ದರ್ಶನ್ ಮೇಲೆ ಚಪ್ಪಲಿ ಎಸೆತ, ಶ್ರೀಲೀಲಾ ತಾಯಿ ಗಲಾಟೆ; 2022ರ ಸ್ಯಾಂಡಲ್ವುಡ್ ವಿವಾದಗಳಿವು!

ಕಳೆದೆರಡು ವರ್ಷಗಳಿಂದ ಕೊರೊನಾ ಲಾಕ್ ಡೌನ್ ನಿಯಮದಿಂದಾಗಿ ಕುಗ್ಗಿದ್ದ ಸಿನಿಮಾ ಕ್ಷೇತ್ರ ಸಂಪೂರ್ಣವಾಗಿ ಚೇತರಿಕೆ ಕಂಡದ್ದು 2022ರಲ್ಲಿಯೇ. ಈ ವರ್ಷ ಭಾರತದ ಬರೋಬ್ಬರಿ ಮೂವತ್ತು ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ನೂರು ಕೋಟಿ ಕ್ಲಬ್ ಸೇರಿದ್ದು, ಈ ಪೈಕಿ ಬಹುಪಾಲು ಚಿತ್ರಗಳು ದಕ್ಷಿಣ ಭಾರತದ್ದೇ ಆಗಿವೆ. ಅದರಲ್ಲಿಯೂ ಅತಿಹೆಚ್ಚು ಗಳಿಸಿದ ಚಿತ್ರಗಳ ಪೈಕಿ ಅಗ್ರಸ್ಥಾನವನ್ನು ಕನ್ನಡದ ಕೆಜಿಎಫ್ ಚಾಪ್ಟರ್ 2 ಚಿತ್ರ ಪಡೆದುಕೊಂಡಿದೆ.
ಇನ್ನು ಕನ್ನಡದ ಕೆಜಿಎಫ್ ಚಾಪ್ಟರ್ 2, ಜೇಮ್ಸ್, ವಿಕ್ರಾಂತ್ ರೋಣ, 777 ಚಾರ್ಲಿ ಹಾಗೂ ಕಾಂತಾರ ಚಿತ್ರಗಳು ಈ ವರ್ಷ ನೂರು ಕೋಟಿಗೂ ಅಧಿಕ ಗಳಿಸಿದ ಚಿತ್ರಗಳು ಎನಿಸಿಕೊಂಡವು. ಇವುಗಳ ಜತೆಗೆ ಈ ವರ್ಷ ತೆರೆಕಂಡ ಹಲವಾರು ಕನ್ನಡ ಚಿತ್ರಗಳು ಬಾಕ್ಸ್ ಆಫೀಸ್ ವಿಚಾರವಾಗಿ ಹಾಗೂ ಕಂಟೆಂಟ್ ವಿಚಾರವಾಗಿ ಸದ್ದು ಮಾಡಿದವು.
ಇನ್ನು ಹೆಸರಾಂತ ಐಎಂಡಿಬಿ ಬಿಡುಗಡೆ ಮಾಡಿದ ಜನಪ್ರಿಯ ಚಿತ್ರಗಳ ಟಾಪ್ 10 ಪಟ್ಟಿಯಲ್ಲಿ ಮೂರು ಕನ್ನಡದ ಚಿತ್ರಗಳು ಸ್ಥಾನ ಗಿಟ್ಟಿಸಿಕೊಳ್ಳುವ ಮೂಲಕ ಹೆಮ್ಮೆ ತಂದವು. ಇಷ್ಟೆಲ್ಲಾ ಸಾಧನೆ ಮಾಡಿದ ಕನ್ನಡ ಚಿತ್ರರಂಗ ವಿವಾದಗಳಿಂದಲೂ ಸಹ ಈ ವರ್ಷ ಸಾಕಷ್ಟು ಸುದ್ದಿಗೆ ಒಳಗಾಗಿತ್ತು. ಇತ್ತೀಚೆಗಷ್ಟೆ ಹೊಸಪೇಟೆಯಲ್ಲಿ ನಟ ದರ್ಶನ್ ಮೇಲೆ ಚಪ್ಪಲಿ ಎಸೆತದ ವಿವಾದವೂ ಸೇರಿದಂತೆ ಈ ವರ್ಷ ಕನ್ನಡ ಚಿತ್ರರಂಗದಲ್ಲಿ ಉಂಟಾದ ವಿವಾದಗಳ ಪಟ್ಟಿ ಈ ಕೆಳಕಂಡಂತಿದೆ..

