ಸೂರಿ 'ಟಗರಿ'ಗೆ ಟಕ್ಕರ್ ನೀಡಲು ಬಂದ 'ಸಿಂಹ'!
'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದಲ್ಲಿ ನಟ ವಸಿಷ್ಠ ಸಿಂಹ ಅವರು ಮಾಡಿದ್ದಿಷ್ಟೇ. ವಿಲನ್ ಗಿರಿ ಬಿಟ್ಟು, ಇನ್ನುಮುಂದೆ ಕೆಟ್ಟ ಕೆಲಸ ಮಾಡೋದಿಲ್ಲ ಅಂತ್ಹೇಳಿ ಶಪಥ ಮಾಡಿ ತಾನೇ ಪ್ರಾಣ ಬಿಡೋದು. ಇದೊಂದು ನಟನೆಗೆ ಅವರಿಗೆ ಸಾವಿರಾರು ಅಭಿಮಾನಿಗಳು ಹುಟ್ಟಿಕೊಂಡರು.
ಇತ್ತೀಚಿನ ದಿನದಲ್ಲಿ, ಸಿನಿಮಾಗಳಲ್ಲಿ ಹೀರೋ ಪಾತ್ರ ಮಾಡಿದವರಿಗಿಂತ ಹೆಚ್ಚಾಗಿ, ವಿಲನ್ ರೋಲ್ ಮಾಡಿದವರ ಮೇಲೆ ಅಭಿಮಾನಿಗಳ ಒಲವು ಜಾಸ್ತಿ. ಅದೇ ರೀತಿ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ಮೂಲಕ ಭಾರಿ ಖ್ಯಾತಿ ಗಳಿಸಿದ ನಟ ವಸಿಷ್ಠ ಅವರೆಂದರೆ ಎಲ್ಲರಿಗೂ ಅಚ್ಚುಮೆಚ್ಚು.[ಅವಕಾಶಗಳ ಬೆನ್ನೇರಿ ಸವಾರಿ ಆರಂಭಿಸಿದ ಕ್ಯೂಟ್ ವಿಲನ್ ವಸಿಷ್ಟ]

ಈ ಮೊದಲು ಹಲವಾರು ಸಿನಿಮಾ ಮಾಡಿದರೂ ಕೂಡ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ಮೂಲಕ ಗಾಂಧಿನಗರದಲ್ಲಿ ಗುರುತಿಸಿಕೊಂಡು, ಹೆಸರು ಮಾಡಿದ ವಸಿಷ್ಠ ಅವರಿಗೆ ಇದೀಗ ಕನ್ನಡ ಚಿತ್ರರಂಗದಿಂದ ಅವಕಾಶಗಳು ಮೇಲಿಂದ ಮೇಲೆ ಬರುತ್ತಿದೆ.
ಮೊನ್ನೆ-ಮೊನ್ನೆ ಶಿವರಾಜ್ ಕುಮಾರ್ ಮತ್ತು ಶ್ರೀಮುರಳಿ ಅವರ ಇನ್ನೂ ಹೆಸರಿಡದ ಚಿತ್ರದಲ್ಲಿ ವಸಿಷ್ಠ ಅವರಿಗೆ ಒಂದೊಳ್ಳೆ ಪಾತ್ರ ಸಿಕ್ಕಿದೆ ಅಂತ, ಖುದ್ದು ವಸಿಷ್ಠ ಅವರೇ ಫಿಲ್ಮಿಬೀಟ್ ಕನ್ನಡಕ್ಕೆ ಮಾಹಿತಿ ನೀಡಿದ್ದರು.

