ತಾಜಾ ವಿವಾದದ ಸುಳಿಯಲ್ಲಿ ಕಮಲ್ 'ವಿಶ್ವರೂಪಂ'
'ಸಕಲ ಕಲಾ ವಲ್ಲಭನ್' ಕಮಲ್ ಹಾಸನ್ ನಟಿಸಿ, ನಿರ್ದೇಶಿಸಿರುವ 'ವಿಶ್ವರೂಪಂ' ಚಿತ್ರಕ್ಕೆ ತಾಜಾ ವಿವಾದವೊಂದು ಎದುರಾಗಿದೆ. ಈ ಚಿತ್ರವನ್ನು ನಿಷೇಧಿಸಬೆಕು ಎಂದು ಮುಸ್ಲಿಂ ಸಂಘಟನೆಗಳು ಆಗ್ರಹಿಸಿವೆ. ಈ ಚಿತ್ರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿದೆ ಎಂಬುದು ಅವರ ವಾದ.
'ವಿಶ್ವರೂಪಂ' ಚಿತ್ರದ ಪೋಸ್ಟರ್ ಗಳನ್ನು ನೋಡುತ್ತಿದ್ದರೆ ಮತೀಯ ಗಲಭೆಗಳಿಗೆ ಕಾರಣವಾಗುವಂತಿದೆ. ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತಿರುವಂತಿರುವ ಈ ಚಿತ್ರವನ್ನು ನಿಷೇಧಿಸಬೇಕು ಎಂದು ತಮಿಳು ಮುಸ್ಲಿಂ ಮುನ್ನೇತ್ರ ಕಳಗಂ ಪ್ರೆಸಿಡೆಂಟ್ ಹಾಗೂ ತಮಿಳುನಾಡು ಶಾಸಕ ಎಂ.ಎಚ್.ಜವಹಿರುಲ್ಲಾ ಆಗ್ರಹಿಸಿದ್ದಾರೆ.
ಈ ಬಗ್ಗೆ ಅವರು ಮಾತನಾಡುತ್ತಾ, "ವಿವಿಧ ಮುಸ್ಲಿಂ ಸಂಘಟನೆಗಳ ಪ್ರತಿನಿಧಿಗಳು ಚೆನ್ನೈ ನಗರ ಪೊಲೀಸ್ ಕಮೀಷನರ್ ಎಸ್ ಜಾರ್ಜ್ ಅವರನ್ನು ಭೇಟಿ ಮಾಡಿ 'ವಿಶ್ವರೂಪಂ' ಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬಾರದು" ಎಂದು ಮನವಿ ಪತ್ರ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.ಈ ಚಿತ್ರಕ್ಕೆ ನಿಷೇಧ ಹೇರಬೇಕು ಎಂದು ಸೆನ್ಸಾರ್ ಮಂಡಳಿ ಹಾಗೂ ಗೃಹ ಕಾರ್ಯದರ್ಶಿ ಅವರನ್ನು ಭೇಟಿಯಾಗುತ್ತಿದ್ದೇವೆ. ಅವಶ್ಯಕತೆ ಬಿದ್ದರೆ ಕೋರ್ಟ್ ಮೆಟ್ಟಿಲೇರುವುದಾಗಿಯೂ ಅವರು ಎಚ್ಚರಿಸಿದ್ದಾರೆ. ಚಿತ್ರದಲ್ಲಿ ವಿವಾದಿತ ಸನ್ನಿವೇಶಗಳಿವೆ ಎಂಬ ಅನುಮಾನವಿರುವ ಕಾರಣ ತಮಗೆ ವಿಶೇಷ ಪ್ರದರ್ಶನವನ್ನು ಏರ್ಪಡಿಸಬೇಕು ಎಂದು ಕಮಲ್ ಹಾಸನ್ ಅವರನ್ನು ಕೋರಿದ್ದೆವು.
ಆದರೆ ಕಮಲ್ ಅವರು ಇದುವರೆಗೂ ತಮ್ಮ ಕೋರಿಕೆಗೆ ಕವಡೆಕಾಸಿನ ಕಿಮ್ಮತ್ತು ಕೊಟ್ಟಿಲ್ಲ. ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ತಮ್ಮ ಹೋರಾಟವನ್ನು ತೀವ್ರಗೊಳಿಸುವುದಾಗಿ ಹೇಳಿದ್ದಾರೆ. 'ವಿಶ್ವರೂಪಂ' ಚಿತ್ರ ಇದೇ ಜ.25ರಂದು ತೆರೆಗೆ ಅಪ್ಪಳಿಸುತ್ತಿದೆ. ಚಿತ್ರದ ಶೀರ್ಷಿಕೆ ಉರ್ದು ಭಾಷೆಯ ಮಾದರಿಯಲ್ಲಿ ವಿನ್ಯಾಸ ಮಾಡಿರುವುದು ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ. (ಏಜೆನ್ಸೀಸ್)


Click it and Unblock the Notifications












