ಪತಿಯ ಹಾದಿಯಲ್ಲಿ ಪತ್ನಿ: ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಬಿ.ವಿ.ರಾಧಾ ದೇಹದಾನ
ವೈದ್ಯಕೀಯ ವಿದ್ಯಾರ್ಥಿಗಳ ಸಂಶೋಧನೆಗೆ ನೆರವಾಗುವಂತೆ ತಮ್ಮ ದೇಹವನ್ನ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾನ ಮಾಡಲು ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ ಇಚ್ಛೆ ವ್ಯಕ್ತಪಡಿಸಿದ್ದರು. ಅದರಂತೆ ಎರಡು ವರ್ಷಗಳ ಹಿಂದೆ, ಕಿಕ್ಕೇರಿ ಶಾಮಣ್ಣ ಲಕ್ಷ್ಮೀನರಸಿಂಹ ಸ್ವಾಮಿ (ಕೆ.ಎಸ್.ಎಲ್.ಸ್ವಾಮಿ) ಕೊನೆಯುಸಿರೆಳೆದಾಗ, ಅವರ ದೇಹವನ್ನ ಕುಟುಂಬಸ್ಥರು ದಾನ ಮಾಡಿದ್ದರು.
ಇದೀಗ ಪತಿಯ ಹಾದಿಯಲ್ಲಿಯೇ ಧರ್ಮಪತ್ನಿ ಬಿ.ವಿ.ರಾಧಾ ಕೂಡ ಸಾಗಿದ್ದಾರೆ. ಜೀವನದುದ್ದಕ್ಕೂ ಪತಿ ಕೆ.ಎಸ್.ಎಲ್ ಸ್ವಾಮಿ ಆದರ್ಶ ಪಾಲಿಸಿದ್ದ ಪತ್ನಿ ಬಿ.ವಿ.ರಾಧಾ ಸಾವಿನ ಸಂತರವೂ ಅದೇ ಮಾರ್ಗವನ್ನ ಅನುಸರಿಸಿದ್ದಾರೆ.

ಪತಿಯಂತೆ ಪತ್ನಿ ಬಿ.ವಿ.ರಾಧಾ ಕೂಡ ದೇಹದಾನ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದರು. ಅದರಂತೆ ಇಂದು ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಮೃತರ ದೇಹವನ್ನ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ಇಂದು ಮುಂಜಾನೆ ಹೃದಯಾಘಾತಕ್ಕೆ ಒಳಗಾದ ಹಿರಿಯ ನಟಿ ಬಿ.ವಿ.ರಾಧಾ ಕೊನೆಯುಸಿರೆಳೆದರು. ಬೆಂಗಳೂರಿನ ಹೊರಮಾವು ಬಳಿ ಇರುವ ನಿವಾಸದಲ್ಲಿ ಪಾರ್ಥೀವ ಶರೀರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ವೈದ್ಯಕೀಯ ವಿದ್ಯಾರ್ಥಿಗಳ ಸಂಶೋಧನೆಗೆ ನೆರವಾಗಿ ಕೆ.ಎಸ್.ಎಲ್.ಸ್ವಾಮಿ ಹಾಗೂ ನಟಿ ಬಿ.ವಿ.ರಾಧಾ ದಂಪತಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.


Click it and Unblock the Notifications











