ನಟಿ ಶ್ರುತಿ ಎರಡನೆ ಮದುವೆಗೆ ಭಾರಿ ಅಪಶ್ರುತಿ
ಕನ್ನಡ ಚಿತ್ರರಂಗದ ಮೇರು ನಟಿ ಶ್ರುತಿ ಅವರ ಎರಡನೇ ಮದುವೆ ಪ್ರಕರಣ ಭಾರಿ ತಿರುವು ಪಡೆದುಕೊಂಡಿದೆ. ಅವರ ಎರಡನೇ ಪತಿ ಚಂದ್ರಚೂಡ್ ಅವರು ಶ್ರುತಿ ಜೊತೆಗಿನ ಮದುವೆಯನ್ನು ಅಸಿಂಧುಗೊಳಿಸುವಂತೆ ವಕೀಲರ ಮೂಲಕ ಬೆಂಗಳೂರಿನ ಕೌಟುಂಬಿಕ ಕೋರ್ಟ್ ಗೆ ಲಿಖಿತ ಹೇಳಿಕೆ ನೀಡಿದ್ದಾರೆ.
ಈ ಮೂಲಕ ಶ್ರುತಿ ಅವರ ಎರಡನೇ ಮದುವೆಗೆ ಭಾರಿ ಟ್ವಿಸ್ಟ್ ಸಿಕ್ಕಂತಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡಿರುವ ಚಂದ್ರಚೂಡ್ ಅವರು, ಯಾರ ವೈಯಕ್ತಿಕ ಬದುಕಿನಲ್ಲೂ ನನ್ನ ಪ್ರವೇಶ ಆಘಾತ ನೀಡಬಾರದು. ನನ್ನ ಪ್ರವೇಶದ ಕಾರಣ ಅವರ ಬಾಳಿನಲ್ಲಿ ಸಮಸ್ಯೆ ಉಂಟಾಗಿದೆ. ಹಾಗಾಗಿ ತಾವು ಈ ಮದುವೆ ಅಸಿಂಧುಗೊಳಿಸಲು ಒಪ್ಪಿಗೆ ನೀಡಿದ್ದೇನೆ ಎಂದಿದ್ದಾರೆ.

ಶ್ರುತಿ ಅವರ ಮೇಲೆ ಅಪಾರ ಗೌರವ, ಪ್ರೀತಿ ಇರುವ ಕಾರಣ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದಿದ್ದಾರೆ ಚಂದ್ರಚೂಡ್. ಎರಡನೇ ಮದುವೆಯನ್ನು ಅಸಿಂಧುಗೊಳಿಸುವಂತೆ ಚಂದ್ರಚೂಡ್ ಅವರ ಮೊದಲ ಪತ್ನಿ ಮಂಜುಳಾ ಅವರು ಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಶ್ರುತಿ ಹಾಗೂ ಚಂದ್ರಚೂಡ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು.
ಅದರೆ ಶ್ರುತಿ ಹಾಗೂ ಚಂದ್ರಚೂಡ್ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ ಎಂದು ಮಂಜುಳಾ ಅವರ ಪರ ವಕೀಲರಾದ ಧರ್ಮಪಾಲ್ ಅವರು ಮಾಧ್ಯಮಗಳಿಗೆ ತಿಳಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರುತಿ ಅವರು ನನ್ನ ಜೀವನದಲ್ಲಿ ಒಂದು ಕಡೆ ಅವಮಾನ ಇನ್ನೊಂದು ಕಡೆ ಸನ್ಮಾನ ಎರಡೂ ಅಗಿದೆ.
ಇಬ್ಬರಲ್ಲಿ ಒಬ್ಬರಿಗೆ ನ್ಯಾಯ ಸಿಗಲಿ ಎಂದು ಬಯಸುತ್ತೇನೆ. ನನ್ನ ಕಾರಣದಿಂದ ಈ ನಾಡಿನ ಯಾವುದೇ ಮಹಿಳೆಗೆ ಅನ್ಯಾಯವಾಗಬಾರದು ಎಂದಿದ್ದಾರೆ ನಟಿ ಶ್ರುತಿ. ಚಂದ್ರಚೂಡ್ ಹಾಗೂ ಶ್ರುತಿ ಅವರ ಎರಡನೇ ಮದುವೆ ಅಸಿಂಧುಗೊಳಿಸುವ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 23ಕ್ಕೆ ಕೋರ್ಟ್ ಮುಂದೂಡಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











