ರಾಜಕೀಯ ಎಂಟ್ರಿ ಬಗ್ಗೆ ಮೌನ ಮುರಿದ ಉಪೇಂದ್ರ
ಪತ್ರಿಕೆಯೊಂದರೊಂದರ ಓದುಗರ ಪ್ರಶ್ನೆಗಳಿಗೆ ಉತ್ತರಿಸಿರುವ ಅವರು ತಾವು ರಾಜಕೀಯ ಸೇರಿ ಜನಸೇವೆ ಮಾಡಲು ಮುಂದಾಗಿರುವುದಾಗಿ ತಿಳಿಸಿದ್ದಾರೆ. ಅವರು ಸೇರಲಿರುವ ರಾಜಕೀಯ ಪಕ್ಷ ಯಾವುದು ಎಂಬುದು ಮಾತ್ರ ಸಸ್ಪೆನ್ಸ್ ಆಗಿಟ್ಟಿದ್ದಾರೆ.
ತಾವು ಬಿಜೆಪಿ ಪಕ್ಷ ಸೇರಿ ಚಾಮರಾಜಪೇಟೆಯಿಂದ ಸ್ಪರ್ಧಿಸುತ್ತೀರಂತೆ ಹೌದೆ ಎಂಬ ಪ್ರಶ್ನೆಗೆ, ಸತ್ಯವಾಗಿಯೂ ಸುಳ್ಳು ಎಂದು ಉತ್ತರಿಸಿದ್ದಾರೆ. ಈ ಹಿಂದೊಮ್ಮೆ ಉಪ್ಪಿ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡುತ್ತಾ, ಎಲ್ಲಾ ದೈವೇಚ್ಛೆ. ಅವನ ಆಜ್ಞೆ ಇಲ್ಲದೆ ಹುಲ್ಲು ಕಡ್ಡಿಯೂ ಅಲುಗಾಡಲ್ಲ. ತಾನು ರಾಜಕೀಯಕ್ಕೆ ಬರಲೇ ಬೇಕು ಎಂಬುದು ಅವನ ಇಚ್ಛೆಯಾಗಿದ್ದರೆ. ಆ ಜವಾಬ್ದಾರಿಯನ್ನು ನಾನು ಸ್ವೀಕರಿಸಲು ಸಿದ್ಧ ಎಂದು ವೇದಾಂತಿಯಂತೆ ಹೇಳಿಕೊಂಡಿದ್ದರು.
ಇದುವರೆಗೂ ಯಾವುದೇ ರಾಜಕೀಯ ಪಕ್ಷ ತಮ್ಮನ್ನು ಆಹ್ವಾನಿಸಿಲ್ಲ. 'ಸೂಪರ್' ಚಿತ್ರದಲ್ಲಿ ತೋರಿಸಿರುವಂತೆ 2030ರ ವಿಷನ್ ಖಂಡಿತ ಸಾಧ್ಯವಾಗುತ್ತದೆ. ನಾನು ಸಿನಿಮಾ ರಂಗಕ್ಕೆ ಅಡಿಯಿಟ್ಟಿದ್ದೇ ರಾಜಕೀಯ ಕ್ಷೇತ್ರ ಪ್ರವೇಶಿಸಲು. ಅಧಿಕಾರವಿಲ್ಲದೆ ಜನಸೇವೆ ಮಾಡಲು ಸಾಧ್ಯವಿಲ್ಲ. ಹಾಗಂತ ಯಾವುದೇ ಅಧಿಕಾರವಿಲ್ಲದೆ ಜನಸೇವೆ ಮಾಡುವವರು ಇಲ್ಲ ಎಂದಲ್ಲ. ಅಧಿಕಾರವಿದ್ದರೆ ಇನ್ನೂ ಚೆನ್ನಾಗಿ ಕೆಲಸ ಮಾಡಬಹುದು ಎಂಬುದು ನನ್ನ ವಾದ ಎಂದಿದ್ದರು ಉಪ್ಪಿ.
ಉಪ್ಪಿ ಅವರ ರಾಜಕೀಯ ಕನಸು ಯಾವಾಗ ನನಸಾಗುತ್ತದೋ ಸದ್ಯಕ್ಕೆ ಗೊತ್ತಿಲ್ಲ. ಅವರು ಅಷ್ಟೇ ಈ ಬಗ್ಗೆ ನಿಖರವಾದ ಉತ್ತರ ಕೊಡುತ್ತಿಲ್ಲ. ಸರಿ ಕಾದುನೋಡೋಣ ಅವರ ರಾಜಕೀಯ ಆಗಮನ ಯಾವಾಗ ಎಂದು. ಏತನ್ಮಧ್ಯೆ ಉಪ್ಪಿ ಅಭಿನಯಿಸುತ್ತಿರುವ ಟೋಪಿವಾಲ ಚಿತ್ರ 40 ದಿನಗಳ ಚಿತ್ರೀಕರಣ ಮುಗಿಸಿದೆ.
ಬೆಂಗಳೂರಿನಲ್ಲಿ ಚಿತ್ರೀಕರಣ ಮುಗಿಸಿರುವ ಟೋಪಿವಾಲ ಚಿತ್ರ ಮಂಗಳೂರು, ಪಾಂಡಿಚೆರಿ ಹಾಗೂ ಸ್ವಿಟ್ಜರ್ ಲ್ಯಾಂಡ್ ಗೆ ತೆರಳಲಿದೆ. ಉಪೇಂದ್ರ ಅವರೇ ಕತೆ ಚಿತ್ರಕತೆ ಬರೆದಿದ್ದು ಶ್ರೀನಿ ಅವರ ಸಂಭಾಷಣೆ ಹಾಗೂ ನಿರ್ದೇಶನ ಚಿತ್ರಕ್ಕಿದೆ. ವಿ ಹರಿಕೃಷ್ಣ ಸಂಗೀತವಿರುವ ಚಿತ್ರದ ನಾಯಕಿ ಭಾವನಾ.


Click it and Unblock the Notifications
