'ಅಯ್ಯಯ್ಯೋ... ಅನ್ಯಾಯ' ಎಂದು ಡಬ್ಬಿಂಗ್ ವಿರುದ್ಧ ಕೂಗಿದ ಕನ್ನಡ ತಾರೆಯರು
ಕನ್ನಡ ಚಿತ್ರರಂಗದಲ್ಲಿ ಮತ್ತೆ 'ಡಬ್ಬಿಂಗ್' ಭೂತ ಬುಸುಗುಟ್ಟಿದೆ. ಮಾರ್ಚ್ 3 ರಂದು ಕನ್ನಡಕ್ಕೆ ಡಬ್ ಆಗಿರುವ ತಮಿಳು ಸಿನಿಮಾ 'ಸತ್ಯದೇವ್ ಐ.ಪಿ.ಎಸ್' ಬಿಡುಗಡೆ ಆಗಲಿದೆ. ಇದನ್ನ ವಿರೋಧಿಸಿ ಕನ್ನಡದ ಸ್ಟಾರ್ ನಟರು ಬೀದಿಗಿಳಿದು ಪ್ರತಿಭಟಿಸಲು ನಿರ್ಧರಿಸಿದ್ದಾರೆ.
ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ನಟರು ಡಬ್ಬಿಂಗ್ ವಿರುದ್ಧ ದನಿ ಎತ್ತಿದ್ದಾರೆ. ಡಬ್ಬಿಂಗ್ ನಿಂದಾಗಿ ಕಲಾವಿದರು ಹಾಗೂ ತಂತ್ರಜ್ಞರಿಗೆ ಅನ್ಯಾಯ ಆಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ....

ಡಬ್ಬಿಂಗ್ ಬಗ್ಗೆ ಸಾಧು ಕೋಕಿಲ ಹೇಳುವುದೇನು.?
''ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ತುಂಬಾ ಅನ್ಯಾಯ ನಡೆಯುತ್ತಿದೆ. ಡಬ್ಬಿಂಗ್ ಸಿನಿಮಾಗಳನ್ನ ಕನ್ನಡಕ್ಕೆ ತಂದು, ನಮ್ಮಂತಹ ಸಾವಿರಾರು ತಂತ್ರಜ್ಞರು, ಕಲಾವಿದರನ್ನು ಹಾಳು ಮಾಡುತ್ತಿದ್ದಾರೆ. ಚೆನ್ನೈನಲ್ಲಿದ್ದ ನಮ್ಮ ಕನ್ನಡ ಇಂಡಸ್ಟ್ರಿಯನ್ನ ಕರ್ನಾಟಕಕ್ಕೆ ತಂದವರು ಡಾ.ರಾಜ್, ಡಾ.ವಿಷ್ಣು, ಶಂಕರ್ ನಾಗ್. ಹಾಗೆ ಎಲ್ಲರೂ ಸೇರಿ ಬೆಳೆಸಿದ ಕನ್ನಡ ಚಿತ್ರರಂಗವನ್ನ ಇವತ್ತು ದುಡ್ಡು ಮಾಡೋಕೆ ಕೆಲವರು ಹಾಳು ಮಾಡುತ್ತಿದ್ದಾರೆ. ದೊಡ್ಡದೊಡ್ಡವರು ಕಟ್ಟಿದ ಈ ಮನೆಯನ್ನ ಕೆಲವರು ಒಡೆಯುತ್ತಿದ್ದಾರೆ. ಡಬ್ಬಿಂಗ್ ವಿರುದ್ಧ ಕನ್ನಡಿಗರು ಪ್ರತಿಭಟಿಸಬೇಕು. ಅದಕ್ಕೆ ಎಲ್ಲರೂ ಕೈ ಜೋಡಿಸಬೇಕು ಅಂತ ಕೇಳಿಕೊಳ್ಳುತ್ತೇನೆ'' - ಸಾಧು ಕೋಕಿಲ, ನಟ, ಸಂಗೀತ ನಿರ್ದೇಶಕ

