ಕಾಸಿಲ್ಲದೆ ರೋಗ ವಾಸಿ ಮಾಡಲಿದ್ದಾರೆ ರವಿಚಂದ್ರನ್ ಸಾರ್.!
ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನ ಬಿಗ್ ಸ್ಕ್ರೀನ್ ನಲ್ಲಿ ನೋಡಿದ್ರಿ. ಇತ್ತೀಚೆಗೆ ರಿಯಾಲಿಟಿ ಶೋಗಳ ಮೂಲಕ ಕಿರುತೆರೆಯಲ್ಲಿ ಕಣ್ತುಂಬಿಕೊಂಡಿದ್ದೀರಾ. ಇದೀಗ ಜಾಹೀರಾತಿನಲ್ಲೂ ನಿಮ್ಮೆಲ್ಲರ ಪ್ರೀತಿಯ ರವಿಮಾಮ ಮಿಂಚಲು ಹೊರಟಿದ್ದಾರೆ. ಅದು ಸಾಮಾಜಿಕ ಕಳಕಳಿಯ ಸಲುವಾಗಿ.
ರಾಜ್ಯದ ಮೂಲೆ ಮೂಲೆಗಳಲ್ಲಿ ಜನರ ನಿದ್ದೆ ಕೆಡಿಸಿರುವ ಚಿಕೂನ್ ಗುನ್ಯ ಹಾಗೂ ಡೆಂಗ್ಯೂ ವಿರುದ್ದ ಸಮರ ಸಾರಲು ಕ್ರೇಜಿಸ್ಟಾರ್ ಸಜ್ಜಾಗಿದ್ದಾರೆ. ಅಂದ್ರೆ ಈ ಬಗ್ಗೆ ಅರಿವು ನೀಡಲಿರುವ ಜಾಹಿರಾತಿನಲ್ಲಿ ರವಿಚಂದ್ರನ್ ಕಾಣಿಸಿಕೊಳ್ಳಲಿದ್ದಾರೆ. ಬಿಬಿಎಂಪಿ ಹಮ್ಮಿಕೊಂಡಿರೋ ಆರೋಗ್ಯ ಸುರಕ್ಷಾ ಯೋಜನೆಯ ಭಾಗವಾಗಿ ಈ ಜಾಹಿರಾತು ಸಿದ್ಧವಾಗ್ತಿದೆ. ಇದ್ರಲ್ಲಿ 'ಅಂಜದ ಗಂಡು' ಜನರಿಗೆ ಜಾಗೃತಿ ಮೂಡಿಸಲಿದ್ದಾರೆ.

ಅಸಲಿಗೆ ಚಿಕೂನ್ ಗುನ್ಯ ಹಾಗೂ ಡೆಂಗ್ಯೂ ವಿರುದ್ದದ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಪ್ರಚಾರ ರಾಯಭಾರಿಯನ್ನಾಗಿ ರವಿಚಂದ್ರನ್ ರನ್ನ ಬಿಬಿಎಂಪಿ ಆಯ್ಕೆ ಮಾಡಿಕೊಂಡಿದೆ. ಈ ಸಲುವಾಗಿ ನಿನ್ನೆ ಅವರ ನಿವಾಸಕ್ಕೆ ತೆರಳಿದ್ದ ಬಿಬಿಎಂಪಿ ಆಯುಕ್ತ ಜಿ. ಕುಮಾರನಾಯಕ್ ಮಾತುಕತೆ ನಡೆಸಿದ್ರು.
ಇನ್ನೊಂದು ಕಡೆ ಸಮಾಜಸೇವೆ ಮಾಡೋಕೆ ಸರಿಯಾದ ವೇದಿಕೆ ಹುಡುಕುತ್ತಿದ್ದ ವೀರಸ್ವಾಮಿ ಪುತ್ರನಿಗೆ ಇದೊಂತರಾ ಸದಾವಕಾಶ ಕೂಡಿಬಂದಂತಾಯ್ತು. ಹೀಗಾಗಿ ಕೂಡಲೇ ಪ್ರಾಜೆಕ್ಟ್ ಒಪ್ಪಿಕೊಂಡ ರವಿಮಾಮ ಸಂಭಾವನೆ ಇಲ್ಲದೆ ಪ್ರಚಾರ ಕಾರ್ಯದೊಳಗೆ ತಮ್ಮನ್ನ ತಾವು ತೊಡಗಿಸಿಕೊಳ್ಳುತ್ತಿದ್ದಾರೆ.

ಚಿತ್ರರಂಗಕ್ಕೆ ಕಾಲಿಟ್ಟು ದಶಕಗಳೇ ಕಳೆದು, ಉತ್ತುಂಗದ ಸ್ಥಿತಿಯಲ್ಲಿದ್ದಾಗಲೂ ಜಾಹಿರಾತುಗಳ ಕಡೆ ಗಮನ ಕೊಡದ ರವಿಚಂದ್ರನ್, ಈಗ ಸಮಾಜಸೇವೆ ಅವಕಾಶ ಹಾಗೂ ಸಾಮಾಜಿಕ ಕಳಕಳಿಯ ಕಾರಣ ಮೊಟ್ಟಮೊದಲ ಬಾರಿಗೆ ಜಾಹಿರಾತಿನಲ್ಲಿ ಮುಖದರ್ಶನ ಮಾಡಿಸುತ್ತಿದ್ದಾರೆ.


Click it and Unblock the Notifications











