ಸಿಎಂ ಸಿದ್ದರಾಮಯ್ಯ ಭೇಟಿಯಾದ ದುನಿಯಾ ವಿಜಿ
"ಕರಿ ಚಿರತೆ ಯಾವಾಗಲೂ ಕರಿಚಿರತೆಯಾಗಿಯೇ ಇರುತ್ತೆ. ಯಾರಿಗೂ ಹೆದರಲ್ಲ" ಎಂದು ಸಿನಿಮಾ ಮಾದರಿಯಲ್ಲಿಯೇ ದುನಿಯಾ ವಿಜಯ್ ಹೇಳಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ದುನಿಯಾ ವಿಜಯ್ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆ ಇದು.
ಶನಿವಾರ ದುನಿಯಾ ವಿಜಯ್ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ನಮ್ಮ ಕುಟುಂಬ ಒಡೆಯಲು ಪೊಲೀಸ್ ಅಧಿಕಾರಿ ದೇವರಾಜ್ ಕಾರಣ ಎಂದು ಎರಡು ದಿನಗಳ ಹಿಂದೆ ಆರೋಪ ಮಾಡಿದ್ದ ವಿಜಯ್, ಇಂದು ದೇವರಾಜ್ ವಿರುದ್ಧ ದೂರು ನೀಡಲು ಬಂದಿಲ್ಲ ಎಂದು ಸ್ಪಷ್ಟನೆ ನೀಡಿದರು. [ವೈಮನಸು ಮರೆತು ಒಂದಾದ ವಿಜಯ್ - ನಾಗರತ್ನ]

'ನಾನು-ನನ್ನ ಪತ್ನಿ ಒಂದಾದ ಹಿನ್ನೆಲೆಯಲ್ಲಿ ಸಂತಸ ಹಂಚಿಕೊಳ್ಳಲು ಬಂದಿದ್ದೆ. ಈ ಹಿಂದೆ ಸಿಎಂ ಸಿದ್ದರಾಮಯ್ಯ ದಂಪತಿ ಒಂದಾಗಿ ಹೋಗುವಂತೆ ಬುದ್ಧಿವಾದ ಹೇಳಿದ್ದರು. ಆದ್ದರಿಂದ ಅವರನ್ನು ಭೇಟಿ ಮಾಡಿ ಒಂದಾದ ವಿಷಯ ತಿಳಿಸಿದೆ. ಇದಕ್ಕೆ ಸಂತಸ ವ್ಯಕ್ತಪಡಿಸಿದ ಸಿಎಂ, ಒಟ್ಟಾಗಿ ಬಾಳಿ ಎಂದು ಹಾರೈಸಿದರು ಎಂದು ಹೇಳಿದರು.
ಮಾತಿನ ಮೂಲಕವೇ ಡಿಸಿಪಿ ದೇವರಾಜ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ದುನಿಯಾ ವಿಜಯ್ ಅವರು, ದೇವರಾಜ್ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು ಎಂದು ಮುಂದೆ ನಿರ್ಧರಿಸುತ್ತೇನೆ, ಕರಿ ಚಿರತೆ ಯಾವಾಗಲೂ ಕರಿಚಿರತೆಯಾಗಿಯೇ ಇರುತ್ತೆ. ಯಾರಿಗೂ ಹೆದರಲ್ಲ ಎಂದು ಡೈಲಾಗ್ ಹೊಡೆದರು. [ದುನಿಯಾ ವಿಜಯ್ ಡೈವೋರ್ಸ್ ಡ್ರಾಮಾ ಕಾಲಚಕ್ರ]
ಯಾರು ಡಿಸಿಪಿ ದೇವರಾಜ್ : ಸದ್ಯ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿರುವ ದೇವರಾಜ್ ಅವರು ಎರಡು ವರ್ಷಗಳ ಹಿಂದೆ ಬೆಂಗಳೂರು ನಗರದ ಉಪ ಪೊಲೀಸ್ ಆಯುಕ್ತರಾಗಿ ಕೆಲಸ ಮಾಡುತ್ತಿದ್ದರು.
ತಮ್ಮ ಸಂಸಾರದಲ್ಲಿ ವಿರಸ ಇತ್ತು. ಆದರೆ, ಬಿರುಕು ಇರಲಿಲ್ಲ. ಡಿಸಿಪಿ ದೇವರಾಜ್ ಅವರು ನಮ್ಮ ಸಂಸಾರದ ವಿರಸವನ್ನು ದುರುಪಯೋಗ ಪಡಿಸಿಕೊಂಡು ಬಿರುಕು ಮೂಡಿಸಿದರು ಎಂದು ಎರಡು ದಿನಗಳ ಹಿಂದೆ ದುನಿಯಾ ವಿಜಯ್ ಆರೋಪಿಸಿದ್ದರು. ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸುತ್ತೇನೆ ಎಂದು ಹೇಳಿದ್ದರು, ಆದರೆ ಇದುವರೆಗೂ ದೂರು ಸಲ್ಲಿಸಿಲ್ಲ.


Click it and Unblock the Notifications