ಡಬ್ಬಿಂಗ್ ಕುರಿತು ನಟ ಶರಣ್ ಹೇಳಿದಿಷ್ಟು...
''ತುಂಬ ದೊಡ್ಡ ಮಹಾನೀಯರು ಕಟ್ಟಿ ಬೆಳಸಿದಂತಹ ಉದ್ಯಮ ಕನ್ನಡ ಚಿತ್ರೋದ್ಯಮ. ಅವರ ಬೆವರಿನ ಪ್ರತಿಫಲ ಇವತ್ತು ನಮ್ಮಂತಹ ಎಷ್ಟೋ ಜನರಿಗೆ ಇಲ್ಲಿ ಜೀವನ ಕಂಡುಕೊಳ್ಳಲು ಸಾಧ್ಯ ಆಗಿದೆ. ಇಂತಹ ಉದ್ಯಮ ಇವತ್ತು ಡಬ್ಬಿಂಗ್ ಪ್ರಭಾವಕ್ಕೆ ಒಳಗಾಗಬಾರದು. ಯಾಕಂದ್ರೆ, ಇದು ಸಾವಿರಾರು ಜನರ ಬದುಕಿನ ಪ್ರಶ್ನೆ. ಇದನ್ನೇ ನಂಬಿಕೊಂಡಿರುವ ನೂರಾರು ಸಂಸಾರಗಳು ಇಲ್ಲಿ ಇರುವುದರಿಂದ, ಡಬ್ಬಿಂಗ್ ವಿರೋಧಿಸಬೇಕು. ಇವತ್ತು ಈ ಹೋರಾಟ ಅನಿವಾರ್ಯ. ನಿಮ್ಮಲ್ಲರ ಸಹಕಾರ ಈ ಹೋರಾಟಕ್ಕೆ ಬೇಕು'' - ಶರಣ್, ನಟ

'ಡಬ್ಬಿಂಗ್ ಒಂದು ವೈರಸ್' ಎಂದ ಅಕುಲ್ ಬಾಲಾಜಿ
''ಕನ್ನಡ ಚಿತ್ರರಂಗದ ಉಳಿವಿಗಾಗಿ ನಾನು ಕೂಡ ಹೋರಾಡುತ್ತಿದ್ದೇನೆ. ಕಾರಣ ಇಷ್ಟೇ.. ಡಬ್ಬಿಂಗ್. ನಾವು ಯಾರೂ ಕೂಡ ಸಹಿಸೋಕೆ ಸಾಧ್ಯ ಇಲ್ಲ. ಯಾಕಂದ್ರೆ, ನಮ್ಮ ಸಂಸ್ಕೃತಿಯನ್ನು ಹಾಳು ಮಾಡೋಕೆ ಬರ್ತಿರೋ ವೈರಸ್ ಅಂದ್ರೆ ಅದು ಡಬ್ಬಿಂಗ್. ನಮ್ಮ ಕನ್ನಡ ಚಿತ್ರರಂಗದಲ್ಲಿ ಏನು ಕಮ್ಮಿ ಇದೆ ಹೇಳಿ. ಅದ್ಭುತ ಚಿತ್ರಗಳು ಬರ್ತಿವೆ. ಅಂಥದ್ರಲ್ಲಿ ಡಬ್ಬಿಂಗ್ ಯಾಕೆ.? ಇದನ್ನು ನಾನು ಖಂಡಿಸ್ತೇನೆ. ನಾನು ಡಬ್ಬಿಂಗ್ ವಿರೋಧಿ. ದಯವಿಟ್ಟು ಎಲ್ಲರೂ ಸಹಕಾರ ನೀಡಬೇಕು. ಕನ್ನಡ ಚಿತ್ರಗಳ ಉಳಿವಿಗಾಗಿ ನಾವೆಲ್ಲರೂ ಹೋರಾಡೋಣ. ಸೇ ನೋ ಟು ಡಬ್ಬಿಂಗ್. ಜೈ ಹಿಂದ್. ಜೈ ಕರ್ನಾಟಕ'' - ಅಕುಲ್ ಬಾಲಾಜಿ, ನಟ

ಡಬ್ಬಿಂಗ್ ನಿಂದಾಗಿ ಅನೇಕರಿಗೆ ಏಟು ಬಿದ್ದಿದೆ
''ಇತ್ತೀಚೆಗೆ ಬೇರೆ ಭಾಷೆಯ ಸಿನಿಮಾಗಳನ್ನ ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ. ಇದರಿಂದ ನಮ್ಮ ತಂತ್ರಜ್ಞರಿಗೆ, ಕಲಾವಿದರಿಗೆ ಹಾಗೂ ನಮ್ಮ ಸಂಸ್ಕೃತಿಗೆ ದೊಡ್ಡ ಪ್ರಮಾಣದಲ್ಲಿ ಏಟು ಬಿದ್ದಿದೆ. ಇದನ್ನ ನಾನು ಖಂಡಿಸುತ್ತೇನೆ. ನೀವೆಲ್ಲರೂ ಇಂತಹ ಸಿನಿಮಾಗಳನ್ನ ಪ್ರೋತ್ಸಾಹಿಸಬೇಡಿ ಅಂತ ನಾನು ಕೇಳಿಕೊಳ್ಳುತ್ತೇನೆ'' - ಅನಿರುದ್ಧ, ನಟ