ಇದೀಗ ಮತ್ತೊಂದು ಖಾಸ್ ಖಬರ್ ಏನಪ್ಪಾ ಅಂದ್ರೆ, ಮತ್ತೆ ವಸಿಷ್ಠ ಅವರು ಶಿವಣ್ಣ ಅವರ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಬಹು ಬೇಡಿಕೆಯ ಖಳನಟನಾಗಿ ಹೊರಹೊಮ್ಮಿರುವ ವಸಿಷ್ಠ ಎನ್.ಸಿಂಹ ಅವರಿಗೆ 'ಟಗರು' ಚಿತ್ರದಲ್ಲಿ ವಿಲನ್ ಗಿರಿ ತೋರಲು ದುನಿಯಾ ಸೂರಿ ಅವರು ಬುಲಾವ್ ಕಳುಹಿಸಿದ್ದಾರೆ.
ಇಷ್ಟು ದಿನ ಹೀರೋ ಆಗಿದ್ದ ನಟ ಧನಂಜಯ್ ಅವರನ್ನು, ಮೊಟ್ಟ ಮೊದಲ ಬಾರಿಗೆ 'ಟಗರು' ಚಿತ್ರದಲ್ಲಿ ಖಳನಟನಾಗಿ ತೋರಿಸುವ ಹೊಸ ಸಾಹಸಕ್ಕೆ ಕೈ ಹಾಕಿರುವ ದುನಿಯಾ ಸೂರಿ ಅವರು ಕ್ಯೂಟ್ ವಿಲನ್ ವಸಿಷ್ಠ ಅವರಿಗೂ ಅವಕಾಶ ನೀಡಿದ್ದಾರೆ.[ಎಕ್ಸ್ ಕ್ಲ್ಯೂಸಿವ್: ಗುಮ್ಮೋ 'ಟಗರಿಗೆ' ಎದುರಾಗಿ ನಿಂತ ಧನಂಜಯ್]

ಒಟ್ನಲ್ಲಿ 'ಗೋಧಿ ಬಣ್ಣ' ತಂದು ಕೊಟ್ಟ ಯಶಸ್ಸಿನಿಂದ ವಸಿಷ್ಠ ಅವರಿಗೆ ಕೂರಲು ಪುರುಸೊತ್ತಿಲ್ಲದಂತಾಗಿದ್ದು, ಕೈ ತುಂಬಾ ಪ್ರಾಜೆಕ್ಟ್ ಹಿಡಿದು ಧಾವಂತದಿಂದ ಗಾಂಧಿನಗರದಲ್ಲಿ ಓಡಾಡುತ್ತಿದ್ದಾರೆ.

ಸದ್ಯಕ್ಕೆ 'ದಯವಿಟ್ಟು ಗಮನಿಸಿ' ಮತ್ತು 'ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮ' ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, 'ಗಂಡು ಎಂದರೆ ಗಂಡು' ರಿಲೀಸ್ ಗೆ ಕಾಯುತ್ತಿದ್ದಾರೆ. ಈಗಾಗಲೇ ಒಪ್ಪಿಕೊಂಡ ಸಿನಿಮಾಗಳು ಕಂಪ್ಲೀಟ್ ಆದ ಕೂಡಲೇ ದುನಿಯಾ ಸೂರಿ ಅವರ ಗುಮ್ಮೋ 'ಟಗರಿ'ಗೆ ಎದೆಯೊಡ್ಡಲಿದ್ದಾರೆ.['ಟಗರು' ಚಿತ್ರದಲ್ಲಿ ಶಿವಣ್ಣನಿಗೆ ಜೋಡಿಯಾಗಿ ಮಾನ್ವಿತಾ]

ದುನಿಯಾ ಸೂರಿ ನಿರ್ದೇಶನದ, ಶಿವರಾಜ್ ಕುಮಾರ್ ಮತ್ತು 'ಕೆಂಡಸಂಪಿಗೆ' ಬೆಡಗಿ ಮಾನ್ವಿತ ಹರೀಶ್ ಒಂದಾಗಿ ಕಾಣಿಸಿಕೊಳ್ಳುತ್ತಿರುವ, 'ಟಗರು-ಮೈಯೆಲ್ಲಾ ಪೊಗರು' ಚಿತ್ರದ ಶೂಟಿಂಗ್ ಈ ತಿಂಗಳಾಂತ್ಯದಲ್ಲಿ ಆರಂಭವಾಗಲಿದೆ.


Click it and Unblock the Notifications