ದರ್ಶನ್ ಅದೃಷ್ಟ ದೇವತೆ ಹೇಳಿಕೆ
ಕ್ರಾಂತಿ ಚಿತ್ರದ ಪ್ರಚಾರದ ಯುಟ್ಯೂಬ್ ಸಂದರ್ಶನಗಳಲ್ಲಿ ಮಾತನಾಡಿದ್ದ ದರ್ಶನ್ "ಅದೃಷ್ಟ ದೇವತೆ ಬಾಗಿಲು ತಟ್ಟುವುದು ಅತಿ ಅಪರೂಪ, ಅಂತ ಸಮಯದಲ್ಲಿ ಬಾಗಿಲು ತೆಗೆದು, ಆಕೆಯನ್ನು ಹಿಡಿದು ರೂಮ್ಗೆ ಕರೆದುಕೊಂಡು ಬಟ್ಟೆ ಬಿಚ್ಚಿ ಕೂರಿಸಿಕೊಂಡುಬಿಡಬೇಕು" ಎಂದು ಹೇಳಿಕೆ ನೀಡಿ ದೊಡ್ಡಮಟ್ಟದ ವಿವಾದವನ್ನು ಎಬ್ಬಿಸಿದ್ದರು. ದರ್ಶನ್ ನೀಡಿದ ಈ ಹೇಳಿಕೆ ಹಲವಾರು ಹಿಂದೂ ಪರ ಹೋರಾಟಗಾರರನ್ನು ಕೆರಳಿಸಿತ್ತು.

ದರ್ಶನ್ರಿಂದ ಬೆದರಿಕೆ ಕರೆ
ಆಗಸ್ಟ್ ತಿಂಗಳಿನಲ್ಲಿ ನಿರ್ಮಾಪಕ ಭರತ್ ವಿಷ್ಣುಕಾಂತ್ ಎಂಬ ನಿರ್ಮಾಪಕ ನಟ ದರ್ಶನ್ ತಮಗೆ ಬೆದರಿಕೆ ಕರೆ ಮಾಡಿದ್ದಾರೆ ಎಂದು ಆರೋಪಿಸಿ ಆಡಿಯೊ ಬಿಡುಗಡೆ ಮಾಡಿ ಕೆಂಗೇರಿ ಠಾಣೆಯಲ್ಲಿ ಪ್ರಕರಣವನ್ನೂ ಸಹ ದಾಖಲಿಸಿದ್ದರು. ಧೃವನ್ ಎಂಬ ನಟನಿಗೆ ಚಿತ್ರ ಮಾಡಲು ಮುಂದಾಗಿದ್ದೆ, ಇದಕ್ಕೆ ಮಧ್ಯ ಪ್ರವೇಶಿಸಿದ್ದ ದರ್ಶನ್ ಬೇರೆ ಕತೆ ಸೂಚಿಸಿ ಇದನ್ನು ದೃವನ್ಗೆ ಮಾಡು ಎಂದಿದ್ದರು, ಹೀಗಾಗಿ ಕತೆ ಹಾಗೂ ನಿರ್ದೇಶಕರ ಬದಲಾವಣೆ ಆಯಿತು, ಆದರೆ ಚಿತ್ರ ಪ್ರಾರಂಭಿಸಲು ಸಾಧ್ಯವಾಗಲಿಲ್ಲ, ಹೀಗಾಗಿ ಧೃವನ್ ದರ್ಶನ್ ಅವರಿಂದ ಕರೆ ಮಾಡಿಸಿ ಬೆದರಿಕೆ ಹಾಕಿಸಿದರು ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಧೃವನ್ ಇದೆಲ್ಲಾ ಸುಳ್ಳು, ಅದೊಂದು ಫೇಕ್ ಆಡಿಯೊ ಎಂದು ಹೇಳಿಕೆ ನೀಡಿದ್ದರು.

