ಸರಳ ವಿರಳ ನಟ ರಮೇಶ್ ಅರವಿಂದ್ ಗೆ ಐವತ್ತು
ಕನ್ನಡ ಚಿತ್ರರಂಗದ ಸರಳ ವಿರಳ ನಟ ರಮೇಶ್ ಅರವಿಂದ್ ಅವರಿಗೆ ಐವತ್ತು ಎಂದರೆ ಅಭಿಮಾನಿಗಳು ನಂಬಲ್ಲ. ಹೌದು ಕಲಾವಿದರಿಗೆ ವಯಸ್ಸೇ ಆಗಲ್ಲ. ಅದರಲ್ಲೂ ರಮೇಶ್ ರಂತಹ ಕಲಾವಿದರು ವಯಸ್ಸನ್ನು ಮುಂದಕ್ಕೆ ಓಡಲು ಬಿಟ್ಟು ಅವರು ಮಾತ್ರ ಮೂವತ್ತರ ಹರೆಯದಲ್ಲೇ ನಿಂತು ಬಿಟ್ಟಿರುತ್ತಾರೆ.
ಸಾಮಾನ್ಯವಾಗಿ ಸಿನಿಮಾ ತಾರೆಗಳೆಂದರೆ ಒಂದಿಲ್ಲೋಂದು ವಿವಾದ ಇದ್ದದ್ದೇ. ಆದರೆ ಈ ವಿಚಾರದಲ್ಲಿ ಮಾತ್ರ ರಮೇಶ್ ಅವರು ವಿವಾದ ರಹಿತ ನಟ. ಸೆಪ್ಟೆಂಬರ್ 10ರಂದು ಎಂದಿನಂತೆ ಅವರು ತಮ್ಮ ಹುಟ್ಟುಹಬ್ಬವನ್ನು ಸರಳ ಸುಂದರವಗಿ ಆಚರಿಸಿಕೊಂಡರು.
ಕೇವಲ ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲದೆ ಪಕ್ಕದ ತಮಿಳು, ತೆಲುಗು ಚಿತ್ರರಂಗಗಳಲ್ಲೂ ರಮೇಶ್ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಒಂಭತ್ತು ಶತದಿನೋತ್ಸವ ಆಚರಿಸಿಕೊಂಡ ಚಿತ್ರಗಳನ್ನು ಕೊಟ್ಟಂತಹ ಅಪರೂಪದ ನಟ ರಮೇಶ್. ಕೇವಲ ನಟನೆಯಲ್ಲಷ್ಟೇ ಅಲ್ಲದೆ ನಿರ್ದೇಶನದಲ್ಲೂ ತನ್ನದೇ ಆದ ಛಾಪು ಮೂಡಿಸಿದ ಕಲಾವಿದ.
ರಮೇಶ್ ಕಥೆ, ಚಿತ್ರಕಥೆ ರಚನೆಯಲ್ಲೂ ಒಂದು ಕೈ ಆಡಿಸಿ ಸೈ ಎನ್ನಿಸಿಕೊಂಡವರು. ಹೂಮಳೆ, ಅಮೃತಧಾರೆ ಹಾಗೂ ಆಕ್ಸಿಡೆಂಟ್ ಚಿತ್ರಗಳಿಗೆ ರಮೇಶ್ ಕತೆ ಹೆಣೆದು ಗೆದ್ದಿದ್ದಾರೆ. ಗಂಭೀರ ಪಾತ್ರಗಳೇ ಇರಲಿ ಕಾಮಿಡೇ ರೋಲೇ ಇರಲಿ ರಮೇಶ್ ಲೀಲಾಜಾಲವಾಗಿ ಒಗ್ಗಿಕೊಳ್ಳುತ್ತಾರೆ. ತಮಿಳಿಗೆ ಕಮಲ ಹಾಸನ್ ಹೇಗೋ ಕನ್ನಡಕ್ಕೆ ರಮೇಶ್ ಅರವಿಂದ್ ಹಾಗೆ.
ಕಸ್ತೂರಿ ವಾಹಿನಿಯ 'ಪ್ರೀತಿಯಿಂದ ರಮೇಶ್' ಹಾಗೂ ಈಟಿವಿ ಕನ್ನಡದಲ್ಲಿ 'ರಾಜ ರಾಣಿ ರಮೇಶ್' ಎಂಬ ಗೇಮ್ ಶೋ ಮೂಲಕ ತಮ್ಮ ಅಭಿಮಾನಿಗಳಿಗೆ ಹತ್ತಿರವಾದ ನಟ. ಇದೀಗ ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಮೂಲಕ ಇನ್ನಷ್ಟು ಮನಸ್ಸಿಗೆ ಹತ್ತಿರವಾಗಿದ್ದಾರೆ.
ರಮೇಶ್ ಅರವಿಂದ್ ನಿರ್ದೇಶನದ ತಮಿಳಿನ ಮಹತ್ವಾಕಾಂಕ್ಷಿ ಚಿತ್ರ ಉತ್ತಮ ವಿಲನ್ ಬಿಡುಗಡೆಗೆ ಸಿದ್ಧವಾಗಿದೆ. ಮಹಾನ್ ಕಲಾವಿದ ಕಮಲ್ ಹಾಸನ್ ಅವರಿಗೆ ಆಕ್ಷನ್ ಕಟ್ ಹೇಳಿರುವ ರಮೇಶ್ ಅವರು ಈ ಚಿತ್ರದ ಮೂಲಕ ತಮ್ಮ ವೃತ್ತಿ ಬದುಕಿನಲ್ಲಿ ಇನ್ನೊಂದು ಮೈಲಿಗಲ್ಲು ಸಾಧಿಸಿದ್ದಾರೆ. ಈ ಬಾರಿ ಮನೆಯಲ್ಲೇ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ಮೆನಿ ಮೆನಿ ಹ್ಯಾಪಿ ರಿಟರ್ನ್ಸ್ ಆಫ್ ದ ಡೇ ರಮೇಶ್. (ಫಿಲ್ಮಿಬೀಟ್ ಕನ್ನಡ)


Click it and Unblock the Notifications












