ಹೃದಯಶಿವ 'ಮೊದಲ ಮಳೆ'ಗೆ ಪ್ರೇಮ್ ನಾಯಕ
ನಿರ್ದೇಶಕನಾಗಬೇಕು ಅಂತ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಹೃದಯಶಿವ ಆಗಿದ್ದು ಮಾತ್ರ ಗೀತ ಸಾಹಿತಿ. 'ಮುಂಗಾರು ಮಳೆ' ಚಿತ್ರದ ''ಇವನು ಗೆಳೆಯನಲ್ಲ...'', ''ಸುವ್ವಿ ಸುವ್ವಾಲಿ...'' ಸೇರಿದಂತೆ 280 ಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಿತ್ಯ ಬರೆದಿರುವ ಹೃದಯಶಿವ ಈಗ ತಮ್ಮ ಕನಸನ್ನ ಈಡೇರಿಸಿಕೊಳ್ಳುವ ಕಾಲ ಹತ್ತಿರ ಬಂದಿದೆ.
ಅರ್ಥಾತ್, ಗೀತ ಸಾಹಿತಿ ಹೃದಯಶಿವ ನಿರ್ದೇಶಕನಾಗುತ್ತಿದ್ದಾರೆ.! ಹೌದು, 'ಮೊದಲ ಮಳೆ' ಅನ್ನುವ ಅಪ್ಪಟ ಪ್ರೇಮ ಕಥೆ ಚಿತ್ರವನ್ನ ಹೃದಯಶಿವ ನಿರ್ದೇಶಿಸಲಿದ್ದಾರೆ. [ಕ್ಲಾಸ್+ಮಾಸ್ ಚಿತ್ರ ಸಾಹಿತಿ ಹೃದಯ ಶಿವಗಿರೊದೊಂದೇ ಆಸೆ!]

ಈಗಾಗಲೇ ಕಥೆ-ಚಿತ್ರಕಥೆ ರೆಡಿಮಾಡಿಕೊಂಡಿರುವ ಹೃದಯಶಿವ ಸದ್ಯದಲ್ಲೇ ಶೂಟಿಂಗ್ ಶುರುಮಾಡಲಿದ್ದಾರೆ. ಅಂದ್ಹಾಗೆ, 'ಮೊದಲ ಮಳೆ' ಚಿತ್ರದಲ್ಲಿ ನೆನೆಯುವ ನಾಯಕ ಯಾರು ಗೊತ್ತಾ? ಬೇರಾರು ಅಲ್ಲ, ಈಗಾಗಲೇ ಅಮೂಲ್ಯ ಜೊತೆ 'ಮಳೆ'ಯಲ್ಲಿ ನೆಂದಿರುವ 'ನೆನಪಿರಲಿ' ಪ್ರೇಮ್.
'ಮೊದಲ ಮಳೆ' ಚಿತ್ರಕಥೆ ಕೇಳಿ ಹಿಂದುಮುಂದು ನೋಡದೆ ಪ್ರೇಮ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಚಿತ್ರದಲ್ಲಿ ಫೋಟೋಗ್ರಾಫರ್ ಪಾತ್ರ ನಿರ್ವಹಿಸುತ್ತಿದ್ದಾರೆ ಪ್ರೇಮ್.

ಪ್ರೇಮ್ ಗೆ ಸೂಟ್ ಆಗುವ ನಾಯಕಿಯ ಹುಡುಕಾಟದಲ್ಲಿ ಹೃದಯಶಿವ ತೊಡಗಿದ್ದಾರೆ. ಸಕಲೇಶಪುರ ಸೇರಿದಂತೆ ಕರ್ನಾಟಕದ ಸುಂದರ ತಾಣಗಳಲ್ಲಿ ಶೂಟಿಂಗ್ ನಡೆಯಲಿದೆ. ಸದ್ಯದಲ್ಲೇ 'ಮೊದಲ ಮಳೆ'ಗೆ ಚಾಲನೆ ಸಿಗಲಿದೆ.


Click it and Unblock the Notifications