ವರಾಹರೂಪಂ ಹಾಡಿನ ವಿವಾದ
ಇನ್ನು ಈ ವರ್ಷದ ಅತಿದೊಡ್ಡ ಹಿಟ್ ಚಿತ್ರಗಳಲ್ಲಿ ಒಂದಾದ ಕಾಂತಾರ ಚಿತ್ರದ ವರಾಹ ರೂಪಂ ಹಾಡಿನ ಟ್ಯೂನ್ ಅನ್ನು ಮಲಯಾಳಂನ ನವರಸಮ್ ಎಂಬ ಆಲ್ಬಂ ಹಾಡಿನಿಂದ ಕದಿಯಲಾಗಿದೆ ಎಂದು ಹಾಡನ್ನು ಸಂಯೋಜಿಸಿದ್ದ ಥೈಕ್ಕುಡಂ ಬ್ರಿಡ್ಜ್ ಆರೋಪ ಮಾಡಿತ್ತು. ಈ ಕುರಿತಾಗಿ ಕೇರಳ ಸ್ಥಳೀಯ ನ್ಯಾಯಾಲಯ ವರಾಹ ರೂಪಂ ಹಾಡನ್ನು ಬಳಸುವಂತಿಲ್ಲ ಎಂದು ತಡೆ ನೀಡಿತ್ತು. ನಂತರ ಓಟಿಟಿಯಲ್ಲಿ ಬಿಡುಗಡೆಯಾದ ಕಾಂತಾರ ಚಿತ್ರದಲ್ಲಿ ವರಾಹ ರೂಪಂ ರಾಗ ಬದಲಾಗಿತ್ತು ಹಾಗೂ ಯುಟ್ಯೂಬ್ನಿಂದಲೂ ಸಹ ಹಾಡನ್ನು ತೆಗೆಯಲಾಗಿತ್ತು. ಇಷ್ಟೆಲ್ಲಾ ಆದ ಬಳಿಕ ಕೇರಳ ಹೈಕೋರ್ಟ್ ವರಾಹ ರೂಪಂ ಹಾಡನ್ನು ಕೃತಿಚೌರ್ಯ ಮಾಡಿ ರಚಿಸಿಲ್ಲ ಎಂದು ತೀರ್ಪನ್ನು ನೀಡಿತು. ಹೊಂಬಾಳೆ ಫಿಲ್ಮ್ಸ್ ಮತ್ತೆ ತನ್ನ ಹಾಡನ್ನು ಪಡೆದುಕೊಂಡಿತು.

ದರ್ಶನ್ ಮೇಲೆ ಚಪ್ಪಲಿ ಎಸೆತ
ಇತ್ತೀಚೆಗಷ್ಟೆ ಹೊಸಪೇಟೆಯಲ್ಲಿ ದರ್ಶನ್ ಕ್ರಾಂತಿ ಚಿತ್ರದ ಎರಡನೇ ಹಾಡನ್ನು ಬಿಡುಗಡೆಗೊಳಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಿಡಿಗೇಡಿ ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದ. ಇದು ಪುನೀತ್ ಅಭಿಮಾನಿಗಳು ಮಾಡಿದ ಕೆಲಸ ಎಂದು ದರ್ಶನ್ ಅಭಿಮಾನಿಗಳು ಆರೋಪಿಸಿ ದೊಡ್ಡ ಫ್ಯಾನ್ ವಾರ್ ಇಂದಿಗೂ ನಡೆಯುತ್ತಿದೆ. ಚಿತ್ರರಂಗದ ಹಲವರು ಇದರ ಬಗ್ಗೆ ಪ್ರತಿಕ್ರಿಯಿಸಿ ದರ್ಶನ್ ಬೆಂಬಲಕ್ಕೆ ನಿಂತರು. ಇದರ ಹಿಂದೆ ಕಾಣದ ಕೈಗಳಿವೆ, ಅಪ್ಪು ಅಭಿಮಾನಿ ಮಾಡದ ಕೆಲಸವಲ್ಲ, ಆದಷ್ಟು ಬೇಗ ಸತ್ಯ ಹೊರಬರಲಿದೆ ಎಂದು ಯುವ ರಾಜ್ಕುಮಾರ್ ಈ ಕುರಿತು ಪ್ರತಿಕ್ರಿಯೆಯನ್ನೂ ಸಹ ನೀಡಿದ್ದರು. ಇಂದಿಗೂ ಈ ವಿವಾದ ಮುಕ್ತಾಯ ಕಂಡಿಲ್ಲ.

ದರ್ಶನ್ vs ಪುನೀತ್ ಫ್ಯಾನ್ಸ್
ಇನ್ನು ಹೊಸಪೇಟೆಯಲ್ಲಿ ದರ್ಶನ್ ಮೇಲೆ ಚಪ್ಪಲಿ ಎಸೆದದ್ದು ಪುನೀತ್ ರಾಜ್ಕುಮಾರ್ ಅಭಿಮಾನಿಗಳೇ ಎಂದು ಸುದ್ದಿಯನ್ನು ಹಬ್ಬಿಸಲಾಯಿತು. ಆದರೆ ಇದಕ್ಕೆ ಸಾಕ್ಷಿ ಮಾತ್ರ ಇರಲಿಲ್ಲ. ಮೂರನೇ ವ್ಯಕ್ತಿ ಮಾಡಿದ ತಪ್ಪನ್ನು ಪುನೀತ್ ಅಭಿಮಾನಿಗಳ ತಲೆಗೆ ಕಟ್ಟುವ ಯತ್ನ ನಡೆದಿದೆ ಎಂದು ಪುನೀತ್ ರಾಜ್ಕುಮಾರ್ ಅಭಿಮಾನಿಗಳು ದರ್ಶನ್ ವಿರುದ್ಧ ಹಾಗೂ ಅವರ ಅಭಿಮಾನಿಗಳ ವಿರುದ್ಧ ಕಿಡಿಕಾರಿದ್ದರು.

