ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗಲಾಗದು. ಯಾರೊ ಒಬ್ಬ ನಟ-ನಟಿ ತಪ್ಪು ಮಾಡಿದ್ದಾಳೆಂದರೆ ಇಡೀ ಚಿತ್ರರಂಗವನ್ನು ಜರಿಯುವುದು ಹೇಗೆ ಉಚಿತವಲ್ಲವೊ ಹಾಗೆಯೇ ಮಠದ ಹೆಸರಿಟ್ಟುಕೊಂಡು ಯಾವುದೋ ಒಂದು ಘಟನೆಯನ್ನು ಉದಾಹರಣೆಯಾಗಿರಿಸಿಕೊಂಡು ಎಲ್ಲ ಮಠಗಳು ಹಾಗೆಯೇ ಎನ್ನುವುದು ಸರಿಯಲ್ಲ ಎಂದಿದ್ದಾರೆ ಕಾಳಿ ಸ್ವಾಮಿ. ಜೊತೆಗೆ ಕೇವಲ ಹಿಂದೂ ಧರ್ಮದ ಬಗ್ಗೆಯೇ ಏಕೆ ಸಿನಿಮಾ ಮಾಡ್ತೀರಿ, ಅದೇ ಹೆಸರು ಯಾಕೆ ಇಡ್ತೀರಿ? ಮದರಸಾ ಅಥವಾ ಚರ್ಚ್ ನಲ್ಲಿ ಪಾದ್ರಿ ಮಾಡಿದ ಕಾರ್ಯದ ಬಗ್ಗೆ ಏಕೆ ಸಿನಿಮಾ ಮಾಡಲ್ಲ. ಆ ಹೆಸರೇಕೆ ಇಡಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ರವೀಂದ್ರ ವಂಶಿ ನಿರ್ದೇಶನದ ಸಿನಿಮಾ
'ಮಠ' ಹೆಸರಿನ ಹೊಸ ಕನ್ನಡ ಸಿನಿಮಾವೊಂದು ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಸಿನಿಮಾದಲ್ಲಿ ಸಾಧುಕೋಕಿಲ, ಗುರುಪ್ರಸಾದ್, ತಬಲಾ ನಾಣಿ, ಬ್ಯಾಂಕ್ ಜನಾರ್ಧನ್ ಇನ್ನಿತರೆ ಹಾಸ್ಯ ಕಲಾವಿದರು ನಟಿಸಿದ್ದಾರೆ. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಸ್ನೇಹಾ ಪಾತ್ರಧಾರಿ ಸಹ ಸಿನಿಮಾದಲ್ಲಿದ್ದಾರೆ. ಸಿನಿಮಾವನ್ನು ರವೀಂದ್ರ ವಂಶಿ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ರಮೇಶ್ ಕುಮಾರ್. ಸಿನಿಮಾದ ಟ್ರೈಲರ್ ಆರು ದಿನಗಳ ಹಿಂದೆ ಯೂಟ್ಯೂಬ್ನಲ್ಲಿ ಬಿಡುಗಡೆ ಆಗಿ, ಮೆಚ್ಚುಗೆ ಪಡೆದಿದೆ. ಈಗ ಕಾಳಿ ಸ್ವಾಮಿ ಸಿನಿಮಾದ ವಿರುದ್ಧ ದನಿ ಎತ್ತಿದ್ದಾರೆ.


Click it and Unblock the Notifications











