'ಕೆಜಿಎಫ್'ಗೆ 8, 'ಟಗರು' ಚಿತ್ರಕ್ಕೆ ಮೂರು ಅವಾರ್ಡ್: ಸೈಮಾ ವಿರುದ್ಧ ನಿರ್ದೇಶಕ ರಘುರಾಮ್ ಕೆಂಡಾಮಂಡಲ
ಆಗಸ್ಟ್ 15ರಂದು ಕತಾರ್ ನಲ್ಲಿ ನಡೆದ ಅದ್ದೂರಿ ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ಅನೇಕ ಕನ್ನಡ ಚಿತ್ರಗಳು ಪ್ರಶಸ್ತಿ ಗೆದ್ದು ಬೀಗಿವೆ. ಅದರಲ್ಲೂ ಈ ಬಾರಿಯ ಅತೀ ಹೆಚ್ಚು ಪ್ರಶಸ್ತಿ ಬ್ಲಾಕ್ ಬಸ್ಟರ್ ಕೆಜಿಎಫ್ ಸಿನಿಮಾದ ಪಾಲಾಗಿವೆ.
ಕೆಜಿಎಫ್ ಚಿತ್ರ ಒಟ್ಟು 8 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಇನ್ನು ನೀನಾಸಂ ಸತೀಶ್ ಅಭಿನಯದ ಅಯೋಗ್ಯ ಸಿನಿಮಾ 3 ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಆದ್ರೆ ದೇಶದಾದ್ಯಂತ ಸದ್ದು ಮಾಡಿದ್ದ ಟಗರು ಚಿತ್ರಕ್ಕೆ ಮೂರೆ ಪ್ರಶಸ್ತಿ ಬಂದಿರುವುದರ ಬಗ್ಗೆ ನಟ ಮತ್ತು ನಿರ್ದೇಶಕ ರಾಘುರಾಮ್ ಗರಂ ಆಗಿದ್ದಾರೆ.

ಟಗರು ಚಿತ್ರಕ್ಕೆ ಮೂರು ಪ್ರಶಸ್ತಿ
ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರಕ್ಕೆ ಮೂರೆ ಅವಾರ್ಡ್ ಬಂದಿದೆ. ದೇಶದಾದ್ಯಂತ ಸದ್ದು ಮಾಡಿದ್ದ ಟಗರು ಚಿತ್ರಕ್ಕೆ ಕೇವಲ ಮೂರು ಪ್ರಶಸ್ತಿ ಬಂದಿರುವುದು ರಘುರಾಮ್ ಬೇಸರಕ್ಕೆ ಕಾರಣವಾಗಿದೆ. ಇದೊಂದು ವ್ಯವಹಾರ ಎಂದು ಕೆಂಡಕಾರಿದ್ದಾರೆ.

ಸೈಮಾ ಪ್ರಶಸ್ತಿ ವಿರುದ್ಧ ಅಸಮಾಧಾನ
"ಪಡೆದುಕೊಳ್ಳೋದು ಸಂಸ್ಕಾರ ಕೆಲವರ ಅವಶ್ಯಕತೆಗೆ ಮಿಕ್ಕವರ ಅನಿವಾರ್ಯತೆಗೆ ಪ್ರಶಸ್ತಿಗಳನ್ನು ಕೊಡೋದು ವ್ಯವಹಾರ. ವಿಶ್ವಾದ್ಯಂತ ಜನಪ್ರಿಯವಾಗಿರೋ ಟಗರು ಚಿತ್ರಕ್ಕೆ ,ಹಾಡಿಗೆ, ಹಾಡುಗಾರನಿಗೆ, ಸಂಗೀತ ನಿರ್ದೇಶಕನಿಗೆ, ಚಿತ್ರಕಥೆಗೆ, ಗುರುತು ಗೌರವ ಸಿಗದೇ ಇರೋದು ಸೈಮಾ ಅವರ ಪಕ್ಷಪಾತದ ನಿರ್ಧಾರ" ಎಂದು ಗುಡುಗಿದ್ದಾರೆ.

ಧನಂಜಯ್ ಗೆ ಪ್ರಶಸ್ತಿ
ಟಗರು ಚಿತ್ರದಲ್ಲಿ ಡಾಲಿ ಆಗಿ ಅಬ್ಬರಿಸಿದ್ದ ನಟ ಧನಂಜಯ್ ಖ್ಯಾತ ವಿಲನ್ ಸೈಮಾ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರಕ್ಕೆ ಗಾಯಕಿ ಮತ್ತು ವಿಮರ್ಶಕರ ನೆಚ್ಚಿನ ನಟಿ ಮಾನ್ವಿತಾ ಅವರಗೆ ಪ್ರಶಸ್ತಿ ಬಂದಿದೆ. ಇನ್ನು ಹೆಚ್ಚಿನ ಪ್ರಶಸ್ತಿ ಬರಬೇಕಿತ್ತು ಎನ್ನುವುದು ರಘುರಾಮ್ ಬೇಸರ. ಟಗರು ಚಿತ್ರದ ಹಾಡುಗಳು ಸಿಕ್ಕಾಪಟ್ಟೆ ಖ್ಯಾತಿಗಳಿಸಿತ್ತು. ಆದ್ರೂ ಸೈಮಾ ಕಡೆಗಣಿಸಿರುವುದು ನೋವಿನ ಸಂಗತಿ ಎನ್ನುವುದು ರಘುರಾಮ್ ಮಾತು.

'ಕೆಜಿಎಫ್' ಗೆ ಎಂಟು ಪ್ರಶಸ್ತಿ
ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೆ ದೇಶ ವಿದೇಶದಲ್ಲಿ ಸದ್ದು ಮಾಡಿದ್ದ 'ಕೆಜಿಎಫ್ ಚಾಪ್ಟರ್-1' ಚಿತ್ರಕ್ಕೆ ಎಂಟು ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ನಟ ಯಸ್, ಅತ್ಯುತ್ತಮ ನಿರ್ದೇಶಕ ಪ್ರಶಾಂತ್ ನೀಲ್, ಅತ್ಯುತ್ತಮ ಸಿನಿಮಟೋಗ್ರಾಫರ್ ಭುವನ್ ಗೌಡ, ಅತ್ಯುತ್ತಮ ಸಂಗೀತ ನಿರ್ದೇಶಕ ರವಿ ಬಸ್ರೂರ್, ಅತ್ಯುತ್ತಮ ಪೋಷಕ ನಟಿ ಅರ್ಚನ, ಅತ್ಯುತ್ತಮ ಪೋಷಕ ನಟ ಅಚ್ಯುತ್ ಕುಮಾರ್ ಮತ್ತು ಹಿನ್ನಲೆ ಗಾಯಕ ಪ್ರಶಸ್ತಿ ಸೇರಿದಂತೆ ಎಂಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.


Click it and Unblock the Notifications











