ಪ್ರಧಾನಿಗೆ ಪತ್ರ ಬರೆದ ಕಮಲ್ | Kamal hassan wrote a letter to prime minister | Filmibeat Kannada
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ರಾಜ್ಯಕ್ಕೆ ನ್ಯಾಯ ಒದಗಿಸಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ನಟಕಮಲ್ ಹಾಸನ್ ಅವರು ಮನವಿ ಮಾಡಿದ್ದಾರೆ.
ಮಕ್ಕಳ್ ನೀತಿ ಮೈಯಮ್(ಎಂಎನ್ ಎಂ) ಪಕ್ಷದ ಸಂಸ್ಥಾಪಕ ಹಾಗೂ ನಟ ಕಮಲ್ ಹಾಸನ್ ವಿಡಿಯೋ ಸಂದೇಶ ಕಳುಹಿಸುವ ಮೂಲಕ ಕಾವೇರಿ ಜಲ ನಿರ್ವಹಣೆ ಮಂಡಳಿ ರಚನೆ ಮಾಡುವಂತೆ ನರೇಂದ್ರ ಮೋದಿ ಅವರಿಗೆ ಬಹಿರಂಗವಾಗಿ ಆಗ್ರಹಿಸಿದ್ದಾರೆ.
'ಪ್ರಧಾನಿ ಮೋದಿಯವರೇ ನಿಮಗೆ ತಮಿಳುನಾಡಿನಲ್ಲಿ ಎದ್ದಿರುವ ಜಲವಿವಾದದ ಬಗ್ಗೆ ಎಲ್ಲವೂ ಗೊತ್ತಿದೆ. ನಿಮ್ಮ ಹಲವು ವರ್ಷಗಳ ರಾಜಕೀಯ ಅನುಭವದಿಂದ ನರ್ಮದಾ ನದಿ ನೀರು ನಿರ್ವಹಣಾ ಮಂಡಳಿಯಂತೆ ಈ ಪ್ರಕರಣದಲ್ಲೂ ನೀವು ಸುಲಭವಾಗಿ ನ್ಯಾಯ ಒದಗಿಸಬಹುದಿತ್ತು' ಎಂದಿದ್ದಾರೆ.
'ಗೋ ಬ್ಯಾಕ್ ಮೋದಿ...' ತಮಿಳು ನಾಡಲ್ಲಿ ಮೋದಿಗೆ ಧಿಕ್ಕಾರದ ಸ್ವಾಗತ!
"ಕರ್ನಾಟಕದಲ್ಲಿ ಮೇ.12 ರಂದು ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಕಾವೇರಿ ಜಲಮಂಡಳಿ ನಿರ್ಮಾಣದಲ್ಲಿ ವಿಳಂಬವಾಗುತ್ತಿದೆ ಎನ್ನಿಸುತ್ತಿದೆ. ಚುನಾವಣೆಗಳಿಗಿಂತ ಜನರು ಮುಖ್ಯ ಎಂಬುದು ಎಲ್ಲರಿಗೂ ಅರ್ಥವಾಗಬೇಕಿದೆ. ಕಾವೇರಿ ಜಲ ನಿರ್ವಹಣ ಮಂಡಳಿಯನ್ನು ತಕ್ಷಣವೇ ನಿರ್ಮಿಸುವ ಮೂಲಕ ನೀವು ತಮಿಳುನಾಡಿನ ಜನರ ಮತ್ತು ರೈತರ ಸಮಸ್ಯೆಗಳನ್ನು ಆಲಿಸುತ್ತೀರಾ ಎಂದು ನಾನು ನಂಬುತ್ತೇನೆ" ಎಂದು ಅವರು ಈ ವಿಡಿಯೋದಲ್ಲಿ ಹೇಳಿದ್ದಾರೆ.
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಫೆ.16 ರಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನಲ್ಲಿ, ತೀರ್ಪು ಬಂದ ಆರುವಾರಗಳ ಒಳಗೆ ಕಾವೇರಿ ಜಲ ನಿರ್ವಹಣ ಮಂಡಳಿ ರಚಿಸುವಂತೆ ಆದೇಶ ನೀಡಿತ್ತು. ಆದರೆ ಇದುವರೆಗೂ ಕಾವೇರಿ ನಿರ್ವಹಣ ಮಂಡಳಿಯನ್ನು ಕುರಿತಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಯಾವುದೇ ಮಾಹಿತಿ ನೀಡಿಲ್ಲ. ಈ ಮೂಲಕ ಕೇಂದ್ರ ಸರ್ಕಾರ ನ್ಯಾಯಾಂಗ ನಿಂದನೆ ಮಾಡಿದೆ ಎಂದು ತಮಿಳುನಾಡು ದೂರಿದೆ.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ | Subscribe to Kannada Filmibeat.