ಬೆರಕೆ ಕಲಬೆರಕೆ ಬೇಡ
''ಇದೆಲ್ಲ ಸ್ವಾಭಿಮಾನಿ ಕನ್ನಡಿಗನ ಕೆಲಸವಲ್ಲ. ಡಾ.ರಾಜ್, ಡಾ.ವಿಷ್ಣು, ಡಾ.ಅಂಬರೀಶ್ ಅವರನ್ನೆಲ್ಲ ಅಣ್ಣ ಎಂದು ಹಣ, ಹೆಸರು ಸಿಕ್ಕ ಮೇಲೆ ಕನ್ನಡದ ತಲೆ ಕಾಯುವ ಬದಲು ತಲೆ ತೆಗೆಯಲು ನಿಂತ ಕೆಲ ಮೀರ್ ಸಾಧಕರದು. ಇಂತಹವರನ್ನು ಮತ್ತು ಡಬ್ಬಿಂಗ್ ಅನ್ನು ನಮ್ಮಂತೆ ನೀವೂ ಸಹ ಹೊರಗಿಡಿ. ಕನ್ನಡ ಕಲಾವಿದರು, ತಂತ್ರಜ್ಞರು, ಸಾಹಿತ್ಯ, ಸಂಸ್ಕೃತಿಯ ಉಳಿವಿಗೆ ಸಹಕರಿಸಿ.. ಬೆರಕೆ, ಕಲಬೆರಕೆ ಅಳಿಯಲಿ.. ಶಾಸ್ತ್ರೀಯ ಕನ್ನಡ ಉಳಿಯಲಿ.. ಜೈ ಕನ್ನಡ'' - ಪ್ರಜ್ವಲ್ ದೇವರಾಜ್[ಬೆರಕೆ-ಕಲಬೆರಕೆ ಅಳಿಯಲಿ ಎಂದ ಕನ್ನಡದ ಕಂದ ಪ್ರಜ್ವಲ್ ದೇವರಾಜ್]

ಕನ್ನಡದ ಹೆಸರಿನಲ್ಲಿ ಅನಾಚಾರ
''ಕನ್ನಡದ ಹೆಸರಲ್ಲಿ ಅನಾಚಾರ.! ಇದನ್ನ ಮಾಡಲು 40 ಲಕ್ಷ ಇನಾಮ್ ಪರರಾಜ್ಯದಿಂದ ಪಡೆದ ಮಾಹಿತಿ ಇದೆ.! ಆದಷ್ಟು ಬೇಗ ಹೊರಬಂದು ಬೆತ್ತಲಾಗುತ್ತಾರೆ.! ವೆಭಿಚಾರಿಗಳು.! ಕನ್ನಡದಲ್ಲಿ ಗಂಡುನಟರಿಲ್ಲವೇ.! ನಮ್ಮ ಕನ್ನಡ ಚಿತ್ರ ಪರರಾಜ್ಯದಲ್ಲಿ ಬಿಡುಗಡೆ ಮಾಡುವ ಗಂಡಸರಿದ್ದಾರಾ ಕೇಳಿ.. ಕಂಡವರ ಮಲ ಹೊರಲು ಹೊರಟಿರುವ ಮಂದಿಗೆ.! ನಮ್ಮಲ್ಲಿ ಅವರ ಚಿತ್ರ ಓಕೆ.! ನಮ್ಮ ಚಿತ್ರ ಅಲ್ಲಿ ಬೇಡ ಯಾಕೆ.?'' - ಜಗ್ಗೇಶ್['ಕನ್ನಡದ ಹೆಸರಲ್ಲಿ ಅನಾಚಾರ': 'ಡಬ್ಬಿಂಗ್' ವಿರುದ್ಧ ಗುಡುಗಿದ ನಟ ಜಗ್ಗೇಶ್.!]


Click it and Unblock the Notifications











