'ಬಂಗಾರದ ಮನುಷ್ಯ'ನ ಅವತಾರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಈಗಾಗಲೇ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಯಶಸ್ಸನ್ನು ಆಚರಿಸುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ಹೊಸ ಸಿನಿಮಾಗೆ ಒಪ್ಪಿಕೊಂಡಿದ್ದಾರೆ.
ಹೌದು ತಮ್ಮ ಅಪ್ಪಾಜಿ ವರನಟ ಡಾ.ರಾಜ್ ಅವರ ಸವಿ ನೆನಪಲ್ಲೇ ಆರಂಭವಾಗಿರುವ 'S/O ಬಂಗಾರದ ಮನುಷ್ಯ' ಎಂಬ ಹೊಸ ಚಿತ್ರದಲ್ಲಿ ನಟಿಸಲು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಈಗಾಗಲೇ ಅಸ್ತು ಎಂದಿದ್ದಾರೆ.[ವರ್ಮಾ ಅವರ 'ವಿರಪ್ಪನ್' 10 ದಿನದಲ್ಲಿ ಮಾಡಿದ ಕಲೆಕ್ಷನ್ ಎಷ್ಟು?]
ನಿರ್ಮಾಪಕಾರದ 'ಜಯಣ್ಣ-ಭೋಗೇಂದ್ರ' ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ನಿರ್ದೇಶಕ ಯೋಗಿ ಜಿ.ರಾಜ್ ಅವರು ನಿರ್ದೇಶನ ಮಾಡಲಿದ್ದಾರೆ. ಸಂಗೀತ ಮಾಂತ್ರಿಕ ವಿ.ಹರಿಕೃಷ್ಣ ಅವರು ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಇನ್ನುಳಿದಂತೆ ತಾರಾಗಣ ಮತ್ತು ಕ್ಯಾಮರಾ ತಂಡವನ್ನು ಇನ್ನೂ ಆಯ್ಕೆ ಮಾಡಲಿಲ್ಲ.
ಇದೇ ಶುಕ್ರವಾರ (ಜನವರಿ 15) ದಂದು ಚಿತ್ರದ ಮೂಹೂರ್ತ ನೆರವೇರಲಿದ್ದು, ಸಂಕ್ರಾಂತಿ ಹಬ್ಬದ ದಿನ ಒಳ್ಳೆ ಮುಹೂರ್ತ ಎಂದು ಆ ದಿನ ಚಿತ್ರಕ್ಕೆ ಕಾಯಿ ಒಡೆಯಲಿದ್ದಾರೆ. ಆದರೆ ಚಿತ್ರದ ಶೂಟಿಂಗ್ ಮಾತ್ರ ಶುರು ಆಗೋದು ಮೂರು ವಾರಗಳ ನಂತರವೇ,[ಸ್ಟೈಲಿಂಗ್ ಸ್ಟಾರ್ ಶಿವಣ್ಣನ, ಭರ್ಜರಿ 'ಶಿವಲಿಂಗ' ಟ್ರೈಲರ್ ಲೀಕ್..!]
ಇದಕ್ಕೆ ಕಾರಣ ಏನಪ್ಪಾ ಅಂದ್ರೆ, ಶಿವಣ್ಣ ಮತ್ತು ವಿಜಯ ರಾಘವೇಂದ್ರ ಅವರ ಜುಗಲ್ ಬಂದಿಯಲ್ಲಿ ಮೂಡಿಬರುತ್ತಿರುವ 'ಶ್ರೀಕಂಠ' ಸಿನಿಮಾ. ಈ ಸಿನಿಮಾದ ಶೂಟಿಂಗ್ ಕೊಂಚ ಬಾಕಿ ಇದ್ದು, ಫೆಬ್ರವರಿ 3-4 ವಾರದೊಳಗಾಗಿ ಮುಗಿಯಲಿದೆ. ತದನಂತರ 'S/O ಬಂಗಾರದ ಮನುಷ್ಯ' ಶುರುವಾಗಲಿದೆ.
ಅಂದಹಾಗೆ 1972ರಲ್ಲಿ ತೆರೆ ಕಂಡ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ 'ಬಂಗಾರದ ಮನುಷ್ಯ' ಚಿತ್ರಕ್ಕೂ ಶಿವಣ್ಣ ಅವರ ಹೊಸ ಚಿತ್ರಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ, ಇದು ಸಂಪೂರ್ಣ ಹೊಸ ಕಥೆ ಆಗಿರುತ್ತದೆ ಎಂದು ಸ್ವತಃ ನಿರ್ಮಾಪಕರೇ ಸ್ಪಷ್ಟಪಡಿಸಿದ್ದಾರೆ.
ಈ ಸಿನಿಮಾದ ಟೈಟಲ್ ಶಿವರಾಜ್ ಕುಮಾರ್ ಅವರಿಗಾಗಿಯೇ ಇರೋದು, ಮಾತ್ರವಲ್ಲದೇ ಶಿವಣ್ಣ ಅವರಿಗೆ ಕಥೆ ಕೂಡ ತುಂಬಾ ಇಷ್ಟ ಆಗಿದೆ. ಹಾಗಾಗಿ ಚಿತ್ರದ ಕೆಲಸ ಶುರು ಮಾಡುತ್ತಿದ್ದೇವೆ ಎಂದು ಚಿತ್ರತಂಡ ತಿಳಿಸಿದೆ.
ಸದ್ಯಕ್ಕೆ ಕೈ ತುಂಬಾ ಪ್ರಾಜೆಕ್ಟ್ ಹಿಡಿದು ಓಡಾಡುತ್ತಿರುವ ಶಿವಣ್ಣ ಅವರು 'ಶಿವಲಿಂಗ' ಮತ್ತು 'ಸಂತೆಯಲ್ಲಿ ನಿಂತ ಕಬೀರ' ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದಾರೆ.


Click it and Unblock the Notifications













