ಓಂ ಪ್ರಕಾಶ್ ರಾವ್, ಆದಿತ್ಯ ಹೊಸ ಚಿತ್ರಕ್ಕೆ ಸ್ಕೆಚ್
ನಿರ್ದೇಶಕ ಓಂ ಪ್ರಕಾಶ್ ರಾವ್ ಹೊಸ ಚಿತ್ರ ಸದ್ಯದಲ್ಲೇ ಪ್ರಾರಂಭವಾಗಲಿದೆ. ಅದು ಖಂಡಿತ ಉಪೇಂದ್ರ ಹಾಗೂ ಓಂ ಪ್ರಕಾಶ್ ರಾವ್ ಸಂಗಮದ 'ತ್ರಿಮೂರ್ತಿ' ಚಿತ್ರವಲ್ಲ, ಇದು ಬೇರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕತ್ವದ 'ಶಿವ' ಚಿತ್ರವನ್ನು ನಿರ್ದೇಶಿಸಿರುವ ಓಂ ಪ್ರಕಾಶ್ ರಾವ್, ಅದಿನ್ನೂ ಪ್ರದರ್ಶನ ಕಾಣುತ್ತಿರುವಾಗಲೇ ಹೊಸ ಚಿತ್ರವನ್ನು ಘೋಷಿಸಿದ್ದಾರೆ. '1' ಎಂಬ ಹೆಸರಿನ ಈ ಚಿತ್ರಕ್ಕೆ ಆದಿತ್ಯ ನಾಯಕ.
ಈ ಚಿತ್ರಕ್ಕೆ 'ಚಾಣಾಕ್ಯ' ಎಂದು ಹೆಸರಿಡಲು ಯೋಚಿಸಿದ್ದರು ಓಂ ಪ್ರಕಾಶ್ ರಾವ್. ಆದರೆ ಆ ಹೆಸರು ಈಗಾಗಲೇ ಬೇರೊಬ್ಬರ ಬ್ಯಾನರಿನಲ್ಲಿ ಭದ್ರವಾಗಿರುವುದರಿಂದ ಅನಿವಾರ್ಯವಾಗಿ ಹೆಸರನ್ನು ಬದಲಾಯಿಸಬೇಕಾಯ್ತು. ನಂತರ ಅಳೆದು, ತೂಗಿ ಚಿತ್ರಕ್ಕೆ '1' ಎಂದು ಹೆಸರಿಟ್ಟಿದ್ದಾಗಿ ಹೇಳಿದ್ದಾರೆ ನಿರ್ದೇಶಕ ಓಂ ಪ್ರಕಾಶ್ ರಾವ್.
ಆದಿತ್ಯ ಮತ್ತು ಓಂ ಪ್ರಕಾಶ್ ರಾವ್ ಸಂಗಮದಲ್ಲಿ ಈಗಾಗಲೇ 'ಕಾಟನ್ ಪೇಟೆ' ಎಂಬ ಚಿತ್ರ ಶುರುವಾಗಿದೆ. ಅದಿನ್ನೂ ಪೂರ್ಣಗೊಂಡಿಲ್ಲ, ಅಂತಿಮ ಹಂತದ ಚಿತ್ರೀಕರಣ ಬಾಕಿಯಿದೆ. ಅಷ್ಟರಲ್ಲಾಗಲೇ ಇವರಿಬ್ಬರ ಜೋಡಿಯಲ್ಲಿ ಮತ್ತೊಂದು ಚಿತ್ರ ಸೆಟ್ಟೇರುತ್ತಿದೆ. ಈ ಚಿತ್ರವನ್ನು ಓಂ ಪ್ರಕಾಶ್, ತಮ್ಮ ಸ್ವಂತ ಬ್ಯಾನರ್ ಆಗಿರುವ 'ಓಂ ಪ್ರೊಡಕ್ಷನ್ಸ್' ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿದ್ದಾರೆ.
ಈ ಚಿತ್ರದಲ್ಲಿ ನಾಯಕ ಆದಿತ್ಯ 'ಚಾಣಾಕ್ಷ' ಹಾಗೂ 'ಕ್ಷತ್ರಿಯ' ಎರಡೂ ಆಗಿರುತ್ತಾರಂತೆ. ಇದೂ ಕೂಡ ಸಾಹಸ ಪ್ರಧಾನ ಚಿತ್ರವೇ ಆಗಿರಲಿದ್ದು, ಚಾಣಾಕ್ಷನೊಳಗೂ ಒಬ್ಬ ಕ್ಷತ್ರಿಯ ಇರಲೇಬೇಕು ಎಂಬ ಸೂತ್ರವನ್ನು ಒಳಗೊಂಡಿದೆಯಂತೆ. ಆದಿತ್ಯರಿಗೆ ಓಂ ಪ್ರಕಾಶ್ 'ಮಾಸ್' ಚಿತ್ರಗಳನ್ನೇ ನಿರ್ದೇಶಿಸುತ್ತಿರುವುದು ಗಮನಿಸಬೇಕಾದ ಅಂಶ.
ಈ ಚಿತ್ರಕ್ಕೆ ನಾಯಕಿಯ ಆಯ್ಕೆ ಆಗಿಲ್ಲವಾದರೂ 'ಕಾಮ್ನಾ ಸಿಂಗ್' ಹಾಗೂ 'ಕಾಂಚಾಣ' ಎಂಬ ಇಬ್ಬರು ಬೆಡಗಿಯರು ಆಯ್ಕೆಯಾಗಿದ್ದಾರೆ. ನಾಯಕಿಯ ಆಯ್ಕೆಯೂ ಸದ್ಯದಲ್ಲೇ ನಡೆಯಲಿದೆ. ಉಳಿದ ತಾರಾಬಳಗದಲ್ಲಿ ಗಿರೀಶ್ ಕಾರ್ನಾಡ್, ರಂಗಾಟಣ ರಘು, ರವಿಶಂಕರ್, ಸ್ವಸ್ತಿಕ್ ಶಂಕರ್, ಸಾಧು ಕೋಕಿಲ, ಬುಲೆಟ್ ಪ್ರಕಾಶ್ ಹಾಗೂ ರಾಜು ತಾಳಿಕೋಟೆ ಮುಂತಾದವರಿದ್ದಾರೆ. ಅರ್ಜುನ್ ಜನ್ಯಾ ಸಂಗೀತ, ಜಗದೀಶ್ ವಾಲಿ ಛಾಯಾಗ್ರಹಣ ಚಿತ್ರಕ್ಕಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











