''ನಾನು ಮೈಸೂರಿನ ಹುಡ್ಗ'' ಎಂದ ಯಶ್: ಯುವ ದಸರೆಗೆ ರಾಕಿಂಗ್ ತೆರೆ
Recommended Video

ಮೈಸೂರು, ಅಕ್ಟೋಬರ್ 18 : ಚಂದನವನದ ತಾರೆಯರ ಸೊಬಗಿನ ನೃತ್ಯ. ನೇಹಾ ಕಕ್ಕರ್ ಇಂಪಾದ ಗಾಯನದಲ್ಲಿ ಯುವ ದಸರೆಯ ಸಂಭ್ರಮ ಮೇರೆ ಮೀರಿತ್ತು.
'ರಾಜಾಹುಲಿ' ಎಂದೇ ಖ್ಯಾತಿಯಾಗಿರುವ ರಾಕಿಂಗ್ ಸ್ಟಾರ್ ಯಶ್ ಯುವ ದಸರೆಗೆ ರಂಗು ತುಂಬಿದರು. ವೇದಿಕೆ ಮೇಲೆ ಬಂದ ನಟ ಯಶ್ ತಮ್ಮ ಮೈಸೂರಿನ ದಿನಗಳನ್ನ ಮೆಲುಕು ಹಾಕಿದರು.
''ಒಂದ್ಕಾಲದಲ್ಲಿ ಯುವ ದಸರಾ ಪಾಸ್ ಬೇಕು ಎಂದು ಕೇಳುತ್ತಿದ್ದೆ. ಇದೀಗ ಅದೇ ಕಾರ್ಯಕ್ರಮದ ವೇದಿಕೆ ಮೇಲೆ ನಿಂತಿದ್ದೇನೆ. ಇದಕ್ಕೆ ನಿಮ್ಮ ಪ್ರೋತ್ಸಾಹವೇ ಕಾರಣ'' ಎಂದರು ನಟ ಯಶ್.
ಮಹಾರಾಜ ಕಾಲೇಜಿನ ಮೈದಾನದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಯುವಕ/ಯುವತಿಯರು ಸಂಭ್ರಮವೆಲ್ಲ ಇಂದೇ ಬರಿದು ಮಾಡುವಂತೆ ಕುಣಿದು ಕುಪ್ಪಳಿಸಿದರು. ಯುವ ದಸರೆಯ ಕೊನೇ ದಿನ ನರ್ತಿಸಿ, ಹಾಡಿದ ಕಲಾವಿದರನ್ನು ಸಭಿಕರು ಮನಸಾರೆ ಪ್ರೋತ್ಸಾಹಿಸಿದರು. ಮುಂದೆ ಓದಿರಿ...

ಅತಿಥಿಯಾಗಿ ಬಂದ ನಟ ಯಶ್
ಶೇರ್ವಾನಿ ತೊಟ್ಟು ವಿಶಿಷ್ಟವಾಗಿ ಕಂಗೊಳಿಸುತ್ತಿದ್ದ ರಾಕಿಂಗ್ ಸ್ಟಾರ್ ಯಶ್ 'ಅಣ್ತಮ್ಮಾ' ಎನ್ನುತ್ತ ವೇದಿಕೆ ಏರುತ್ತಿದ್ದಂತೆಯೇ ಇಡೀ ಸಭಾಂಗಣದಲ್ಲಿ ಒಂದು ರೀತಿಯ ಸಂಚಲನ ಉಂಟಾಯಿತು. ಸಂಭ್ರಮದ ಜೈಕಾರ ಮಾರ್ದನಿಸಿತು. ಮೆಚ್ಚಿನ ನಟನನ್ನು ಕಂಡ ಯುವ ಸಮೂಹ ಹರ್ಷ ವ್ಯಕ್ತಪಡಿಸಿತು.

ಮೈಸೂರಿನ ಹುಡುಗ
''ಕುಕ್ಕರಹಳ್ಳಿ ಕೆರೆಯಲ್ಲಿ ಓಡಾಡುತ್ತ, ಪಡುವಾರಹಳ್ಳಿಯಲ್ಲಿ ಬೆಳೆದ ನಾನು ನಿಮ್ಮ ಹುಡ್ಗ. ಮೈಸೂರಿನವನು'' ಎಂದು ಯಶ್ ಹೇಳುತ್ತಿದ್ದಂತೆಯೇ ಸಂಭ್ರಮ ಮುಗಿಲು ಮುಟ್ಟಿತು.

