ಡಾ, ರಾಜ್ ಬಗ್ಗೆ ದರ್ಶನ್, ಸೃಜನ್, ತರುಣ್ ಅಭಿಮಾನದ ನುಡಿ
ಏಪ್ರಿಲ್ 24 ನಟ ಡಾ ರಾಜ್ ಕುಮಾರ್ ಹುಟ್ಟುಹಬ್ಬದ ವಿಶೇಷ ದಿನ. ತನ್ನ ಸಿನಿಮಾಗಳ ಮೂಲಕ, ತನ್ನ ಸರಳತೆಯ ಮೂಲಕ ಸಾದಾ ಕನ್ನಡಿಗರ ಮನಸ್ಸಿನಲ್ಲಿ ಇರುವ ಈ ಮಹಾ ನಾಯಕನಿಗೆ ಎಲ್ಲರೂ ನಮನ ಸಲ್ಲಿಸುತ್ತಿದ್ದಾರೆ.
ರಾಜ್ ಕುಮಾರ್ ಜೊತೆಗೆ ನಟಿಸಿದ್ದ ತೂಗುದೀಪ ಶ್ರೀನಿವಾಸ್ ಪುತ್ರ ನಟ ದರ್ಶನ್, ಸುಧೀರ್ ಪುತ್ರ ನಿರ್ದೇಶಕ ತರುಣ್ ಸುಧೀರ್ ಹಾಗೂ ಲೋಕೇಶ್ ಮಗ ನಟ ಸೃಜನ್ ಲೋಕೇಶ್ ಅಣ್ಣಾವ್ರ ಬಗ್ಗೆ ಅಭಿಮಾನದ ಮಾತಗಳನ್ನು ಆಡಿದ್ದಾರೆ.
ಇದರ ಜೊತೆಗೆ ನಟರಾದ ಸುದೀಪ್, ಗಣೇಶ್, ಉಪೇಂದ್ರ, ಜಗ್ಗೇಶ್, ಧನಂಜಯ್, ನಿರ್ದೇಶಕ ರಘುರಾಮ್ ಯೋಗರಾಜ್ ಭಟ್, ನಟಿ ರಾಗಿಣಿ ದ್ವಿವೇದಿ ಸೇರಿದಂತೆ ಚಿತ್ರರಂಗದ ಸಾಕಷ್ಟು ಜನರು ಟ್ವೀಟ್ ಮಾಡಿ ರಾಜ್ ಕುಮಾರ್ ರನ್ನು ನೆನೆದಿದ್ದಾರೆ.
ಅಣ್ಣಾವ್ರ ಬಗ್ಗೆ ಕನ್ನಡದ ನಟ, ನಟಿಯರು ಮಾಡಿರುವ ಟ್ವೀಟ್ ಮುಂದಿದೆ ಓದಿ...
ರಾಜಣ್ಣರಿಗೆ ಹೃದಯಪೂರ್ವಕ ನಮನಗಳು - ದರ್ಶನ್
''ನಲ್ಮೆಯ ಅಣ್ಣಾವ್ರು ನಟ ಸಾರ್ವಭೌಮ ಡಾ|| ರಾಜಣ್ಣ ನವರಿಗೆ ಹುಟ್ಟುಹಬ್ಬದ ದಿನದಂದು ಹೃದಯಪೂರ್ವಕ ನಮನಗಳು. ಅವರ ಚಿತ್ರಗಳು, ನಡೆದು ಬಂದ ದಾರಿ, ಆದರ್ಶಗಳು ಸದಾ ಸ್ಫೂರ್ತಿದಾಯಕವಾಗಿರುತ್ತದೆ.'' - ದರ್ಶನ್, ನಟ
ಲೆಜೆಂಡ್ ಎಂದಿಗೂ ಇರುತ್ತಾರೆ - ತರುಣ್ ಸುಧೀರ್
"ಹೀರೋಗಳು ಬರುತ್ತಾರೆ, ಹೋಗುತ್ತಾರೆ, ಆದರೆ, ಲೆಜೆಂಡ್ ಎಂದಿಗೂ ಇರುತ್ತಾರೆ. ಕನ್ನಡ ಚಿತ್ರರಂಗ ಕಂಡಂತ ಅಪ್ರತಿಮ ಕಲಾವಿದ, ಮೇರು ನಟ, ದೇವತಾ ಮನುಷ್ಯ ಡಾ. ರಾಜ್ ಕುಮಾರ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಅಣ್ಣ ಮತ್ತೆ ಹುಟ್ಟಿ ಬನ್ನಿ .'' - ತರುಣ್ ಸುಧೀರ್, ನಿರ್ದೇಶಕ
ಗೋಕಾಕ್ ಚಳುವಳಿಯ ಫೋಟೋ ಹಂಚಿಕೊಂಡ ಸೃಜನ್
ರಾಜ್ ಕುಮಾರ್ ರಿಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶುಭ ಕೋರಿರುವ ಸೃಜನ್ ಲೋಕೇಶ್ ರಾಜ್ ಕುಮಾರ್ ಅವರ ಅವಿಸ್ಮರಣೀಯ ಫೋಟೋವನ್ನು ಹಂಚಿಕೊಂಡಿದ್ದಾರೆ. ತಂದೆ ಲೋಕೇಶ್ ಹಾಗೂ ರಾಜ್ ಕುಮಾರ್ ಇಬ್ಬರು ಗೋಕಾಕ್ ಚಳುವಳಿಯಲ್ಲಿ ಭಾಗಿಯಾಗಿದ್ದ ಫೋಟೋಗಳ ಮೂಲಕ ಹಳೆಯ ಕ್ಷಣವನ್ನು ನೆನಪು ಮಾಡಿಕೊಂಡಿದ್ದಾರೆ.
