ಮಂಗಳಮುಖಿಯಾಗಿ ಮೆಚ್ಚಿಸಿದ ಸಂಚಾರಿ ವಿಜಯ್ ಕಾಲಿವುಡ್ ಸಂಚಾರ
'ನಾನು ಅವನಲ್ಲ ಅವಳು' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ ನಟ ಸಂಚಾರಿ ವಿಜಯ್ ಅವರಿಗೆ ಸಾಕಷ್ಟು ಅವಕಾಶಗಳು ದೊರೆಯುತ್ತಿವೆ. 'ರಿಕ್ತ' ಚಿತ್ರದ ಶೂಟಿಂಗ್ ಮುಗಿಸಿರುವ ಸಂಚಾರಿ ವಿಜಯ್ ಅವರು ಇದೀಗ ಮತ್ತೊಂದು ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.
ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಸಂಚಾರಿ ವಿಜಯ್ ಅವರು ಮೊದಲ ಸಿನಿಮಾದಲ್ಲಿ 'ಮಂಗಳಮುಖಿ' ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಮೆಚ್ಚುಗೆ ಗಳಿಸಿದರು. ಅಂದಹಾಗೆ ಈ ಬಾರಿ ಸಂಚಾರಿ ವಿಜಯ್ ಅವರು ಬರೀ ಕನ್ನಡದಲ್ಲಿ ಮಾತ್ರವಲ್ಲದೇ ಕಾಲಿವುಡ್ ಚಿತ್ರರಂಗದಲ್ಲೂ ತಮ್ಮ ಅಭಿನಯವನ್ನು ಪಸರಿಸಲಿದ್ದಾರೆ.[ಸಂದರ್ಶನ : ಸಂಚಾರಿ ವಿಜಯ್ 'ಅವನು...ಅವಳಾದ' ಪರಿ]

ಮಂಗಳಮುಖಿ ಪಾತ್ರ ಮಾಡಿ ಮೆಚ್ಚುಗೆ ಪಡೆದ ಸಂಚಾರಿ ವಿಜಯ್ ಅವರು ಹೊಸ ಚಿತ್ರ 'ಪಿರಂಗಿಪುರ'ದಲ್ಲಿ ಹಣ್ಣು-ಹಣ್ಣು ಮುದುಕನ ಪಾತ್ರದಲ್ಲಿ ಮಿಂಚಲಿದ್ದಾರೆ. ಭರ್ತಿ 80 ವಯಸ್ಸಿನ ಮುದುಕನ ಪಾತ್ರ ಮಾಡಲಿರುವ ಸಂಚಾರಿ ವಿಜಯ್ ಈಗಿನಿಂದಲೇ ಪಾತ್ರ ಪರಕಾಯ ಪ್ರವೇಶ ಮಾಡಲು ಸಜ್ಜಾಗಿದ್ದಾರೆ.[ವಿಡಿಯೋ: 'ವರ್ತಮಾನ'ದಲ್ಲಿ ಸಿಲುಕಿದ ಸಂಚಾರಿ ವಿಜಯ್]

'ಪಿರಂಗಿಪುರ' ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಏಕಕಾಲದಲ್ಲಿ ಮೂಡಿಬರಲಿದ್ದು, ಈ ಚಿತ್ರದ ಮೂಲಕ ಕಾಲಿವುಡ್ ಚಿತ್ರರಂಗಕ್ಕೂ ವಿಜಯ್ ಸಂಚಾರ ಮಾಡಲಿದ್ದಾರೆ. 'ಜಾನ್ ಜಾನಿ ಜನಾರ್ದನ' ಚಿತ್ರದ ನಿರ್ಮಾಪಕರೇ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ 'ಪಿರಂಗಿಪುರ' ಚಿತ್ರ ಸೆಟ್ಟೇರಲಿದೆ. ಸದ್ಯಕ್ಕೆ ಸಂಚಾರಿ ವಿಜಯ್ ಅವರು 'ರಿಕ್ತ', 'ಸಿಪಾಯಿ' ಮತ್ತು 'ಅಲ್ಲಮ' ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ.


Click it and Unblock the Notifications











