'ಛೆ' ಸುದೀಪ್ ಅಭಿಮಾನಿಗಳಿಗೆ ಭಾರಿ ನಿರಾಸೆ ಆಗೋ ಸುದ್ದಿ
ಖ್ಯಾತ ತಮಿಳು ನಿರ್ದೇಶಕ ಕೆ.ಎಸ್ ರವಿಕುಮಾರ್ ನಿರ್ದೇಶನ ಮಾಡುತ್ತಿರುವ ಬಹುನಿರೀಕ್ಷಿತ 'ಕೋಟಿಗೊಬ್ಬ 2' ಚಿತ್ರದ ಕೊನೆಯ ಹಾಡಿನ ಚಿತ್ರೀಕರಣ ನಡೆಸಲು ಎಲ್ಲಾ ತಯಾರಿ ನಡೆಯುತ್ತಿದೆ. ಅದಕ್ಕಾಗಿ ಬೆಂಗಳೂರಿನಲ್ಲಿಯೇ ಅದ್ದೂರಿಯಾಗಿ ಒಂದು ಸೆಟ್ ನಿರ್ಮಾಣವಾಗಿದೆ.
ಈ ಮೊದಲು ಚಿತ್ರದ ಕೊನೆಯ ಹಾಡನ್ನು ಜಪಾನಿನಲ್ಲಿ ಚಿತ್ರೀಕರಣ ನಡೆಸಲಾಗುವುದು ಹಾಗೂ ಜಪಾನ್ ನಲ್ಲಿ ಚಿತ್ರೀಕರಣವಾಗುವ ಪ್ರಪ್ರಥಮ ಕನ್ನಡ ಚಿತ್ರ ಇದಾಗಲಿದೆ ಎಂದು ಎಲ್ಲೆಡೆ ಸುದ್ದಿಯಾಗಿತ್ತು. ಆದರೆ ಸದ್ಯಕ್ಕೆ ಜಪಾನ್ ಪ್ಲ್ಯಾನ್ ಕೈ ಬಿಟ್ಟಿರುವ ಚಿತ್ರತಂಡ ಬೆಂಗಳೂರಿನಲ್ಲೇ ಚಿತ್ರೀಕರಣ ಮುಂದುವರಿಸಲಿದೆ.['ಆಲ್ ಇಂಡಿಯಾ ಕಟೌಟ್' ಪಟ್ಟ ಗಿಟ್ಟಿಸಿಕೊಂಡ ಕಿಚ್ಚ ಸುದೀಪ್]

ಇದೀಗ ಕಿಚ್ಚ ಸುದೀಪ್ ಅವರ ಖಾಸ ದೋಸ್ತ್ ಅರುಣ್ ಸಾಗರ್ ಅವರು ಹಾಡಿನ ಶೂಟಿಂಗ್ ಗಾಗಿ ವಿಶೇಷವಾದ ಬೃಹತ್ ಸೆಟ್ ತಯಾರು ಮಾಡಿದ್ದಾರೆ. ಮೈಸೂರು ರಸ್ತೆಯಲ್ಲಿರುವ ಇನ್ನೊವೇಟಿವ್ ಫಿಲ್ಮ್ ಸಿಟಿಯಲ್ಲಿ ಹಾಡಿನ ಚಿತ್ರೀಕರಣಕ್ಕಾಗಿ ಗ್ರ್ಯಾಂಡ್ ಆಗಿರೋ ಸೆಟ್ ನಿರ್ಮಾಣ ಮಾಡಲಾಗಿದ್ದು, ಮುಂದಿನ ವಾರದಿಂದ ಹಾಡಿನ ಚಿತ್ರೀಕರಣ ನಡೆಯಲಿದೆ.[ಸದ್ಯದಲ್ಲೇ 'ಕೋಟಿಗೊಬ್ಬ 2' ಚಿತ್ರದ ಬಿಡುಗಡೆ ದಿನಾಂಕ ಘೋಷಣೆ]

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ದಕ್ಷಿಣ ಭಾರತದ ಖ್ಯಾತ ನಟಿ ನಿತ್ಯಾ ಮೆನನ್ ಇದೇ ಮೊದಲ ಬಾರಿಗೆ ಒಂದಾಗಿ ಕಾಣಿಸಿಕೊಂಡಿರುವ 'ಕೋಟಿಗೊಬ್ಬ 2' ಚಿತ್ರ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗುತ್ತಿದೆ. ಚಿತ್ರಕ್ಕೆ ನಿರ್ಮಾಪಕ ಸೂರಪ್ಪ ಬಾಬು ಬಂಡವಾಳ ಹೂಡಿದ್ದಾರೆ.

ನಿರ್ದೇಶಕ ಕೆ.ಎಸ್ ರವಿಕುಮಾರ್ ಅವರ ದೊಡ್ಡ ಮಗಳು ಮಲ್ಲಿಕಾ ಅವರ ವಿವಾಹ ಮಹೋತ್ಸವ ಸೋಮವಾರದಂದು ನೆರವೇರಿದ್ದರಿಂದ ಸದ್ಯಕ್ಕೆ 'ಕೋಟಿಗೊಬ್ಬ 2' ಚಿತ್ರದ ಶೂಟಿಂಗ್ ಗೆ ಬ್ರೇಕ್ ಬಿದ್ದಿದೆ. ಮದುವೆ ಸಂಭ್ರಮದಲ್ಲಿ ಕಿಚ್ಚ ಸುದೀಪ್ ಕೂಡ ಪಾಲ್ಗೊಂಡಿದ್ದರು. ಮುಂದಿನ ವಾರದಲ್ಲಿ ನಿರ್ದೇಶಕರು ಶೂಟಿಂಗ್ ಸೆಟ್ ಗೆ ಹಾಜರಾಗಲಿದ್ದು, ಹಾಡಿನ ಚಿತ್ರೀಕರಣ ನಡೆಯಲಿದೆ.[ಚಿತ್ರಗಳು: 'ಕೋಟಿಗೊಬ್ಬ 2' ನಿರ್ದೇಶಕರ ಮಗಳ ಮದುವೆಯಲ್ಲಿ ಸುದೀಪ್ ಭಾಗಿ]

ಅಂತೂ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನನ್ನು ಜಪಾನ್ ನಲ್ಲಿ ನೋಡಬೇಕೆಂದಿದ್ದ ಬಹು ದೊಡ್ಡ ಆಸೆಗೆ ಬಕೆಟ್ ತಣ್ಣೀರು ಎರಚಿದಂತಾಗಿದೆ.


Click it and Unblock the Notifications











