ಅಂಧರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಪೂಜಾ ಗಾಂಧಿ
ಇತ್ತೀಚಿಗಷ್ಟೇ 'ದಂಡುಪಾಳ್ಯ'ದ ಯಶಸ್ಸಿನಿಂದ ಪುಳಕಿತರಾಗಿರುವ ಪೂಜಾ, ರಾಜಕೀಯದಲ್ಲೂ ಸಕ್ರಿಯರಾಗಿರುವ ನಟಿ. ಸದ್ಯಕ್ಕೆ ಜೆಡಿಎಸ್ ಪಕ್ಷದ ಯುವ ಘಟಕದ ಕಾರ್ಯಾಧ್ಯಕ್ಷೆ ಆಗಿರುವ ಪೂಜಾ ಗಾಂಧಿ, ಸಾಕಷ್ಟು ಸಮಾಜ ಸೇವೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಿನ್ನೆ (06 ಅಕ್ಟೋಬರ್ 2012) ನಡೆದ ಕಾವೇರಿ ಪರ ಹೋರಾಟದಲ್ಲಿಯೂ ಭಾಗಿಯಾಗಿರುವ ಪೂಜಾ ಗಾಂಧಿ ಇಂದು ತಮ್ಮ ಹುಟ್ಟುಹಬ್ಬವನ್ನು ತಮ್ಮಿಷ್ಟದಂತೆ ಆಚರಿಸಿಕೊಂಡಿದ್ದಾರೆ.
ಪ್ರತಿವರ್ಷವೂ ಒಂದಲ್ಲ ಇನ್ನೊಂದು ಅಂಧ ಮಕ್ಕಳ ಶಾಲೆಗಳಲ್ಲಿ ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳುವ ನಟಿ ಪೂಜಾ ಗಾಂಧಿ, ಈ ವರ್ಷವೂ ಅದನ್ನು ಮುಂದುವರಿಸಿದ್ದಾರೆ. ಬಹಳಷ್ಟು ವರ್ಷಗಳಿಂದ ಅವರಿಂದ ದೂರವಿದ್ದ ಯಶಸ್ಸು ಕೂಡ ಈ ವರ್ಷ ಅವರಿಗೆ ಜೊತೆಯಾಗಿರುವುದರಿಂದ ಸಹಜವಾಗಿಯೇ ಖುಷಿಖುಷಿಯಾಗಿದ್ದಾರೆ ಪೂಜಾ ಗಾಂಧಿ.
ಕೆಲವು ದಿನಗಳ ಹಿಂದೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಮುಖಂಡ ಕುಮಾರಸ್ವಾಮಿ ಬಹಿರಂಗವಾಗಿ "ನಿಮ್ಮ ಸೇವೆ ಸಾಕು ಪೂಜಾ ಗಾಂಧಿಯವರೇ...' ಎಂದಿದ್ದರು. ಈ ವಿಷಯದ ಬಗ್ಗೆ ಸ್ವತಃ ಪೂಜಾ ಗಾಂಧಿ ಉತ್ತರಿಸಿದ್ದಾರೆ. "ಪಕ್ಷಕ್ಕೆ ರಾಜೀನಾಮೆ ನೀಡಬೇಕು ಎಂದು ಕುಮಾರಸ್ವಾಮಿ ಹೇಳಿಲ್ಲ. ಅವರು ಆ ಸಂದರ್ಭದಲ್ಲಿ ಹೇಳಿದ್ದ ಮಾತುಗಳು ಭಾವೋದ್ವೇಗಕ್ಕೆ ಸಂಬಂಧಿಸಿದ್ದು. ನಾನು ಅವರ ತಂಗಿ ಸಮಾನ ಎಂದು ಕೂಡ ಅವರು ಆ ಸಂದರ್ಭದಲ್ಲೇ ಹೇಳಿದ್ದಾರೆ.
ಪಕ್ಷಕ್ಕಾಗಿ ನಾನು ಮಾಡಿರುವ ಕೆಲಸ ಎಲ್ಲರಿಗೂ ಸಂತಸ ತಂದಿದೆ. ಸೆಲೆಬ್ರಿಟಿಗಳು ಎಂದ ಮೇಲೆ ವಿವಾದಗಳು ಯಾವಾಗಲೂ ಇದ್ದದ್ದೇ. ನನ್ನ ಮೇಲೆ ಬಂದ ಪ್ರತಿ ಸುಳ್ಳು ಆರೋಪಗಳಿಗೂ ನಾನು ಸ್ಪಷ್ಟೀಕರಣ ನೀಡುತ್ತಾ ನನ್ನ ಅಮೂಲ್ಯ ಸಮಯ ವ್ಯರ್ಥ ಮಾಡುವುದಿಲ್ಲ. ಬದಲು ನನ್ನ ಕೆಲಸದಲ್ಲಿ ನಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ" ಎಂದು ಕುಮಾರಸ್ವಾಮಿ ಮಾತಿನ ಅರ್ಥವನ್ನು ವಿವರಿಸಿ ಜೆಡಿಎಸ್ ಪಕ್ಷ ಬಿಡದಿರುವ ತಮ್ಮ ನಿರ್ಧಾರದ ಬಗ್ಗೆಯೂ ಹೇಳಿದ್ದಾರೆ ಪೂಜಾ ಗಾಂಧಿ. (ಏಜೆನ್ಸೀಸ್)


Click it and Unblock the Notifications












