ಮಳೆ-ಬೆಳೆಗಾಗಿ ಪ್ರಾರ್ಥಿಸಿ ಬಾಗಿನ ಅರ್ಪಿಸಿದ ಶಿವರಾಜ್ ಕುಮಾರ್ ದಂಪತಿ
ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ದಂಪತಿ (ಮೇ 3) ಮಂಗಳವಾರದಂದು ಕಾವೇರಿ, ಕಪಿಲ, ಸ್ಪಟಿಕ ನದಿಗಳು ಸಂಗಮವಾಗಿ ಹರಿದು ಬರುವ ಶಿವನಸಮುದ್ರಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಕಾವೇರಿಗೆ ಬಾಗಿನ ಅರ್ಪಿಸಿದ್ದಾರೆ.
ಬೆಂಗಳೂರಿನಿಂದ ಮಂಗಳವಾರ ಬೆಳಗ್ಗೆ ಕುಟುಂಬ ಸಮೇತ ಶಿವನಸಮುದ್ರಕ್ಕೆ ಆಗಮಿಸಿದ ಶಿವಣ್ಣ ಅವರು ವೆಸ್ಲಿ ಸೇತುವೆ ಬಳಿಯ ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಬಳಿಕ ಸಂಪ್ರದಾಯದಂತೆ ಪೂಜಾ ಕೈಂಕರ್ಯ ಕೈಗೊಂಡು ಬಾಗಿನ ಅರ್ಪಿಸಿದರು. ಆ ನಂತರ ಅಲ್ಲಿರುವ ದೇವಾಲಯಗಳಾದ ಗಣಪತಿ, ಮಧ್ಯರಂಗ, ಸೋಮೇಶ್ವರ, ಮೀನಾಕ್ಷಿ, ಶ್ರೀಚಕ್ರ, ಮಾರಮ್ಮ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
[ದಾಹ ತೀರಿಸಿ ಉತ್ತರ ಕರ್ನಾಟಕ ಜನತೆಯ ಹೃದಯ ಗೆದ್ದ ಯಶ್]

ತದನಂತರ ತಮ್ಮನ್ನು ನೋಡಲು ಆಗಮಿಸಿದ್ದ ನೂರಾರು ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಿವಣ್ಣ ಅವರು "ಎಲ್ಲರಿಗೂ ಒಳ್ಳೆಯದಾಗಲಿ, ಮಳೆ-ಬೆಳೆಯಾಗಿ ಎಲ್ಲಾ ಕಡೆ ಸುಭೀಕ್ಷೆಯಾಗಲಿ ಎಂಬ ಉದ್ದೇಶದಿಂದ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದೇನೆ.[ಬರಪೀಡಿತ ಜನರ ದಾಹ ತೀರಿಸಲು ಮುಂದಾದ 'ಚಕ್ರವ್ಯೂಹ' ಚಿತ್ರತಂಡ]

"ಅನಾರೋಗ್ಯ ಮತ್ತು ಮಗಳ ಮದುವೆ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಇಲ್ಲಿಗೆ ಬರಲಾಗಿರಲಿಲ್ಲ. ಈಗ ಅಮ್ಮನೇ ನಮ್ಮನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೆ" ಎಂದು ನುಡಿದರು.
ದೇವಾಲಯಕ್ಕೆ ಬರುವ ಭಕ್ತರ ನೆರಳಿಗೆ ಒಂದು ಶೆಡ್ ನಿರ್ಮಾಣ ಮಾಡಿಕೊಡುವಂತೆ ಕೇಳಿದ್ದಾರೆ. ಆದಷ್ಟು ಶೀಘ್ರ ಈ ಕೆಲಸ ಮಾಡಿ ಕೊಡುವುದಾಗಿ ಶಿವಣ್ಣ ಹೇಳಿದರು.[ಲೀಲಾವತಿ ಬಗ್ಗೆ ಶಿವರಾಜ್ ಕುಮಾರ್ ಮಾಡಿದ ಕಾಮೆಂಟ್]

