ವಿವಾಹ ರದ್ದು ಮಾಡಲು ಶ್ರುತಿ ಒಪ್ಪಿಗೆ
ಶ್ರುತಿ ಹಾಗೂ ಚಂದ್ರಚೂಡ ವಿವಾಹ ಪ್ರಕರಣ ಬಹುತೇಕ ಇತ್ಯರ್ಥವಾಗುವ ಲಕ್ಷಣಗಳು ಕಂಡು ಬಂದಿದೆ. ಶುಕ್ರವಾರ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾದ ನಟಿ ಶ್ರುತಿ ಅವರು ಮದುವೆ ರದ್ದು ಮಾಡಲು ತಮ್ಮ ಆಕ್ಷೇಪವೇನಿಲ್ಲ ಎಂದು ಹೇಳಿದ್ದಾರೆ.
ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಿದ್ದ ನಟಿ ಶೃತಿ ಅವರು ನ್ಯಾಯಾಧೀಶರ ಮುಂದೆ ಹಾಜರಾಗಿ ಚಂದ್ರಚೂಡರವರು ಸಲ್ಲಿಸಿರುವ ವಿವಾಹ ರದ್ದು ಅರ್ಜಿಗೆ ತಮ್ಮ ತಕರಾರಿಲ್ಲ ಎಂದು ಹೇಳುವ ಮೂಲಕ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಶೃತಿ ಅವರೇ ಖುದ್ದಾಗಿ ಈ ಬಗ್ಗೆ ಹೇಳಿಕೆ ನೀಡಿರುವುದರಿಂದ ಮುಂಬರುವ ಆ.29ರಂದು ನಡೆಯಲಿರುವ ವಿಚಾರಣೆಯಲ್ಲಿ ಪ್ರಕರಣ ಇತ್ಯರ್ಥಗೊಳ್ಳುವ ಸಾಧ್ಯತೆಗಳಿದೆ ಎಂದು ಹೇಳಲಾಗುತ್ತಿದೆ.

ಇದೇ ವೇಳೆ ಶೃತಿ ಅವರೂ ಕೂಡ ಮಾಧ್ಯಮಕ್ಕೆ ಹೇಳಿಕೆ ನೀಡಿ, ತಾವು ಮೊದಲಿನಿಂದಲೂ ಬೇರೆ ಯಾವುದೇ ಹೆಣ್ಣಿಗೂ ಮೋಸವಾಗದೆಂಬ ನಿಲುವು ತಳೆದಿದ್ದೆ. ಅದರಂತೆ ಮಂಜುಳಾ ಅವರ ಮನಸ್ಸಿಗೆ ನೋವಾಗಬಾರದೆಂಬ ದೃಷ್ಟಿಯಿಂದ ಇಂದು ನ್ಯಾಯಾಲಯಕ್ಕೆ ಹಾಜರಾಗಿ ನನ್ನ ಭಾವನೆಯನ್ನು ನ್ಯಾಯಾಧೀಶರ ಮುಂದೆಯೇ ತಿಳಿಸಿದ್ದೇನೆ ಎಂದಿದ್ದಾರೆ.
ಚಂದ್ರಚೂಡರವರು ಈಗಾಗಲೇ ವಿವಾಹ ರದ್ಧತಿ ಕುರಿತು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಶೃತಿ ಅವರು ಎಲ್ಲವನ್ನೂ ಕಾಲವೇ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.
ಇಷ್ಟಕ್ಕೆ ಮುಗಿಯಲಿಲ್ಲ : ಕೌಟುಂಬಿಕ ನ್ಯಾಯಾಲಯದಲ್ಲಿ ಚಂದ್ರಚೂಡರವರ ಪತ್ನಿ ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದಂತೆ ಈಗ ಒಂದು ಪ್ರಕರಣ ಮುಗಿದು ಹೋಗಲಿದೆ. ಆದರೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಲ್ಲಿಸಿರುವ ಕೌಟುಂಬಿಕ ದೌರ್ಜನ್ಯ ಪ್ರಕರಣ ಇನ್ನು ಮುಂದುವರೆಯಲಿದೆ.
ಚಂದ್ರಚೂಡರವರು ನನ್ನ ಜೀವನ ನಿರ್ವಹಣೆಗಾಗಿ ತಿಂಗಳಿಗೆ 35 ಸಾವಿರ ರೂ. ನೀಡಬೇಕೆಂದು ಮಂಜುಳಾ ಅವರು ಮನವಿ ಮಾಡಿದ್ದು, ಇದು ಯಾವ ತಿರುವು ಪಡೆಯಲಿದೆ ಎಂಬುದು ಎಲ್ಲರ ಕುತೂಹಲವಾಗಿದೆ.
ಸದ್ಯದಲ್ಲಿಯೇ ಪ್ರಕರಣ ವಿಚಾರಣೆಗೆ ಬರಲಿದ್ದು, ಅಲ್ಲಿ ಮಂಜುಳಾ ಅವರ ನಿಲುವು ಏನಾಗಲಿದೆ ಎಂಬುದರ ಮೇಲೆಯೇ ಪ್ರಕರಣ ನಿಂತಿದೆ.


Click it and Unblock the Notifications











