ವಿವಾದದಲ್ಲಿ 'ಕನ್ನಡ ಚಲನಚಿತ್ರ ಇತಿಹಾಸ' ಕೃತಿ
ಕನ್ನಡದ ಹಿರಿಯ ಪತ್ರಕರ್ತೆ ಡಾ.ವಿಜಯಮ್ಮ ಅವರು ಬರೆದಿರುವ ಕನ್ನಡ ಚಿತ್ರರಂಗದ ಬಗ್ಗೆ ಸಂಪೂರ್ಣ ಮಾಹಿತಿಯುಳ್ಳ 'ಕನ್ನಡ ಚಲನಚಿತ್ರ ಇತಿಹಾಸ' ಕೃತಿ ವಿವಾದಕ್ಕೆ ಕಾರಣವಾಗಿದೆ. 2000 ಇಸವಿಯಲ್ಲೇ ಪುಸ್ತಕ ಸಿದ್ಧವಾಗಿದ್ದರೂ ಕೆಲ ಲೋಪದೋಷಗಳಿವೆ ಎಂಬ ಕಾರಣಕ್ಕೆ ಬಿಡುಗಡೆಯನ್ನು ತಡೆಹಿಡಿಯಲಾಗಿತ್ತು.
ಈಗ ಲೇಖಕರಿಗೆ ತಿಳಿಸದೆ ಕೃತಿಯಲ್ಲಿನ ಲೋಪದೋಷಗಳನ್ನು ಪರಿಷ್ಕರಿಸಿ ಬಿಡುಗಡೆ ಮಾಡಲಾಗುತ್ತಿದೆ. ಲೇಖಕ ಹಾಗೂ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರು ಕೃತಿಯನ್ನು ಪರಿಷ್ಕರಿಸಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೃತಿಯನ್ನು ಅಕ್ಟೋಬರ್ 24ಕ್ಕೆ ಬಿಡುಗಡೆ ಮಾಡಲು ಹೊರಟಿರುವುದು ವಿವಾದಕ್ಕೆ ಕಾರಣವಾಗಿದೆ.
ಕೃತಿಯಲ್ಲಿ ವರನಟ ಡಾ.ರಾಜ್ ಕುಮಾರ್ ಅವರ ವೈಯಕ್ತಿಕ ಬದುಕಿನ ಬಗ್ಗೆ ವಿವರಗಳಿವೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಶಿವರಾಜ್ ಕುಮಾರ್, ಜಗ್ಗೇಶ್ ಬಗ್ಗೆಯೂ ಪ್ರಸ್ತಾಪ ಮಾಡಲಾಗಿದೆ ಎನ್ನುತ್ತವೆ ಮೂಲಗಳು. ಕೃತಿಯಲ್ಲಿ ಲೋಪದೋಷಗಳಿವೆ ಎಂಬ ಕಾರಣಕ್ಕೆ ತಡೆಹಿಡಿಯಲಾಗಿದ್ದ ಪುಸ್ತಕವನ್ನು ಈಗ ಪರಿಷ್ಕರಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ಡಾ.ವಿಜಯಮ್ಮ, "ಸಂಪಾದಕ ಮಂಡಳಿಯಲ್ಲಿನ ಕೆಲವರು ತೀರಿಕೊಂಡಿದ್ದಾರೆ. ಈಗ ಆರು ಮಂದಿ ಮಾತ್ರ ಇದ್ದೀವಿ. ಅವರ ಪರವಾಗಿ ನಾನು ಮಾತನಾಡುತ್ತಿದ್ದೇನೆ. ಲೋಪದೋಷಗಳನ್ನು ಪಟ್ಟಿ ಮಾಡಿಕೊಟ್ಟರೆ ನಾವು ಪರಿಷ್ಕರಿಸುತ್ತೇವೆ..."
ಕಾಪಿರೈಟ್ ಕಾಯಿದೆ ಪ್ರಕಾರ ಮರುಮುದ್ರಣದ ಬಳಿಕ ಲೇಖಕರಿಗೆ ತಿಳಿಸಬೇಕು. ಲೇಖಕರು ಅಧ್ಯಯನ ಮಾಡಿಯೇ ಕೃತಿಯನ್ನು ರಚಿಸಿರುತ್ತಾರೆ. ಒಂದು ವೇಳೆ ಯಾರ ಮನಸ್ಸಿಗಾದರೂ ನೋವಾಗುವಂತಹ ವಿಚಾರಗಳು ಇದ್ದರೆ ಖಂಡಿತ ತೆಗೆಯುತ್ತೇವೆ" ಎಂದಿದ್ದಾರೆ. ಆದರೆ ಈಗ ತಮಗೆ ಹೇಳದೆ ಕೇಳದೆ ಅವರೇ ಪರಿಷ್ಕರಿಸಿರುವುದು ಎಷ್ಟು ಸರಿ ಎಂಬುದು ಅವರ ಪ್ರಶ್ನೆ.
ಈ ಕೃತಿಯ ಬಗ್ಗೆ ಸಾ.ರಾ.ಗೋವಿಂದು ಅವರು ಹೇಳುವುದೇನೆಂದರೆ, "ಪುಸ್ತಕದಲ್ಲಿನ ಕೆಲ ಅಂಶಗಳ ಬಗ್ಗೆ ಅಸಮಾಧಾನವಿತ್ತು. ಪುಸ್ತಕದಲ್ಲಿ ಬೇಕಾದಷ್ಟು ತಪ್ಪುಗಳಿದ್ದವು. ಅದನ್ನು ಲೇಖಕರೂ ಒಪ್ಪಿಕೊಂಡಿದ್ದರು. ಅದನ್ನು ಪರಿಷ್ಕರಿಸಿ ಈಗ ಹೊರತರುತ್ತಿದ್ದೇವೆ ಅಷ್ಟೇ" ಎಂದಿದ್ದಾರೆ.
ಕನ್ನಡ ಸಿನಿಮಾ ವಿಶ್ವಕೋಶ ಎಂದೇ ನಿರೀಕ್ಷಿಸಿರುವ ಈ ಕೃತಿಯಲ್ಲಿ ಏನೆಲ್ಲಾ ಉಂಟು ಎಂಬ ಬಗ್ಗೆ ಕನ್ನಡ ಚಿತ್ರಪ್ರೇಮಿಗಳಿಗೆ ಕುತೂಹಲವಿದ್ದೇ ಇದೆ. ಕೃತಿಯಲ್ಲಿ ಲೋಪದೋಷಗಳಿದ್ದರೆ ಸರಿಪಡಿಸಲಿ. ಅದುಬಿಟ್ಟು ಫಿಲಂ ಚೇಂಬರ್ ಸೆನ್ಸಾರ್ ಮಂಡಳಿ ತರಹ ನಡೆದುಕೊಳ್ಳುವುದು ಎಷ್ಟು ಸರಿ ಎಂಬ ಪ್ರಶ್ನೆ ಉದ್ಭವಿಸಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











