ವಿಶ್ವರೂಪಂ ಚಿತ್ರಕ್ಕೆ ಕರ್ನಾಟಕದಲ್ಲಿ ನಿಷೇಧ ಇಲ್ಲ
ಕಮಲ್ ಹಾಸನ್ ನಟಿಸಿ, ನಿರ್ದೇಶಿಸಿ, ನಿರ್ಮಿಸಿರುವ ಭಾರಿ ಬಜೆಟ್ 'ವಿಶ್ವರೂಪಂ' ಚಿತ್ರಕ್ಕೆ ತಮಿಳುನಾಡು ಸರ್ಕಾರ ನಿಷೇಧ ಹೇರಿದೆ. ಈ ಚಿತ್ರ ಜ.25ರಂದು ದೇಶದಾದ್ಯಂತ ಬಿಡುಗಡೆಯಾಗುತ್ತಿದೆ. ಆದರೆ ತಮಿಳುನಾಡಿನಲ್ಲಿ ಮಾತ್ರ 15 ದಿನಗಳ ಕಾಲ ನಿಷೇಧ ಹೇರಲಾಗಿದೆ.
ಈ ಚಿತ್ರಕ್ಕೆ ವಿವಿಧ ಮುಸ್ಲಿಂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಚಿತ್ರವನ್ನು ನಿಷೇಧಿಸುವಂತೆ ಆಗ್ರಹಿಸಿದ್ದವು. ಚಿತ್ರದಲ್ಲಿ ಮುಸ್ಲಿಂ ಸಮುದಾಯಕ್ಕೆ ಧಕ್ಕೆ ತರುವ ಸನ್ನಿವೇಶಗಳಿವೆ ಎಂದು ಆರೋಪಿಸಲಾಗಿತ್ತು. ಈ ಎಲ್ಲಾ ಕಾರಣಗಳಿಗಾಗಿ ಚಿತ್ರವನ್ನು ಬ್ಯಾನ್ ಮಾಡಲಾಗಿದೆ.
ಆದರೆ ಬೆಂಗಳೂರಿನಲ್ಲಿ ಮಾತ್ರ ಚಿತ್ರ ಜ.25ರಿಂದ ಅಮೋಘ ಪ್ರಾರಂಭ ಕಾಣುತ್ತಿದೆ. ಬೆಂಗಳೂರಿನ ಮಲಿಟಿಫ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಸೇರಿದಂತೆ ಸುಮಾರು 32 ಚಿತ್ರಮಂದಿರಗಳಲ್ಲಿ 'ವಿಶ್ವರೂಪಂ' ಬಿಡುಗಡೆಯಾಗುತ್ತಿದೆ. ಈ ಮೂಲಕ ತಮಿಳು ಚಿತ್ರರಸಿಕರಿಗೆ ಭರ್ಜರಿ ಕೊಡುಗೆ ಸಿಕ್ಕಂತಾಗಿದೆ.'ವಿಶ್ವರೂಪಂ' ತೆಲುಗು ಆವೃತ್ತಿ ಕೋಲಾರ, ಚಿತ್ರದುರ್ಗ, ಬಾಂಬೆ ಕರ್ನಾಟಕ, ಹೈದರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ಬಿಡುಗಡೆಯಾಗುತ್ತಿದೆ. ಮೊದಲೇ ಚಿತ್ರಮಂದಿರ ಸಮಸ್ಯೆಯಿಂದ ತಿಣುಕಾಡುತ್ತಿರುವ ಕನ್ನಡ ಚಿತ್ರಗಳಿಗೆ 'ವಿಶ್ವರೂಪಂ' ಚಿತ್ರ ಮತ್ತೊಂದು ಹೊಡೆತ ನೀಡಿದೆ.
ಮುಸ್ಲಿಂ ಸಂಘಟನೆಗಳ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಕಮಲ್ ಹಾಸನ್, "ತಮ್ಮ ಚಿತ್ರಕ್ಕೆ ನಿಷೇಧ ಹೇರಿರುವುದು ನಿಜಕ್ಕೂ ಆಘಾತಕಾರಿ ಬೆಳವಣಿಗೆ. ಇದೊಂದು ಸಾಂಸ್ಕೃತಿಕ ಭಯೋತ್ಪಾದನೆ" ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
"ತಮ್ಮ ಚಿತ್ರದಲ್ಲಿ ಮುಸ್ಲಿಂ ಭಾಂಧವರ ಮನೋಭಾವಗಳಿಗೆ ಧಕ್ಕೆ ತರುವಂತಹ ಯಾವುದೇ ಸನ್ನಿವೇಶಗಳಿಲ್ಲ. ಎಲ್ಲ ಧರ್ಮಗಳ ಮೌಲ್ಯಗಳನ್ನೂ ನಾನು ಗೌರವಿಸುತ್ತಾ ಬಂದಿದ್ದೇನೆ. ಎಲ್ಲ ಧಾರ್ಮಿಕ ಬಾಂಧವರೊಂದಿಗೆ ಸೋದರಭಾವದಿಂದ ಬದುಕುತ್ತಿರುವ ಭಾರತದ ಸತ್ಪ್ರಜೆ ನಾನು. ಮುಸ್ಲಿಂ ಭಾವನೆಗಳಿಗೆ ಧಕ್ಕೆ ತರುವಂತೆ ನಾನೇಕೆ ಸಿನಿಮಾ ತೆಗೆಯುತ್ತೇನೆ" ಎಂದಿದ್ದಾರೆ ಕಮಲ್. (ಒನ್ಇಂಡಿಯಾ ಕನ್ನಡ)


Click it and Unblock the Notifications












