'ಮನೆಗೆ ಬರಲಿಲ್ಲ ಅಂದ್ರೆ ಸಾಯಿಸ್ತೀನಿ ಬಡ್ಡಿಮಗನೇ' ಎಂದಿದ್ದ ಅಂಬರೀಶ್.!
ಕನ್ನಡ ಚಿತ್ರರಂಗದ ಹಿರಿಯ ಕೊಂಡಿ ಕಳಚಿ ಬಿದ್ದಿದೆ. ರೆಬೆಲ್ ಸ್ಟಾರ್ ಅಂಬರೀಶ್ ಇಹಲೋಕ ತ್ಯಜಿಸಿದ್ದಾರೆ. ಮಂಡ್ಯದ ಗಂಡು, ಕಲಿಯುಗದ ಕರ್ಣ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.
ಅಂಬರೀಶ್ ನಿಧನಕ್ಕೆ ಇಡೀ ಕರುನಾಡು ಕಂಬನಿ ಮಿಡಿದಿದೆ. ಅಂಬರೀಶ್ ಗೆ ಅತ್ಯಂತ ಆತ್ಮೀಯರಾಗಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಭಾವುಕರಾಗಿದ್ದಾರೆ.
ಅಂಬರೀಶ್ ನಿಧನದ ಸುದ್ದಿ ಕೇಳಿದ ಕೂಡಲೆ ಬೆಂಗಳೂರಿಗೆ ಆಗಮಿಸಿದ ರಜನಿಕಾಂತ್, ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಅಂಬಿ ಪಾರ್ಥೀವ ಶರೀರದ ಮುಂದೆ ನಿಂತು ಭಾವುಕರಾದ ತಲೈವಾ, ಹಳೇ ನೆನಪುಗಳಿಗೆ ಜಾರಿ ಕಣ್ಣೀರಿಟ್ಟರು. ಅಂಬರೀಶ್ ಗೆ ರಜನಿಕಾಂತ್ ಸಲ್ಲಿಸಿದ ನುಡಿ ನಮನ ಇಲ್ಲಿದೆ...

ಮನಸ್ಸಿಗೆ ತುಂಬಾ ಭಾರವಾಗಿದೆ
''ಅಂಬರೀಶ್ ಅಗಲಿಕೆಯಿಂದ ಮನಸ್ಸಿಗೆ ತುಂಬಾ ಭಾರವಾಗಿದೆ. ನಾನು ಯಾವಾಗ ಬೆಂಗಳೂರಿಗೆ ಬಂದರೂ ಅಂಬರೀಶ್ ಮನೆಗೆ ಊಟ ಮಾಡದೇ ಹೋಗುತ್ತಿರಲಿಲ್ಲ. ನಾಲ್ಕೈದು ಬಾರಿ ಬೆಂಗಳೂರಿಗೆ ಬಂದಾಗ ಅಂಬರೀಶ್ ಮನೆಗೆ ಹೋಗಲು ಆಗಿರಲಿಲ್ಲ'' - ರಜನಿಕಾಂತ್, ನಟ

ಸಾಯಿಸಿಬಿಡುವೆ..
''ಏಳು ದಿನಗಳ ಹಿಂದೆಯಷ್ಟೇ ನಾನು ಬೆಂಗಳೂರಿಗೆ ಬಂದಿದ್ದೆ. ಆಗ ಫೋನ್ ಮಾಡಿದ್ದಾಗ, ನನಗೆ ಅಂಬರೀಶ್ ಬೈದಿದ್ದರು. ಮುಂದಿನ ಬಾರಿ ಮನೆಗೆ ಬಾರದೇ ಇದ್ದರೆ ಬಡ್ಡಿಮಗನೇ ನಿನ್ನನ್ನ ಸಾಯಿಸಿಬಿಡುವೆ ಎಂದಿದ್ದ'' ಎನ್ನುತ್ತಾ ರಜನಿಕಾಂತ್ ಭಾವುಕರಾದರು.

ಸಾಧ್ಯವೇ ಇಲ್ಲ
''ಆಪ್ತ ಗೆಳೆಯರು ಒಬ್ಬರೋ, ಇಬ್ಬರೋ ಇರ್ತಾರೆ ಅಷ್ಟೇ. ಆದ್ರೆ, ಅಂಬರೀಶ್ ಗೆ ನೂರು-ಇನ್ನೂರು ಆಪ್ತ ಗೆಳೆಯರು ಇದ್ದಾರೆ. ಚಿತ್ರರಂಗದಲ್ಲಿ ಅಂಬರೀಶ್ ತರಹ ಒಬ್ಬ ನಟ ಬರಬಹುದು. ಆದ್ರೆ, ಅವರ ಹಾಗೆ ಓರ್ವ ಮನುಷ್ಯ ಬರಲು ಸಾಧ್ಯ ಇಲ್ಲ'' - ರಜನಿಕಾಂತ್, ನಟ

ರಾಜನ ಹಾಗೆ ಬದುಕಿದ್ದ ಅಂಬರೀಶ್
''ಸುಮಲತಾ ಮತ್ತು ಅಭಿಶೇಕ್ ಗೆ ದುಃಖ ಭರಿಸುವ ಶಕ್ತಿ ಆ ದೇವರು ಕೊಡಲಿ. ಅಂಬರೀಶ್ ಆತ್ಮಕ್ಕೆ ಶಾಂತಿ ಸಿಗಲಿ. ರಾಜನ ಹಾಗೆ ಬದುಕಿದ್ದರು ಅಂಬರೀಶ್'' - ರಜನಿಕಾಂತ್, ನಟ


Click it and Unblock the Notifications