ಜೇಮ್ಸ್ಗೆ ಚಿತ್ರಮಂದಿರದ ಸಮಸ್ಯೆ
ಇನ್ನು ಪುನೀತ್ ರಾಜ್ಕುಮಾರ್ ನಟನೆಯ ಜೇಮ್ಸ್ ಬಿಡುಗಡೆ ಬಳಿಕ ಎರಡನೇ ವಾರಕ್ಕೆ ಆರ್ ಆರ್ ಆರ್ ಚಿತ್ರದಿಂದ ಚಿತ್ರಮಂದಿರದ ಸಮಸ್ಯೆಯನ್ನು ಎದುರಿಸಿತ್ತು. ಇದು ವಿವಾದ ಎಬ್ಬಿಸಿತ್ತು, ಚಿತ್ರದ ನಿರ್ಮಾಪಕ ಕಿಶೋರ್ ಹಾಗೂ ನಿರ್ದೇಶಕ ಚೇತನ್ ಚಿತ್ರವನ್ನು ತೆಗೆಯಬೇಡಿ ಎಂದು ಮನವಿ ಇಟ್ಟಿದ್ದರು. ನಂತರ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಶಿವರಾಜ್ಕುಮಾರ್ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಿದರು. ಜೇಮ್ಸ್ ಚಿತ್ರಕ್ಕೆ ತನ್ನ ಚಿತ್ರಮಂದಿರಗಳು ವಾಪಸ್ ಲಭಿಸಿದವು.

ಅಪ್ಪು ಪಪ್ಪು ಖ್ಯಾತಿಯ ಸ್ನೇಹಿತ್ ವಿವಾದ
ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಪುತ್ರ ಸ್ನೇಹಿತ್ ವಿರುದ್ಧ ಅವರ ನೆರೆಮನೆಯ ನಿವಾಸಿಗಳಾದ ರಜತ್ ಗೌಡ ಹಾಗೂ ಪತ್ನಿ ಅನ್ನಪೂರ್ಣ ಕೊಲೆ ಬೆದರಿಕೆ, ಹಲ್ಲೆ ಹಾಗೂ ಅತ್ಯಾಚಾರ ಬೆದರಿಕೆ ದೂರನ್ನು ದಾಖಲಿಸಿದ್ದರು. ಈ ಹಿಂದೆಯೂ ಇದೇ ರೀತಿ ಹಲ್ಲೆ ನಡೆಸಿದ ಎಂಬ ದೂರು ಸ್ನೇಹಿತ್ ವಿರುದ್ಧ ಕೇಳಿಬಂದಿತ್ತು. ಹೀಗೆ ಎರಡನೇ ಬಾರಿ ಸ್ನೇಹಿತ್ ವಿರುದ್ಧ ಆರೋಪ ಕೇಳಿಬಂದದ್ದು ವಿವಾದವನ್ನು ಎಬ್ಬಿಸಿತ್ತು. ಕನ್ನಡದ ಕೆಲ ನಟರು ಸ್ನೇಹಿತ್ ಒಳ್ಳೆಯ ಹುಡುಗ ಎಂದು ಬ್ಯಾಟ್ ಬೀಸಿದ್ದರು ಹಾಗೂ ಸ್ನೇಹಿತ್ ತಂದೆ ತಾಯಿ ಈ ಕುರಿತು ಪತ್ರಿಕಾಗೋಷ್ಠಿಯನ್ನೂ ಸಹ ನಡೆಸಿದ್ದರು.