ಅಂದು ಪಾಸ್ ಬೇಕು ಎನ್ನುತ್ತಿದ್ದೆ
'ರಾಜಾಹುಲಿ', 'ರಾಮಾಚಾರಿ' ಸಿನಿಮಾಗಳ ಕೆಲವು ಡೈಲಾಗ್ ಹೇಳಿ ಹಾಡೊಂದನ್ನು ಹಾಡಿ ನೆರೆದಿದ್ದ ಜನಸ್ತೋಮ ಸಂಭ್ರಮಿಸುವಂತೆ ಮಾಡಿದರು. ''ನಾನು ಹುಡುಗನಾಗಿದ್ದಾಗ ಇದೇ ಯುವ ದಸರಾದ ಪಾಸ್ ಬೇಕು ಎಂದು ಕೇಳಿಕೊಳ್ಳುತ್ತಿದ್ದೆ. ಆದರೆ ಇಂದು ಇದೇ ವೇದಿಕೆಯ ಮೇಲೆ ನಿಂತಿದ್ದೇನೆ. ಇದಕ್ಕೆಲ್ಲ ನಿಮ್ಮ ಪ್ರೀತಿ, ಪ್ರೋತ್ಸಾಹವೇ ಕಾರಣ. ನನಗೆ ಮೈಸೂರಿಗೆ ಬರುವುದೆಂದರೆ ತುಂಬಾ ಖುಷಿ. ಸಾಕಷ್ಟು ಊರು, ದೇಶ ನೋಡಿದ್ದೇನೆ, ಆದರೆ ಮೈಸೂರಂತಹ ಊರು ಎಲ್ಲಿಯೂ ಇಲ್ಲ. ಮೈಸೂರಿಗೆ ಬಂದ್ರೆ ನನ್ನ ಹಳೆಯ ನೆನಪುಗಳು ಕಣ್ಣ ಮುಂದೆ ಬರುತ್ತವೆ'' ಎಂದು ನಟ ಯಶ್ ತಮ್ಮ ಸಂತೋಷ ಹಂಚಿಕೊಂಡರು.

ನೇಹಾ ಕಕ್ಕರ್ ಗಾಯನ
ಖ್ಯಾತ ಹಿನ್ನೆಲೆ ಗಾಯಕಿ ನೇಹಾ ಕಕ್ಕರ್ ಮೋಡಿ ಮಾಡಿದ ಗಾಯನವೂ ಯುವ ದಸರೆಗೆ ಅದ್ಧೂರಿಯಾಗಿ ತೆರೆ ಎಳೆಯಿತು. 'ಮಿಲೇ ಹೋ ತುಮ್ ಹಮ್ ಸೇ..', 'ಬಡೇ ನಶೀಬೋ ಸೇ..' ಸೇರಿದಂತೆ ಹಿಂದಿ ಹಾಡುಗಳನ್ನ ಕೇಳಿ ಯುವಕರು ಖುಷಿಪಟ್ಟರು.

ರಚಿತಾ ರಾಮ್ ಡ್ಯಾನ್ಸ್
ಗುಳಿ ಕೆನ್ನೆಯ ಚೆಲುವೆ ನಟಿ ರಚಿತಾ ರಾಮ್ ನರ್ತಿಸಿ ನೆರೆದಿದ್ದ ಯುವಕರನ್ನು ಸಂಭ್ರಮದಲ್ಲಿ ತೇಲುವಂತೆ ಮಾಡಿದರು. ನಟಿಯರಾದ ಮೇಘನಾ ಗಾಂವ್ಕರ್, ಅನುಪಮ ಗೌಡ, ಜಯಶ್ರೀ, ಕಿರುತೆರೆಯ ವೈಷ್ಣವಿ ಕನ್ನಡ ಹಾಡುಗಳಿಗೆ ನೃತ್ಯ ಮಾಡಿ ಯುವಕರ ಮನಸ್ಸು ಗೆದ್ದರು. ನೃತ್ಯ ಸಂಯೋಜಕ ಎ.ಹರ್ಷ ಮತ್ತು ತಂಡದವರು ನೃತ್ಯ ಮಾಡಿದರು.

ವೆಸ್ಟರ್ನ್ ಮ್ಯೂಸಿಕ್
ಢಮರುಗ ಬಿಡ್ಸ್ ಸಂಗೀತಗಾರರು ಪಾಶ್ಚಿಮಾತ್ಯ ಸಂಗೀತಕ್ಕೆ ಭಾರತೀಯ ಸಂಗೀತದ ರಿದಂ ಸೇರಿಸಿ ಡ್ರಮ್, ತಮಟೆ, ನಗಾರಿಯ ಮೂಲಕ ಹೊಸ ನಾದವನ್ನು ಹೊಮ್ಮಿಸಿ ಚಪ್ಪಾಳೆ ಗಿಟ್ಟಿಸಿದರು. ಅನೀಶ್ ಮತ್ತು ಹರೀಶ್ ಹಾಸ್ಯ ಕಾರಂಜಿ ಚಿಮ್ಮಿಸಿದರು. ಅನುಪಮಾ ವಿಶಿಷ್ಟವಾಗಿ ನಿರೂಪಿಸಿದರು.

ನೂಕುನುಗ್ಗಲು
ನಟ ಯಶ್ ಹಾಗೂ ಗಾಯಕಿ ನೇಹಾ ಕಕ್ಕರ್ ಅವರ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರಿಂದ ನೂಕು ನುಗ್ಗಲು ಉಂಟಾಗಿ ಜನ ತೊಂದರೆ ಅನುಭವಿಸಿದರು. ನಿರೀಕ್ಷೆಗಿಂತ ಹೆಚ್ಚಿನ ಜನ ಸೇರಿದ್ದರಿಂದ ವಿಐಪಿ, ವಿವಿಐಪಿ ಸ್ಥಳಗಳು ಸಂಪೂರ್ಣ ಭರ್ತಿಯಾಗಿದ್ದರಿಂದ ಅನೇಕರು ಸ್ಥಳಕ್ಕಾಗಿ ಆಕ್ಷೇಪ ವ್ಯಕ್ತಪಡಿಸಿದರು. ನಿಂತೇ ಕಾರ್ಯಕ್ರಮ ವೀಕ್ಷಿಸುತ್ತ ಖುಷಿಪಟ್ಟರು.


Click it and Unblock the Notifications











