ಕನ್ನಡ ಓಕೆ, ಹಿಂದಿ ಯಾಕೆ: ಹಿಂದಿ ಹೇರಿಕೆಗೆ ಕನ್ನಡ ಚಿತ್ರರಂಗದ ಧಿಕ್ಕಾರ!
ಬೆಂಗಳೂರು ಮೆಟ್ರೋದ ನಾಮ ಫಲಕಗಳಲ್ಲಿ ಹಿಂದಿ ಭಾಷೆಯನ್ನು ಬಳಸಿರುವುದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಸದ್ಯ ಈ ರೀತಿಯ ಹಿಂದಿ ಹೇರಿಕೆಯನ್ನು ಕನ್ನಡ ಚಿತ್ರರಂಗದ ಕೆಲ ಗಣ್ಯರು ವಿರೋಧಿಸಿದ್ದಾರೆ.
ನಟ ಜಗ್ಗೇಶ್, ನಿರ್ದೇಶಕ ಬಿ.ಸುರೇಶ್, ಸಾಹಿತಿ ಕವಿರಾಜ್ ಸೇರಿದಂತೆ ಅನೇಕರು 'ಹಿಂದಿ ರಾಷ್ಟ್ರಭಾಷೆ ಅಲ್ಲ, ಅದು ಒಂದು ಅಧಿಕೃತ ಭಾಷೆ' ಅಷ್ಟೆ ಅಂತ ಹಿಂದಿ ಹೇರಿಕೆಯ ವಿರುದ್ಧ ಗುಡುಗಿದ್ದಾರೆ. ಅಲ್ಲದೆ 'ನಮ್ಮ ಮೆಟ್ರೊ ಹಿಂದಿ ಬೇಡ' ಮತ್ತು 'ನಮ್ಮ ಮೆಟ್ರೋ ಕನ್ನಡ ಸಾಕು' ಎಂಬ ಹ್ಯಾಷ್ ಟ್ಯಾಗ್ ಬಳಸಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಅಭಿಯಾನ ಶುರುವಾಗಿದ್ದು, ಇವರೂ ಸಹ ಅದಕ್ಕೆ ಸಾಥ್ ನೀಡಿದ್ದಾರೆ.
ಬೆಂಗಳೂರಿನ ಮೆಟ್ರೋದಲ್ಲಿ ಹಿಂದಿ ಬೇಡ ಎನ್ನುವುದನ್ನು ಇವರು ತಮ್ಮ ಮಾತುಗಳಲ್ಲಿ ಅದ್ಭುತವಾಗಿ ಹೇಳಿದ್ದಾರೆ. ಮುಂದೆ ಓದಿ...

ಈಗಲೂ ಬದಲಿಸಬಹುದು
''ಉತ್ತರ ಭಾರತದಲ್ಲೇ ಬಹುತೇಕ ರಾಜ್ಯದ ಜನರಿಗೆ ಹಿಂದಿ ಬರುವುದಿಲ್ಲ. ಕಾಶ್ಮೀರ, ರಾಜಸ್ಥಾನ, ಪಂಜಾಬ್, ದಕ್ಷಿಣದಲ್ಲಿ ತಮಿಳು ನಾಡು, ಕೇರಳ, ಕರ್ನಾಟಕ.. ಹೀಗಿರಬೇಕಾದರೆ ಹಿಂದಿ ಹೇಗೆ ರಾಷ್ಟ್ರ ಭಾಷೆ.? ಮನಸಿದ್ದರೆ ಈಗಲೂ ಬದಲಿಸಬಹುದು. ಯತ್ನಿಸಿ'' ಜಗ್ಗೇಶ್, ನಟ

ಕನ್ನಡ ಪ್ರೇಮ
''ಇದರ ಬಗ್ಗೆ ಮಾತಾಡಿದರೆ ಕನ್ನಡ ಪ್ರೇಮಿ, ಮಾತಾಡದಿದ್ದರೆ ಕನ್ನಡದ ದ್ರೋಹಿ ಅನ್ನೋ ಭಾವನೆ ಬೇಡ. ಎಲ್ಲರಿಗೂ ಅವರ ಅಮ್ಮನ ಮೇಲೆ ಭಕ್ತಿ ಇರುತ್ತೆ. ಯಾರು ರಸ್ತೆಗೆ ಬಂದು ಹೃದಯ ತೋರಲ್ಲ.'' - ಜಗ್ಗೇಶ್, ನಟ

ನಾನು ಹಿಂದಿ ಹೇರಿಕೆಯ ವಿರೋಧಿ
''ಮೆಟ್ರೋ ಸ್ಥಳೀಯ, ರಾಜ್ಯ ಸ್ವಾಮ್ಯದ ಅಂಗವಾಗಿದ್ದು, ಇದು ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತದೆ. ಬೆಂಗಳೂರಿನಿಂದ ದೆಹಲಿ ಅಥವಾ ಲಕ್ನೋ ಗೆ ಪ್ರಯಾಣಿಸುವ ರೈಲುಗಳಲ್ಲಿ ಹಿಂದಿಯಲ್ಲಿ ಸೈನ್ ಬೋರ್ಡ್ ಇದ್ದರೆ ತೊಂದರೆ ಇಲ್ಲ. ಆದರೆ ಬೆಂಗಳೂರಿನಲ್ಲಿ ಮಾತ್ರ ಕಾರ್ಯನಿರ್ವಹಿಸುವ ಮೆಟ್ರೋ ಹಿಂದಿ ಫಲಕಗಳನ್ನು ಹೊಂದುವುದು ಸರಿಯಲ್ಲ.'' - ಬಿ ಸುರೇಶ, ನಿರ್ದೇಶಕ

ಕನ್ನಡ ಕಿತ್ತು ಹಾಕುವ ಹುನ್ನಾರ
''ಕನ್ನಡದ ಜೊತೆ ಹಿಂದಿ ಇದ್ರೆ ಏನು ಸಮಸ್ಯೆ ? ಅಂತ ಕೆಲವರು ಕೇಳಬಹುದು. ಕನ್ನಡದ ಜೊತೆ ಹಿಂದಿ ಇರೋದೇ ಸಮಸ್ಯೆ..ಇಂತಹ ಕ್ರಮಗಳಿಂದ ಇಲ್ಲಿ ವಾಸಿಸುವ ಹಿಂದಿ ಭಾಷಿಕರಿಗೆ ಕನ್ನಡ ಕಲಿಯಬೇಕಾದ ಅವಶ್ಯಕತೆ ಬರುವುದಿಲ್ಲ. ಮುಂದಿನ ದಿನಗಳಲ್ಲಿ ಹಿಂದಿ, ಇಂಗ್ಲೀಷ್ ಇದೆಯಲ್ಲಾ ಕನ್ನಡ ಯಾಕೆ? ಅಂತ ಕಿತ್ತು ಹಾಕೋ ಹುನ್ನಾರದ ಮೊದಲ ಹೆಜ್ಜೆ ಇದು. - ಕವಿರಾಜ್, ಚಿತ್ರ ಸಾಹಿತಿ


Click it and Unblock the Notifications











