'ಖಳನಟರಿಗೆ ಪ್ರಶಸ್ತಿ ನೀಡಿದ್ರೆ ಯಾರ ಗಂಟೇನು ಹೋಗಲ್ಲ'
ತೆರೆ ಮೇಲೆ ಅಬ್ಬರಿಸಿ ಬೊಬ್ಬಿರಿಯುವ ''ಖಳನಟರಿಗೂ ಒಂದು ಪ್ರಶಸ್ತಿ ಕೊಡಿ'' ಅಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ರಾಜ್ಯ ಪ್ರಶಸ್ತಿ' ಪಡೆಯುವ ಸುಸಂದರ್ಭದಲ್ಲಿ ಮನವಿ ಇಟ್ಟಿದ್ದರು. ಇದನ್ನ ಪುರಸ್ಕರಿಸಿದ ಸಿ.ಎಂ.ಸಿದ್ದರಾಮಯ್ಯ ತಕ್ಷಣ 'ಓಕೆ' ಅಂದರು.
ಇಲ್ಲಿಂದಲೇ ಗಾಂಧಿನಗರದಲ್ಲಿ ಹೊಸ ವಿವಾದ ಶುರುವಾಗಿದ್ದು. 'ವಿಲನ್ ಗಳಿಗೆ ಪ್ರತ್ಯೇಕ ಪ್ರಶಸ್ತಿ ಬೇಡ' ಅಂತ ಸೀದಾ ಮಾನ್ಯ ಮುಖ್ಯಮಂತ್ರಿಗಳಿಗೆ ನಿರ್ದೇಶಕ ಪಿ.ಶೇಷಾದ್ರಿ ಪತ್ರ ಬರೆದಿದ್ದಾರೆ. ಶೇಷಾದ್ರಿಯ ಈ ನಡೆ ಕನ್ನಡ ಚಿತ್ರರಂಗದ ಹಲವರನ್ನ ಕೆರಳಿಸಿದೆ.

ನವರಸ ನಾಯಕ ಜಗ್ಗೇಶ್, ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಶೇಷಾದ್ರಿ ವಿರುದ್ಧ ಕಿಡಿಕಾರಿದ್ದರು. ಇದೀಗ ನಿರ್ದೇಶಕ ಶಶಾಂಕ್ ಸರದಿ. ''ಸಿನಿಮಾದಲ್ಲಿ ನಾಯಕನಿಗೆ ಎಷ್ಟು ಪ್ರಾಮುಖ್ಯತೆ ಇರುತ್ತದೋ, ಅಷ್ಟೇ ಪ್ರಾಮುಖ್ಯತೆ ವಿಲನ್ ಗಳಿಗೂ ಇರುತ್ತೆ. ಅವರಿಗೂ ಪ್ರಶಸ್ತಿ ನೀಡಬೇಕು.'' ಅಂತ ಶಶಾಂಕ್ ಹೇಳಿದರು. [ಚಾಲೆಂಜಿಂಗ್ ಸ್ಟಾರ್ ಗೆ ಚಾಲೆಂಜ್ ಹಾಕಿದ ಪಿ.ಶೇಷಾದ್ರಿ]
'ಕೃಷ್ಣಲೀಲಾ' ಚಿತ್ರದ ಪ್ರಚಾರ ನಿಮಿತ್ತ 'ಒನ್ ಇಂಡಿಯಾ' ಕಛೇರಿಗೆ ಆಗಮಿಸಿದ ಶಶಾಂಕ್ 'ಉತ್ತಮ ವಿಲನ್' ಪರ ಎದ್ದಿರುವ ವಾದ-ವಿವಾದದ ಬಗ್ಗೆ ಮಾತಿಗಿಳಿದರು. ''ಎಲ್ಲರ ಪ್ರತಿಭೆಯನ್ನೂ ಗುರುತಿಸಬೇಕು. ಪೋಷಕ ನಟರಿಗೆ ನೀಡಿ, ಖಳನಟರಿಗೆ ಪ್ರಶಸ್ತಿ ನೀಡದೇ ಇರುವುದು ಸರಿಯಲ್ಲ. ಪೋಷಕ ನಟರೇ ಬೇರೆ. ಖಳನಟರೇ ಬೇರೆ''

''ಒಬ್ಬ ವಿಲನ್ ಇದ್ದರೆ ಮಾತ್ರ, 'ಹೀರೋ'ಯಿಸಂ ತೋರಿಸುವುದಕ್ಕೆ ಸಾಧ್ಯ. ವಿಲನ್ ಗಳಿಗೆ ಸರ್ಕಾರ ಪ್ರಶಸ್ತಿ ನೀಡಿದ್ರೆ, ಯಾರ ಗಂಟು ಹೋಗುತ್ತೆ? ಅವರುಗಳ ಪ್ರತಿಭೆಯನ್ನ ಗುರುತಿಸಿದಂತಾಗುತ್ತೆ'' ಅಂತ ನಿರ್ದೇಶಕ ಶಶಾಂಕ್ ಹೇಳಿದರು. [ಶೇಷಾದ್ರಿ ವಿರುದ್ಧ 'ನವರಸ ನಾಯಕ'ನ ಟ್ವಿಟ್ಟರ್ ಪ್ರಹಾರ]
ಒಟ್ನಲ್ಲಿ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿರುವ ಈ ವಿವಾದ ಎಲ್ಲಿಗೆ ಬಂದು ತಲುಪುತ್ತೋ ನೋಡೋಣ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