ಕಾವೇರಿ, ಕಪಿಲ, ಸ್ಪಟಿಕ ಮೂರೂ ನದಿಗಳು ಸಂಗಮವಾಗಿರುವ ಪವಿತ್ರ ಸ್ಥಳ ಶಿವನಸಮುದ್ರ. ಇಂತಹ ಐತಿಹಾಸಿಕ ಸ್ಥಳದಲ್ಲಿ ಶ್ರೀ ಶಂಕರಾಚಾರ್ಯರು ಶ್ರೀರಂಗನಾಥ (ಮಧ್ಯರಂಗ), ರಂಗನಾಯಕಿ, ಶ್ರೀಚಕ್ರ ಸಹಿತ ಪಾರ್ವತಿ, ಮೀನಾಕ್ಷಿ ದೇವಾಲಯವನ್ನು ಸ್ಥಾಪಿಸಿದ್ದಾರೆ.

ಶಿಂಷಾದ ಆದಿಶಕ್ತಿ ಮಾರಮ್ಮ ದೇವಾಲಯವೂ ಇಲ್ಲಿದೆ. ಈ ಎಲ್ಲ ದೇವಾಲಯಗಳನ್ನು ಒಳಗೊಂಡಿರುವ ಈ ಕ್ಷೇತ್ರ ಅತ್ಯಂತ ಪವಿತ್ರವಾದದ್ದು ಎಂಬ ನಂಬಿಕೆ ಇದೆ. ಇದೇ ಕಾರಣಕ್ಕಾಗಿಯೇ ಈ ಹಿಂದೆ ವರನಟ ಡಾ. ರಾಜ್ ಕುಮಾರ್ ಅವರು ಆಗಾಗ್ಗೆ ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದರು.
ಅಪ್ಪಾಜಿಯ ಹಾದಿಯಲ್ಲಿಯೇ ಸಾಗುತ್ತಿರುವ ಶಿವರಾಜ್ ಕುಮಾರ್ ಅವರೂ ಕೂಡ ಕಳೆದ ಹಲವು ವರ್ಷಗಳಿಂದ ಶ್ರೀರಂಗನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾ ಬರುತ್ತಿದ್ದಾರೆ.[ವಿಭಿನ್ನವಾಗಿ ಮೂಡಿ ಬರಲಿದೆ ಶಿವಣ್ಣನ 'ಶಿವಲಿಂಗ ಭಾಗ 2']

ತಮ್ಮ ನೆಚ್ಚಿನ ನಟ ಶಿವರಾಜ್ ಕುಮಾರ್ ಬರುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳ ದಂಡೇ ದೇವಸ್ಥಾನದಲ್ಲಿ ಹರಿದು ಬಂದಿತ್ತು. ಎಲ್ಲರೂ ಶಿವಣ್ಣ ಅವರ ಜೊತೆ ಸೆಲ್ಫಿ ಗಿಟ್ಟಿಸಿಕೊಳ್ಳುವ ಆತುರದಲ್ಲಿ ಸ್ವಲ್ಪ ಸಮಯ ಜನಜಂಗುಳಿ ಏರ್ಪಟ್ಟಿತ್ತು.
ಕ್ಷೇತ್ರ ಭೇಟಿಯ ಸಂದರ್ಭದಲ್ಲಿ ಶಿವಣ್ಣ ದಂಪತಿಗಳ ಜೊತೆ ನಟ ಕಮ್ ನಿರ್ದೇಶಕ ಚಿ. ಗುರುದತ್, ನಿರ್ಮಾಪಕ ಪ್ರಸಾದ್ ಮತ್ತು ಶಿವರಾಜ್ ಕುಮಾರ್ ಅಭಿಮಾನಿ ಸಂಘದ ಪದಾಧಿಕಾರಿಗಳು ಜೊತೆಗಿದ್ದರು.


Click it and Unblock the Notifications