ರಾಜ್ ಹುಟ್ಟುಹಬ್ಬದ ದಿನ ಮಗನ ಮದುವೆ ಮಾಡಿಸಿದ್ದೆ - ಜಗ್ಗೇಶ್
''ರಾಜಣ್ಣನ ನೆನಪು ಸದಾ ನನ್ನ ಮನಸ್ಸಿದಲ್ಲಿ ಉಳಿಸಿಕೊಳ್ಳಲು ನನ್ನ ಹಿರಿಯ ಮಗ ಗುರು ಜಗ್ಗೇಶ್ ಗೆ 24/4/2014 ರಾಜಣ್ಣನ ಹುಟ್ಟುಹಬ್ಬದ ದಿನ ಮದುವೆ ಮಾಡಿಸಿದ್ದೆ..! ಹಾಗಾಗಿ ರಾಜಣ್ಣನ ಹುಟ್ಟುಹಬ್ಬ ನಮ್ಮ ಮನೆಯಲ್ಲಿಯು ಭಾವನಾತ್ಮಕವಾಗಿ ಬೆಸೆದಿದೆ.'' - ಜಗ್ಗೇಶ್, ನಟ
ರಾಜ ಮಾತ್ರ ಒಬ್ಬರೇ - ರಘುರಾಮ್
''ನಾಯಕರು ನೂರಾರು ಜನ ಇರ್ತಾರೆ ಆದರೆ ರಾಜ ಮಾತ್ರ ಒಬ್ಬರೇ. ನಕ್ಷತ್ರಗಳು ಸಾವಿರಾರು ಆದರೆ ಧ್ರುವತಾರೆ ಮಾತ್ರ ಒಂದೇ.ಕಲೆಗೆ, ನಯಕ್ಕೆ ,ವಿನಯಕ್ಕೆ, ಭಕ್ತಿಗೆ, ಪ್ರೀತಿಗೆ, ಶುದ್ಧತೆಗೆ ಮುಗ್ಧತೆಗೆ ಶ್ರದ್ದೆಗೆ ಸಹನೆಗೆ ಪೂಜ್ಯತೆಗೆ ಪ್ರೀತಿಗೆ ಭಾವನೆಗೆ ಭಾಷೆಗೆ ಉಸ್ತುವಾರಿ ನಮ್ಮ ಕರುನಾಡ ಸಾಂಸ್ಕೃತಿಕ ರಾಯಭಾರಿ..ಹ್ಯಾಪಿ ಬರ್ತ್ ಡೇ ಅಪ್ಪಾಜಿ.'' - ರಘುರಾಮ್, ನಿರ್ದೇಶಕ
ಪರಿಪೂರ್ಣ ವ್ಯಕ್ತಿತ್ವದ ಗಣಿ - ಗಣೇಶ್
''ಕರ್ನಾಟಕ ರತ್ನ, ಸರಳ, ಸೌಜನ್ಯದ ಚಿಲುಮೆ, ಮೇರು ನಟ, ಪರಿಪೂರ್ಣ ವ್ಯಕ್ತಿತ್ವದ ಗಣಿ, ನನ್ನ ಯೋಗ ಕಲಿಕೆಗೆ ಸ್ಫೂರ್ತಿ, ಪ್ರೇರಣೆ. ಡಾ. ರಾಜ್ ಕುಮಾರ್ ರವರಿಗೆ ಜನ್ಮ ದಿನದ ಶುಭಾಶಯಗಳು. ನಿಮ್ಮ ಪ್ರೀತಿ, ಆಶೀರ್ವಾದ ಸದಾ ನಮ್ಮೊಂದಿಗಿರಲಿ.'' - ಗಣೇಶ್, ನಟ
ಅಣ್ಣಾವ್ರಿಗೆ ಕಲಾವಿದರ ನಮನ
ಉಳಿದಂತೆ, ನಟ ಉಪೇಂದ್ರ, ಸುದೀಪ್, ನಿರ್ದೇಶಕ ಯೋಗರಾಜ್ ಭಟ್, ಧನಂಜಯ್, ರಾಗಿಣಿ ದ್ವಿವೇದಿ ಹೀಗೆ ಸಾಕಷ್ಟು ಕಲಾವಿದರು ರಾಜ್ ಕುಮಾರ್ ಬಗ್ಗೆ ಟ್ವೀಟ್ ಮಾಡಿ ನಮನ ಸಲ್ಲಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಅಣ್ಣಾವ್ರನ್ನು ನೆನೆದಿದ್ದಾರೆ.


Click it and Unblock the Notifications