ಚೇತನ್ ಬಂಧನ
ಇನ್ನು ಚೇತನ್ ನ್ಯಾಯಾಧೀಶರವನ್ನು ನಿಂದಿಸಿದ ಕಾರಣಕ್ಕಾಗಿ ಬಂಧನಕ್ಕೊಳಗಾಗಿದ್ದರು. ಯಾವುದೇ ನೋಟಿಸ್ ನೀಡದೇ ಚೇತನ್ ಮನೆಗೆ ನುಗ್ಗಿದ್ದ ಪೊಲೀಸರು ಚೇತನ್ ಅವರನ್ನು ಠಾಣೆಗೆ ಎಳೆದೊಯ್ದಿದ್ದರು. ಈ ಘಟನೆ ನಡೆದ ಬಳಿಕ ಚೇತನ್ ಪತ್ನಿ ಫೇಸ್ಬುಕ್ ಲೈವ್ ಬಂದು ಕಿಡಿಕಾರಿದ್ದರು. ಇದಷ್ಟೇ ಅಲ್ಲದೇ ಚೇತನ್ ಅವರ ಇನ್ನಷ್ಟು ಹೇಳಿಕೆಗಳೂ ಸಹ ಈ ವರ್ಷ ವಿವಾದ ಹುಟ್ಟುಹಾಕಿದ್ದವು.

ಹೆಡ್ ಬುಷ್
ಡಾಲಿ ಧನಂಜಯ್ ನಟಿಸಿದ್ದ ಡಾನ್ ಜಯರಾಜ್ ಬಯೋಪಿಕ್ ಚಿತ್ರ ಹೆಡ್ ಬುಷ್ನಲ್ಲಿ ವೀರಗಾಸೆಗೆ ಅವಮಾನ ಮಾಡಿದ್ದಾರೆ ಹಾಗೂ ಕರಗದ ಬಗ್ಗೆ ಹಗುರವಾಗಿ ಮಾತನಾಡಿ ಹೀಯಾಳಿಸಿದ್ದಾರೆ ಎಂಬ ಆರೋಪ ದೊಡ್ಡ ಮಟ್ಟದಲ್ಲಿ ಕೇಳಿಬಂದಿತ್ತು. ಚಿತ್ರ ಪ್ರದರ್ಶನವನ್ನು ನಿಲ್ಲಿಸಬೇಕು ಎಂದು ಪ್ರತಿಭಟನೆ ಮಾಡಲಾಗಿತ್ತು, ಚಿತ್ರದ ಪೋಸ್ಟರ್ ಹಾಗೂ ಕಟ್ ಔಟ್ಗಳನ್ನು ಧ್ವಂಸ ಮಾಡಲಾಗಿತ್ತು.

ಅಶ್ಲೀಲ ವಿಡಿಯೊ ಆರೋಪ
ಇನ್ನು ರಂಗಭೂಮಿಯ ಹಿರಿಯ ಕಲಾವಿದ ಹಾಗೂ ಚಲನಚಿತ್ರ ನಟ ಡಿಂಗ್ರಿ ನಾಗರಾಜ್ ವಿರುದ್ಧ ನಟಿ ರಾಣಿ ಅಶ್ಲೀಲ ವಿಡಿಯೊ ಕಳುಹಿಸಿದ ಆರೋಪ ಮಾಡಿದ್ದರು. ಈ ಆರೋಪ ಸಹ ಎರಡ್ಮೂರು ದಿನಗಳ ಕಾಲ ವಿವಾದವನ್ನು ಎಬ್ಬಿಸಿತ್ತು.

ಶ್ರೀಲೀಲಾ ತಾಯಿ ವಿವಾದ
ಮಧುಕರ್ ಅಂಗೂರ್ ಹಾಗೂ ಶ್ರೀಲೀಲಾ ತಾಯಿ ಸ್ವರ್ಣಲತಾ ಹಲವಾರು ಬೌನ್ಸರ್ಸ್ ಜತೆ ಸೆಪ್ಟೆಂಬರ್ 10ರಂದು ಅಲಯನ್ಸ್ ಕಾಲೇಜಿಗೆ ನುಗ್ಗಿ ಮುಂದಿನ ಚ್ಯಾನ್ಸಲರ್ ನಾವೇ ಎಂದು ಸಿಬ್ಬಂದಿಗೆ ಗದರಿದ ಘಟನೆ ನಡೆದಿದೆ ಎಂದು ಅಲ್ಲಿನ ಸಿಬ್ಬಂದಿ ನಿವೇದಿತಾ ಜೈನ್ ಎಂಬುವವರು ಆನೇಕಲ್ ಪೊಲೀಸರಿಗೆ ದೂರು ನೀಡಿದ್ದರು. ಶ್ರೀಲೀಲಾ ತಾಯಿ ಯೂನಿವರ್ಸಿಟಿ ಕ್ಯಾಂಪಸ್ ಒಳಗೆ ನುಗ್ಗಿ ಸಿಬ್ಬಂದಿಗೆ ಹೊಡೆದು ದಾಂಧಲೆ ಮಾಡಿದ್ದ ದೃಶ್ಯಗಳೂ ಸಹ ಹರಿದಾಡಿದ್ದವು.


Click it and Unblock the Notifications











